ರಾಜೀನಾಮೆ ಕೊಟ್ಮೇಲೆ ಗೌಡರು ಏನು ಹೇಳಿದರು?
'ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿ ಪಕ್ಷದ ಬಲವರ್ಧನೆಗೆ ಇನ್ನೂ ಹೆಚ್ಚಿನ ಶಕ್ತಿ ತುಂಬುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಕೈಗೊಂಡ ತೀರ್ಮಾನಕ್ಕೆ ಒಪ್ಪಿ ನಾನು ರಾಜೀನಾಮೆ ನೀಡಿದ್ದೇನೆ. ನಾಯಕತ್ವ ಬದಲಾವಣೆಯಿಂದ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಪಕ್ಷ ನಂಬಿದೆ. ನಾನು ಅದರಂತೆ ನಡೆಯುತ್ತೇನೆ.'
ಪಕ್ಷದ ಹಿರಿಯ ನಾಯಕ ಜಗದೀಶ್ ಶೆಟ್ಟರು ಅವರಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಮುಂದಿನ ಮುಖ್ಯಮಂತ್ರಿ 10 ತಿಂಗಳು ಅವಕಾಶವಿರುತ್ತದೆ. ಈ ಅವಧಿಯಲ್ಲಿ ಪಕ್ಷದ ಏಳಿಗೆಗಾಗಿ ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಸಹಕರಿಸುತ್ತೇನೆ. ನಾನು ಈಗ ಹೆಚ್ಚು ನಿರಾಳವಾಗಿದ್ದೇನೆ.
11 ತಿಂಗಳು 5 ದಿನ ಭ್ರಷ್ಟಾಚಾರ ರಹಿತ ಅಧಿಕಾರ ನಡೆಸಿದ ತೃಪ್ತಿಯಿದೆ. ನನ್ನ ಆಡಳಿತದ ಬಗ್ಗೆ ಪಕ್ಷದ ಹಿರಿಯ ನಾಯಕರು, ಸಂಘ ಪರಿವಾರ ಅದರಲ್ಲೂ ವಿಶೇಷವಾಗಿ ಎಲ್ ಕೆ ಅಡ್ವಾಣಿ ಅವರು ಮೆಚ್ಚುಗೆಯ ಮಾತನ್ನಾಡಿರುವುದು ನನಗೆ ತುಂಬಾ ಸಂತಸ ತಂದಿದೆ.
ನನಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಸುಳ್ಯ, ಪುತ್ತೂರು, ಮಂಗಳೂರು ಹಾಗೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರಗಳಿಂದ ನನ್ನನ್ನು ಜನ ಆರಿಸಿ ಕಳಿಸಿದ್ದಕ್ಕೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಕೈಗೊಳ್ಳುವ ನಿರ್ಣಯದಂತೆ ನಾನು ನಡೆಯುತ್ತೇನೆ.
ದೆಹಲಿ ಮಾಧ್ಯಮ ಮಿತ್ರರಿಗೆ ನನ್ನ ಧನ್ಯವಾದ ಅರ್ಪಿಸಬೇಕು. ಪ್ರತಿ ಸಾರಿ ಬಂದಾಗಲೂ ಹೆಚ್ಚು ಮುಜುಗರವಾಗದಂತೆ ನಗು ನಗುತ್ತಾ ಪ್ರಶ್ನೆಗಳನ್ನು ಕೇಳಿದ್ದಾರೆ. ನನ್ನ ನಗುವನ್ನು ಹೆಚ್ಚಿಸಿದ್ದಾರೆ ಎಂದರು.
ಬಿಜೆಪಿ ಪಕ್ಷ ಈಗ ಜಾತಿ, ವ್ಯಕ್ತಿ ಪ್ರಾತಿನಿಧ್ಯಕ್ಕೆ ಬೆಲೆ ಕೊಡುತ್ತಿದೆ ಎನಿಸುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸದಾನಂದ, ಜಾತಿ ದೊಡ್ಡ ಸಂಗತಿ ಏನಲ್ಲ. ಹೈಕಮಾಂಡ್ ನಿರ್ಧಾರ ಸೂಕ್ತವಾಗಿದೆ. ಜಾತಿಗಿಂತ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದರು.
ಸಂಘ ಪರಿವಾರ ನನ್ನ ಮೊದಲಗುರು ನನ್ನ ಶಿಸ್ತು, ಸಂಯಮ, ಉತ್ತಮ ಆಡಳಿತ ಎಲ್ಲಕ್ಕೂ ನನ್ನ ಗುರುಗಳ ಹಾರೈಕೆಯೇ ಕಾರಣ ಎಂದರು. ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಸುರೇಶ್ ಕುಮಾರ್ ಅವರು ಉಪಸ್ಥಿತರಿದ್ದರು. ಸದಾನಂದ ಗೌಡರು ದೆಹಲಿ ಬಿಟ್ಟು ಬೆಂಗಳೂರಿಗೆ ಭಾನುವಾರವೇ ಮರಳಲಿದ್ದಾರೆ.