ಐಜಿಪಿ ಮೊಬೈಲ್ ಸಂಭಾಷಣೆ: ವರದಿ ಕೇಳಿದ ರಾಮಲಿಂಗಾರೆಡ್ಡಿ
ಬೆಂಗಳೂರು, ಜನವರಿ 19: ವಿಜಯಪುರದ ಬಾಲಕಿ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ಐಜಿಪಿ ರಾಮಚಂದ್ರರಾವ್ ಮಾತನಾಡಿದ್ದಾರೆ ಎನ್ನಲಾದ ಮೊಬೈಲ್ ಸಂಭಾಷಣೆ ಕುರಿತಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ವರದಿ ಕೇಳಿದ್ದಾರೆ.
ವಿಧಾನಸೌಧದಲ್ಲಿ ಸುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು,ಐಜಿಪಿ ರಾಮಚಂದ್ರರಾವ್ ಅವರು ಮೊಬೈಲ್ ಸಂಭಾಷಣೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ನಡೆದಿಲ್ಲ ಅದೊಂದು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಗಿರುವ ಸಾವು ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೋ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಡಿಜಿಪಿ ನೀಲಮಣಿ ರಾಜು ಅವರಿಗೆ ಹೇಳಲಾಗಿದೆ ಎಂದು ಹೇಳಿದರು.
ಈ ಪ್ರಕರಣದ ಕುರಿತಂತೆ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ನೋಡಿದ್ದೇನೆ ಆದರೆ ಐಜಿಪಿ ರಾಮಚಂದ್ರರಾವ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ನಮಗಿನ್ನು ದೊರೆತಿಲ್ಲ.ಈ ಬಗ್ಗೆ ಅಧಿಕಾರಿಗಳಿಂದ ಇನ್ನಷ್ಟು ಮಾಹಿತಿ ಪಡೆದು ನಾಳೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಕಳೆದ ತಿಂಗಳು ಸಿದ್ದರಾಮಯ್ಯ ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅದೇ ದಿನ ಬಾಲಕಿ ಯ ಮೇಲೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಿಂದ ಕಿಡ್ನ್ಯಾಪ್ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅತ್ಯಾಚಾರದ ಬಳಿಕ ಬಾಲಕಿ ಮೃತಪಟ್ಟಿದ್ದಳು. ಈ ಪ್ರಕರಣ ಕುರಿತಂತೆ ರಾಜ್ಯಾದ್ಯಂತ ಭಾರಿ ಹೋರಾಟ ನಡೆದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸಲಾಗಿತ್ತು.
ಸಿಓಡಿ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಐಜಿಪಿ ರಾಮಚಂದ್ರರಾವ್ ಅವರು ಘಟನೆ ಕುರಿತಂತೆ ವ್ಯತಿರಿಕ್ತ ಹೇಳಿಕೆ ನೀಡಿರುವುದು ಇದೀಗ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತಿರುವು ಸಿಕ್ಕಂತಾಗಿದೆ.
ಈ ಪ್ರಕರಣದಲ್ಲಿ ಬಾಲಕಿ ಒಂದಕ್ಕಿಂತ ಹೆಚ್ಚು ಯುವಕರ ಜತೆಗೆ ಸಂಬಂಧ ಹೊಂದಿದ್ಳು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಸಮೀಪದ ಮನೆಯೊಂದರಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಅಕಸ್ಮಾತಾಗಿ ಸಾವನ್ನಪ್ಪಿದ್ದಾಳೆ ಎಂದು ಐಜಿಪಿ ರಾಮಚಂದ್ರರಾವ್ ಭಾಸ್ಕರ್ ಪ್ರಸಾದ್ ಎಂಬ ದಲಿತ ಸಂಘಟನೆ ಮುಖಂಡರೊಬ್ಬರ ಬಳಿ ಮಾತನಾಡುವಾಗ ಬಹಿರಂಗ ಪಡಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಈ ಹಿನ್ನೆಲೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಕರಣ ಕುರಿತಂತೆ ಸಮಗ್ರ ವರದಿಯನ್ನು ಡಿಜಿಪಿ ನೀಲಮಣಿ ರಾಜು ಅವರಿಂದ ಕೇಳಿದ್ದಾರೆ.