ವೇಗದ ವಾಹನ ತಪಾಸಣೆ ಮಾಡುತ್ತಿದ್ದ ಪೇದೆ ಕಾರು ಗುದ್ದಿ ಸಾವು
ಬೆಂಗಳೂರು, ಫೆಬ್ರವರಿ 09 : ಅತಿ ವೇಗದ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸ್ ಮುಖ್ಯಪೇದೆ ಕಾರು ಗುದ್ದಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತಪಟ್ಟವರನ್ನು ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ಮುಖ್ಯ ಪೇದೆ ಧನಂಜಯ (40) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಪೇದೆ ಉಮಾಮಹೇಶ್ವರ್ (28) ಎಂಬುವವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಣ್ಣಿಲ್ಲದ ಪತ್ನಿಗೆ ಕಣ್ಣು ನೀಡಿ, ಕಣ್ಮುಚ್ಚಿದ ಪೊಲೀಸ್ ಪೇದೆ...
ಶನಿವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಧನಂಜಯ ಇತರ ಇಬ್ಬರು ಸಿಬ್ಬಂದಿಗಳ ಜೊತೆ ಇಂಟರ್ ಸೆಪ್ಟರ್ ಮೂಲಕ ವಾಹನಗಳ ವೇಗದ ತಪಾಸಣೆಯನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ.
ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಕೇಸ್; ಪೊಲೀಸ್ ಪೇದೆ ಬಲಿ
ತೀವ್ರಗಾಗಿ ಗಾಯಗೊಂಡ ಧನಂಜಯ ಮತ್ತು ಉಮಾಮಹೇಶ್ವರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಧನಂಜಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಉಮಾಮಹೇಶ್ವರ್ ಚೇತರಿಸಿಕೊಳ್ಳುತ್ತಿದ್ದಾರೆ.
ಕಾಶ್ಮೀರಿ ಯುವತಿಗೆ ಬೆಂಗಳೂರಲ್ಲಿ ಉದ್ಯೋಗ ಸಿಗಲು ಪೊಲೀಸ್ ಪೇದೆ ಕಾರಣ
ಕಾರು ಚಾಲಕನನ್ನು ಕುಶಾಲ್ ರಾಜ್ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಸುಲ್ತಾನ್ ಪೇಟೆಯಲ್ಲಿ ಬಟ್ಟೆ ಅಂಗಡಿಯನ್ನು ಅವರು ಹೊಂದಿದ್ದಾರೆ. ಶನಿವಾರ ಸಂಜೆ ಅವರು ಮುಂಬೈಗೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು.
7.10ಕ್ಕೆ ವಿಮಾನವಿತ್ತು ತಡವಾಗುವ ಕಾರಣ ಐ 10 ಕಾರಿನಲ್ಲಿ ವೇಗವಾಗಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸರಿಗೆ ಡಿಕ್ಕಿ ಹೊಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಪತ್ನಿ ಮತ್ತು ಮಕ್ಕಳ ಜೊತೆ ಧನಂಜಯ ನೆಲೆಸಿದ್ದರು. ಧನಂಜಯ ಪತ್ನಿ ಅನಸೂಯ ಅವರು ಸಹ ಪೊಲೀಸ್ ಪೇದೆಯಾಗಿದ್ದು, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.