ಈಶ್ವರಪ್ಪಗೆ 48 ಗಂಟೆಗಳ ಗಡುವು ನೀಡಿದ ವೀರಶೈವರು
ಒಂದೆಡೆ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಅವರು ಯಡಿಯೂರಪ್ಪ ಬೆಂಬಲಿಗರ ಮೇಲೆ ತೆಗೆದುಕೊಂಡಿರುವ ಕ್ರಮ ಹಾಗೂ ನೀಡಿರುವ ಹೇಳಿಕೆಗಳನ್ನು ವಿಶ್ಲೇಷಿಸಲು ಸೋಮವಾರ (ಸೆ.24) ಯಡಿಯೂರಪ್ಪ ಅವರು ತಮ್ಮ ಆಪ್ತರೊಡನೆ ಸಭೆ ಸೇರಲಿದ್ದಾರೆ.
ಇನ್ನೊಂದೆಡೆ ಈ ಇಬ್ಬರು ನಾಯಕರ ಸಮರದಲ್ಲಿ ಆಯನೂರು ಮಂಜುನಾಥ್ ಪರ ವೀರಶೈವ ಪರಿಷತ್ ಸೇರಿಕೊಂಡಿದ್ದು, ಈಶ್ವರಪ್ಪ ಅವರಿಗೆ 48 ಗಂಟೆಗಳ ಗಡುವು ನೀಡಿರುವ ಪ್ರಸಂಗವೂ ಜರುಗಿದೆ.
ಆಯನೂರು ಮಂಜುನಾಥ್ ಅವರನ್ನು ವಜಾಗೊಳಿಸಿರುವುದು ಪಕ್ಷದ ಆಂತರಿಕ ವಿಚಾರ. ಎಲ್ಲವನ್ನೂ ಮಾಧ್ಯಮಗಳೊಂದಿಗೆ ಚರ್ಚೆ ಮಾಡಲಾಗುವುದು. ನಮ್ಮ ಪಕ್ಷ ನಮ್ಮ ಇಷ್ಟ ಎಮ್ದು ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಕಿಡಿಕಾರಿದರು.
ಬಿಜೆಪಿ ವಿದ್ಯಮಾನಗಳನ್ನು ವೈಭವೀಕರಿಸಿ ಪ್ರಸಾರ ಮಾಡುವುದು ಕೆಲ ಮಾಧ್ಯಮಗಳಿಗೆ ನಿತ್ಯದ ಕಸುಬಾಗಿದೆ. ನಮ್ಮ ಪಕ್ಷದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರು.
ವೀರಶೈವರ ಡೆಡ್ ಲೈನ್: ರಾಜ್ಯ ಬಿಜೆಪಿ ವಕ್ತಾರ ಪ್ರಮಾಣಿಕ ವೀರಶೈವ ಮುಖಂಡ ಆಯನೂರು ಮಂಜುನಾಥ್ ಅವರನ್ನು ವಜಾ ಮಾಡಿ ಆದೇಶ ಹೊರಡಿಸಿರುವುದು ಸರಿಯಿಲ್ಲ. ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಎರಡು ದಿನದೊಳಗಾಗಿ ವಜಾ ಆದೇಶವನ್ನು ಹಿಂಪಡೆಯುವಂತೆ ಗಡುವು ನೀಡಲಾಗಿದೆ ಎಂದು ವೀರಶೈವ ಪರಿಷತ್ ಮುಖಂಡರು ಹೇಳಿದ್ದಾರೆ.
ಈಶ್ವರಪ್ಪ ಅವರು ವಜಾ ಆದೇಶ ಹಿಂಪಡೆಯದಿದ್ದರೆ ಅವರ ಮನೆ ಮುಂದೆ ವೀರಶೈವ ಸಮುದಾಯದವರು ಪ್ರತಿಭಟನೆ ನಡೆಸಲಾಗುವುದು. ಕೇವಲ ಮಾಧ್ಯಮ ವರದಿಗಳ ಆಧಾರದ ಮೇಲೆ ಬಿಜೆಪಿಯ ಪ್ರಮಾಣಿಕ ನಾಯಕ ಆಯನೂರು ಮಂಜುನಾಥ್ ಅವರನ್ನು ವಜಾ ಮಾಡಲಾಗಿದೆ.
ಯಾವುದೇ ನೋಟಿಸ್ ಜಾರಿ ಮಾಡದೆ, ಸರಿಯಾದ ಕಾರಣವನ್ನೂ ಹೇಳದೆ ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೈಗೊಂಡಿರುವ ಕ್ರಮ ಖಂಡನೀಯ. ಇದು ವೀರಶೈವರನ್ನು ಹತ್ತಿಕ್ಕುವ ಹುನ್ನಾರವಾಗಿದೆ ಎಂದು ಕರ್ನಾಟಕ ವೀರಶೈವ ಪರಿಷತ್ ಅಧ್ಯಕ್ಷ ಎಂ.ಎಸ್ ಅಂಗಡಿ ಹೇಳಿದ್ದಾರೆ.
ಈ ಹಿಂದೆ ಪಕ್ಷದ ವಿರುದ್ಧ ಅನೇಕ ಶಾಸಕರು, ಸಚಿವರು ಹೇಳಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಈಶ್ವರಪ್ಪ ನವರು, ಈಗ ಏಕಾಏಕಿ ಆಯನೂರು ಮಂಜುನಾಥ್ ಅವರನ್ನು ವಕ್ತಾರ ಸ್ಥಾನದಿಂದ ಕೆಳಗಿಳಿಸಿದ್ದು ಖಂಡನೀಯ.ಇದು ಈಶ್ವರಪ್ಪ ಅವರ ವೀರಶೈವ ವಿರೋಧಿ ಧೋರಣೆ ತೋರಿಸುತ್ತದೆ ಎಂದು ಅಂಗಡಿ ಹೇಳಿದರು.
ಆಯನೂರು ಮಂಜುನಾಥ್ ರಂಥ ಪ್ರಾಮಾಣಿಕರನ್ನು ವಜಾಗೊಳಿಸಿರುವುದು ವೀರಶೈವರಲ್ಲಿ ಬೇಸರ ಮೂಡಿಸಿದೆ. 48 ಗಂಟೆಯೊಳಗೆ ವಜಾ ಆದೇಶ ಹಿಂಪಡೆಯದಿದ್ದರೆ ಮುಂದಿನ ಅನಾಹುತಕ್ಕೆ ನಾವು ಹೊಣೆಯಲ್ಲ ಎಂದು ಅಂಗಡಿ ಅವರು ಎಚ್ಚರಿಕೆ ನೀಡಿದ್ದಾರೆ.