Sadananda Gowda: ಟಿಕೆಟ್ ತಪ್ಪಿದ್ದಕ್ಕೆ ಬೇಸರ ಆಗಿದ್ದು ನಿಜ: ಮುಂದಿನ ರಾಜಕೀಯ ನಡೆ ತಿಳಿಸಿದ ಡಿವಿಎಸ್
ಬೆಂಗಳೂರು, ಮಾರ್ಚ್ 21: ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ಹೌದು, ಆದರೆ ತಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುವುದಿಲ್ಲ. ಬಿಜೆಪಿ ಪಕ್ಷದ ಶುದ್ಧೀಕರಣದತ್ತ ಮುಂದಾಗುವುದೇ ತಮ್ಮ ರಾಜಕೀಯ ಮುಂದಿನ ನಡೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆ ಟಿಕೆಟ್ ಕೈ ತಪ್ಪಿದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಾಗ. ಚುನಾವಣಾ ಕಣಕ್ಕೆ ಮತ್ತೆ ಧುಮುಖಬೇಕು ಎಂದು ಮಾಜಿ ಸಿಎಂ ಎಲ್ಲಾ ಒತ್ತಡ ಹಾಕಿದ್ದರು. ಎಲ್ಲರಿಗೂ ನನ್ನ ಬಗ್ಗೆ ಕುತೂಹಲ ಇತ್ತು. ಸದಾನಂದಗೌಡರಿಗೆ ಚುನಾವಣಾ ಆಸೆ ಚಿಗುರಿದೆ ಅಂತೆಲ್ಲಾ ಸುದ್ದಿಯಾಯ್ತು. ವಿಶ್ಲೇಷಣೆ ಕೂಡ ಮಾಧ್ಯಮದಲ್ಲಿ ನಡೆಯಿತು. ಇಂದು ನನ್ನ ಕುರಿತು ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದೇನೆ ಎಂದು ಹೇಳಿದರು.

ಟಿಕೆಟ್ ತಪ್ಪಿದ್ದಕ್ಕೆ ಸದಾನಂದಗೌಡರಿಗೆ ಬೇಸರ ಆಯ್ತು ಅಂತ ಸುದ್ದಿ ಆಯ್ತು. ಹೌದು ಟಿಕೆಟ್ ತಪ್ಪಿದ್ದಕ್ಕೆ ಬೇಸರ ಆಗಿದ್ದು ನಿಜ. ಪಕ್ಷದಲ್ಲಿ ನಿಮಗೆ ಟಿಕೆಟ್ ಇಲ್ಲ, ಬೇಡ ಅಂತ ಹೇಳಿದ ಮೇಲೂ ಕರೆದು ಮಾತನಾಡಿಸುವ ಪ್ರಯತ್ನ ಮಾಡಿದ್ದರು. ಬೇರೆ ಕಡೆ ನಿಲ್ಲಿಸಿ ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಅಂದರು. ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನಾನು ಪಕ್ಷಕ್ಕೆ ಕೊಡುವುದು ಮಾತ್ರ ಬಾಕಿ ಇದೆ. ಹೀಗಾಗಿ ಮುಂದಿನ ನಡೆ ಪಕ್ಷದ ಶುದ್ಧೀಕರಣ ಎಂದರು.
ಪಕ್ಷದಲ್ಲಿ ಜವಾಬ್ದಾರಿ ವಹಿಸಿಕೊಂಡವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಕುಟುಂಬಕ್ಕೆ ಸೀಮಿತವಾಗಿದ್ದಾರೆ. ಇದರ ಬಗ್ಗೆ ಹೇಳೋಕೆ ಕೆಲವರಿಗೆ ಧೈರ್ಯ ಇಲ್ಲ. ಮೋದಿ ಅವರ ಮೇರಾ ದೇಶ್, ಮೇರಾ ಪರಿವಾರ್ ಆಗಬೇಕು. ನನ್ನ ಮನೆಯವರಿಗೆ ಪಕ್ಷ, ನನ್ನ ಜಾತಿಯವರಿಗೆ ಪಕ್ಷ ಆಗಬಾರದು. ಬಿಜೆಪಿ ಕಟ್ಟಿ ಬೆಳೆಸಿದವರಿಗೆ ಪಕ್ಷ ಆಗಬೇಕು. ಎನ್ಡಿಎಗೆ ಜೆಡಿಎಸ್ ಸೇರ್ಪಡೆ ಆಗಿದೆ. ಜೆಡಿಎಸ್ ಬಂದು ಸೇರಿದೆ ಎನ್ನುವ ಕಾರಣಕ್ಕೆ, ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಬಾರದು ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯ ನಾಯಕರ ಮೇಲೆ ಅಸಮಾಧಾನ ಹೊರ ಹಾಕಿದರು.












Click it and Unblock the Notifications