ಬಸವನಗುಡಿ ಕ್ಷೇತ್ರದಲ್ಲಿ ಶಾಂತಲಾ ಭರ್ಜರಿ ಪ್ರಚಾರ
ಬೆಂಗಳೂರು, ಮಾ. 9 : ಮಾರ್ಚ್ 9ರಂದು ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಅಂಗವಾಗಿ ಬಸವನಗುಡಿ ಹಾಗೂ ಬೆಂಗಳೂರಿನ ಮತ್ತಿತರ ಕಡೆಗಿನ ಮಹಿಳೆಯರು ಸೇರಿ ಲೋಕಸತ್ತಾ ಪಕ್ಷದ ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಶಾಂತಲಾ ದಾಮ್ಲೆ ಜೊತೆ ಮಹಿಳಾ ಪಾದಯಾತ್ರೆಯನ್ನು ಕೈಗೊಂಡರು.
ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಪಾತ್ರದ ಮಹತ್ವದ ಬಗ್ಗೆ ಮಾತನಾಡುತ್ತಾ, ಮಹಿಳೆಯರ ರಕ್ಷಣೆಗೆ ಶಾಸನ ಮಾಡಲು ಮಹಿಳೆಯರೇ ಮುಂದೆ ಬಂದು ರಾಜಕೀಯವನ್ನು ಪ್ರವೇಶಿಸಬೇಕು. ನೈತಿಕ ರಾಜಕೀಯಕ್ಕಾಗಿ ಮಹಿಳೆಯರ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳೆಯರೆಲ್ಲ ಬೆಂಬಲಿಸಬೇಕು ಎಂದು ಶಾಂತಲಾ ದಾಮ್ಲೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಪುರುಷರು ಕೂಡ ಬೆಂಬಲವನ್ನು ಸೂಚಿಸಲು 'ವಿ ಮೆನ್ ಫಾರ್ ವುಮೆನ್' (We-Men For Women) ಎಂಬ ಘೋಷಣೆಗಳನ್ನು ಕೂಗಿ ಗಮನ ಸೆಳೆದರು. ನೈತಿಕ ರಾಜಕಾರಣದ ಮಹತ್ವವನ್ನು ಸಾರುತ್ತಾ 50 ಮಹಿಳೆಯರು ಎನ್.ಆರ್.ಕಾಲೋನಿ ಬಸ್ ನಿಲ್ದಾಣದಿಂದ, ಬಿ.ಎಂ.ಎಸ್. ಮಹಿಳಾ ವಿದ್ಯಾಲಯದವರೆಗೆ ಪಾದಯಾತ್ರೆಯನ್ನು ನಡೆಸಿದರು.
ನಾಗರಿಕ ಹಕ್ಕು ಕಾರ್ಯಕರ್ತೆ ಮೀರಾ ಮುಕುಂದ್ ಮತ್ತು ಚುನಾವಣೆ ಪ್ರಚಾರ ನೇತೃತ್ವ ವಹಿಸಿರುವ ರೇಖಾ ಮಲ್ಲಂಪಲ್ಲಿ ಅವರು ಡಿವಿ ಗುಂಡಪ್ಪ ರಸ್ತೆಯಲ್ಲಿ ಪ್ರತಿ ಅಂಗಡಿಗೂ ಭೇಟಿ ನೀಡಿ ಭ್ರಷ್ಟಾಚಾರ ವಿರೋಧಿಸುವ ಅಭ್ಯರ್ಥಿಗೆ ಮುಂದಿನ ಚುನಾವಣೆಯಲ್ಲಿ ಮತಹಾಕಿ ಬೆಂಬಲ ನೀಡಬೇಕೆಂದು ಕೋರಿದರು.
ಲೋಕ ಸತ್ತಾ ಪಕ್ಷದ ನಡಿಗೆ ನೈತಿಕ ರಾಜಕೀಯದ ಕಡೆಗೆ, ಸಾಕು ಸಾಕು ಭ್ರಷ್ಟಾಚಾರ ಸಾಕು ಬೇಕು ಬೇಕು ಶಾಂತಲಾ ಬೇಕು, ಸಬಲ ನಾರಿ ಸಂಮೃದ್ಧ ನಾಡು ಎಂಬಿತ್ಯಾದಿ ಘೋಷಣೆಗಳು ಪಾದಯಾತ್ರೆಯುದ್ದಕ್ಕೂ ಮೊಳಗುತ್ತಿದ್ದವು. ಮಹಿಳೆಯರೇ ಮಹಿಳೆಯರಿಗೆ ಬೆಂಬಲ ಸೂಚಿಸುವ ಮುಖಾಂತರ ವಿಶ್ವ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ