ಗೌಡರ ಪದಚ್ಯುತಿ ಪ್ರಜಾಪ್ರಭುತ್ವ ವಿರೋಧಿ : ಲೋಕಸತ್ತಾ

ಹನ್ನೊಂದು ತಿಂಗಳುಗಳ ಹಿಂದೆ ಬಿಜೆಪಿ ಪಕ್ಷದ ಎಲ್ಲ ಶಾಸಕರು ಪ್ರಜಾಸತ್ತಾತ್ಮಕವಾಗಿ ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರು. ಪ್ರಸ್ತುತ ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿ ಆಗಬಯಸಿರುವ ಜಗದೀಶ್ ಶೆಟ್ಟರ್ ಅವರು ಅಂದಿನ ಆಯ್ಕೆ ಪ್ರಕ್ರಿಯೆಯಲ್ಲಿಯೂ ಸದಾನಂದ ಗೌಡರಿಗೆ ಪ್ರತಿಸ್ಪರ್ಧಿಯಾಗಿದ್ದರು ಎಂಬುದು ಗಮನಾರ್ಹ ಅಂಶ.
ಈಗ ಸದಾನಂದ ಗೌಡರನ್ನು ಅಸಂವಿಧಾನಿಕವಾಗಿ ಕಿತ್ತೆಸೆದು ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಹೊರಟಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಘೋರ ಅನ್ಯಾಯ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಇಟ್ಟಿರುವ ಹಾಗೂ ಸಂವಿಧಾನಿಕ ಸಂಸ್ಥೆಗಳನ್ನು ಬಲಪಡಿಸುವತ್ತ ಹೆಜ್ಜೆ ಇಟ್ಟಿರುವ ಲೋಕಸತ್ತಾ ಪಕ್ಷವು ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಲೋಕಸತ್ತಾ ಪಕ್ಷದ ವಕ್ತಾರರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಈ ಪ್ರಹಸನವು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ ಯಾವುದೇ ತೆರನಾದ ವ್ಯತ್ಯಾಸವಿಲ್ಲವೆಂಬುದನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಹಣ ಮತ್ತು ಅಧಿಕಾರ ಈ ಎರಡು ಪಕ್ಷಗಳ ಮುಖ್ಯ ಗುರಿಯಾಗಿದೆ. ಜನತೆಯನ್ನು ಒಂದುಗೂಡಿಸಿ ಸಮಾಜದ ಒಳಿತಿಗಾಗಿ ದುಡಿಯುವ ಬದಲು ಸಮಾಜವನ್ನು ಜಾತಿ, ಧರ್ಮ, ಗಡಿಗಳ ಆಧಾರದ ಮೇಲೆ ವಿಭಜಿಸಲು ಹೊರಟಿದೆ. ಇವರಿಗೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕತೆಯಿಲ್ಲ ಎಂದು ಅವರು ನುಡಿದಿದ್ದಾರೆ.
ಪ್ರಬುದ್ಧ ನಾಯಕತ್ವದ ಕೊರತೆ ಪ್ರಸ್ತುತ ಶಾಸಕರ ವರ್ತನೆಯಿಂದ ಎದ್ದು ಕಾಣುತ್ತಿದೆ. ಜನತೆ ಮತ ಹಾಕಿ ಇವರನ್ನು ಆಯ್ಕೆ ಮಾಡಿದ್ದು ಕುದುರೆ ವ್ಯಾಪಾರಕ್ಕಾಗಿ ಅಲ್ಲ. ರಾಜ್ಯದಲ್ಲಿ ಈಗ ತಲೆದೋರಿರುವ ಬರ, ವಿದ್ಯುತ್ ಕ್ಷಾಮ, ಬೆಲೆ ಏರಿಕೆ ಮುಂತಾದ ಭೀಕರ ಸಮಸ್ಯೆಗಳನ್ನು ಮರೆತು ಜಾತಿ ಆಧಾರದ ಮೇಲೆ ಅಧಿಕಾರಕ್ಕಾಗಿ ಕಚ್ಚಾಡುತ್ತಿರುವುದು ನಮ್ಮ ದುರಂತ ಎಂದು ವ್ಯಂಗ್ಯವಾಡಿದ್ದಾರೆ.
ನಿಸ್ವಾರ್ಥವಾಗಿ ಸಾರ್ವಜನಿಕ ಸೇವೆ ಮಾಡಲು ಇಚ್ಛಿಸುವವರು, ಈಗಾಗಲೇ ಸಾರ್ವಜನಿಕ ರಂಗಕ್ಕೆ ಕೊಡುಗೆಯನ್ನು ನೀಡಿರುವವರು ಚುನಾವಣಾ ರಾಜಕೀಯದಲ್ಲಿ ಧುಮುಕಬೇಕೆಂದು ಈ ಮೂಲಕ ಲೋಕಸತ್ತಾ ಕರೆ ನೀಡುತ್ತಿದೆ. ನಮ್ಮ ರಾಜ್ಯಕ್ಕೆ ಹೊಸ ನಾಯಕರುಗಳು ಬೇಕಾಗಿದ್ದಾರೆ.












Click it and Unblock the Notifications