ರಾಜಕೀಯ ಗುರು ಯಡಿಯೂರಪ್ಪ ವಿರುದ್ಧವೇ ತೊಡೆ ತಟ್ಟಿದ ಮಾಜಿ ಶಾಸಕ: ರಾಘವೇಂದ್ರಗೆ ಬಿಸಿ ತುಪ್ಪ
ಶಿವಮೊಗ್ಗ, ಮಾರ್ಚ್ 19: ಬೈಂದೂರು ಮಾಜಿ ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಗುರು ಮಾಜಿ ಸಿಎಂದ ಬಿ.ಎಸ್ ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ.
ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರಕ್ಕೆ ಸಿದ್ಧರಾಗಿರುವುದು ಬಿ.ವೈ ರಾಘವೇಂದ್ರಗೆ ಬಿಸಿ ತುಪ್ಪವಾಗಿದೆ. ಏಕೆಂದರೆ ಬೈಂದೂರು ವಿಧಾನಸಭಾ ಕ್ಷೇತ್ರ ಮೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುನ್ನಡೆ ನೀಡಿತ್ತು. ಹೀಗಾಗಿ ಬೈಂದೂರಿನಲ್ಲಿ ಬಿಜೆಪಿ ವಿರೋಧಿ ಅಲೆ ಸೃಷ್ಟಿಯಾದರೆ ಬಿ.ವೈ ರಾಘವೇಂದ್ರ ಗೆಲುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಾಂಗ್ರೆಸ್ ಸೇರ್ಪಡೆ ಹಾಗೂ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಮಾಜಿ ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ, "ಈ ಹಿಂದೆ ಬೈಂದೂರಿನಲ್ಲಿ ಭಾರೀ ಅಂತರದಿಂದ ರಾಘವೇಂದ್ರ ಅವರನ್ನು ಗೆಲ್ಲಿಸಿದ್ದೇವೆ. ಕಳೆದ ಎರಡು ಚುನಾವಣೆಯಲ್ಲಿ 14 ಸಾವಿರ ಲೀಡ್ ಇತ್ತು. ಕಳೆದ ಬಾರಿ 75 ಸಾವಿರ ಲೀಡ್ ಕೊಟ್ಟಿದ್ದೇವೆ. ಈ ಬಾರಿ ಬೈಂದೂರಿನಲ್ಲಿ 14 ಸಾವಿರಕ್ಕಿಂತ ಹೆಚ್ಚು ಮತ ಬಿಜೆಪಿಗೆ ಸಿಗಲ್ಲ" ಎಂದಿದ್ದಾರೆ.
"ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ದುಡಿದವರನ್ನು ಗುರುತಿಸಿಲ್ಲ. ಪ್ರಾಮಾಣಿಕರು ಪಕ್ಷ ಬಿಟ್ಟು ಹೊರಗೆ ಹೋಗುವಂತಾಗಿದೆ. ಚುನಾವಣೆ ನಡೆದು 9 ತಿಂಗಳಾದರೂ ನನ್ನನ್ನು ಯಾರು ಮಾತನಾಡಿಸಿಲ್ಲ. ಕಾಂಗ್ರೆಸ್ನವರು ಆಹ್ವಾನಿಸಿದರು ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ಕಾಂಗ್ರೆಸ್ಗೆ ಅತಿ ಹೆಚ್ಚು ಮತ ಬೀಳುವಂತೆ ಮಾಡುತ್ತೇನೆ" ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದರು.

"ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಹೋರಾಟ ಇದೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಿಜೆಪಿ ಪಕ್ಷ ಕಟ್ಟಿದ ನಾಯಕ ಅವರಿಗೂ ಬೇಸರವಾಗಿದೆ. ಈಶ್ವರಪ್ಪ ಸ್ಪರ್ಧಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಈಶ್ವರಪ್ಪ ಹಿಂದುತ್ವದ ಮತ ಪಡೆದರೆ, ರಾಘವೇಂದ್ರ ಮೂರನೇ ಸ್ಥಾನಕ್ಕೆ ಹೋಗುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಉಡುಪಿಯಲ್ಲಿ ಬಿಎಮ್ ಸುಕುಮಾರ್ ಶೆಟ್ಟಿ ಹೇಳಿದ್ದಾರೆ.











Click it and Unblock the Notifications