ಕಣ್ಣಿಲ್ಲದ ಪತ್ನಿಗೆ ಕಣ್ಣು ನೀಡಿ, ಕಣ್ಮುಚ್ಚಿದ ಪೊಲೀಸ್ ಪೇದೆ...
ಬೆಂಗಳೂರು, ಫೆಬ್ರವರಿ 4: ಅಪಘಾತದಲ್ಲಿ ಮೃತಪಟ್ಟಿದ್ದ ಪೊಲೀಸ್ ಹೆಡ್ಕಾನ್ಸ್ಟೆಬಲ್ ಒಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದ ಪ್ರಸಂಗ ಮಂಗಳವಾರ ಬೆಂಗಳೂರಿನಲ್ಲಿ ನಡೆದಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಭಕ್ತರಾಮ್ (42) ಅವರು, ಸೋಮವಾರ ರಾತ್ರಿ ನಗರದ ಎಂಇಎಸ್ ಪೈಪ್ಲೈನ್ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುವಾಗ ಅಪಘಾತಕ್ಕಿಡಾಗಿದ್ದರು. ತಕ್ಷಣವೇ ಅವರನ್ನು ಪೀಪಲ್ ಟ್ರೀ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಭಕ್ತರಾಮ್ ಕೊನೆಯುಸಿರೆಳೆದರು.
ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಕೇಸ್; ಪೊಲೀಸ್ ಪೇದೆ ಬಲಿ
ಸೋಮವಾರ ರಾತ್ರಿ ತಾವು ಬದುಕುವುದಿಲ್ಲ ಎಂಬುದನ್ನು ಅರಿತ ಭಕ್ತರಾಮ್ ಅವರು ವೈದ್ಯರಿಗೆ ತಮ್ಮ ಕಣ್ಣುಗಳನ್ನು ದಾನ ಮಾಡಬೇಕು ಎಂದು ಕೇಳಿಕೊಂಡಿದ್ದರು. ಅವರು ಮೃತಪಟ್ಟ ನಂತರ ಅವರ ಎರಡೂ ಕಣ್ಣುಗಳನ್ನು ದಾನ ಮಾಡಲಾಗಿದೆ. ವಿಶೇಷವೆಂದರೆ ದೃಷ್ಟಿದೋಷದಿಂದ ಬಳಲುತ್ತಿದ್ದ ಭಕ್ತರಾಮ್ ಅವರ ಪತ್ನಿ ಸುಮಂಗಲಾ ಅವರಿಗೇ ಭಕ್ತರಾಮ್ ಅವರ ಕಣ್ಣುಗಳನ್ನು ಅಳವಡಿಸಲಾಗಿದೆ.
ಭಕ್ತರಾಮ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ''ಭಕ್ತರಾಮ್ ಅವರನ್ನು ಕಳೆದುಕೊಂಡಿರುವುದು ಅತೀವ ದುಃಖ ತರಿಸಿದೆ. ಆದರೆ, ಅವರು ಸಾವಿನಲ್ಲೂ ತಮ್ಮ ಕಣ್ಣುಗಳನ್ನು ನೀಡಿ ಹೋಗಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ'' ಎಂದು ಕೊಂಡಾಡಿದ್ದಾರೆ. ಅಪಘಾತವಾದ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.