ರೆಡ್ಡಿ ಜಡ್ಜ್ ನನ್ನು ಮನೆಗೆ ಕಳಿಸಿದ ಜಡ್ಜ್ ಅಥಣಿಯವರು!
ಆಂಧ್ರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ (CJ) ಸೇವೆ ಸಲ್ಲಿಸುತ್ತಿದ್ದ ಖಡಕ್ ಜಡ್ಜ್ ಮದನ್ ಭೀಮರಾವ್ ಲೋಕೂರ್ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಲೋಕೂರಿನವರು. ಕಾಕತಾಳೀಯವೆಂಬಂತೆ ನ್ಯಾ. ಲೋಕೂರ್ ಅವರು ಸೋಮವಾರ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2018ರ ಡಿಸೆಂಬರ್ 31ರವರೆಗೂ ನ್ಯಾ. ಲೋಕೂರ್ ಅವರು ಸುಪ್ರೀಂಕೋರ್ಟ್ನಲ್ಲಿ ಸೇವೆ ಸಲ್ಲಿಸಲಿದ್ದಾರೆ.
ತಂದೆ, ತಾತ ಸಹ ಜಡ್ಜುಗಳು: ರೆಡ್ಡಿ ಜಡ್ಜ್ ಸಾಹೇಬ ಪಟ್ಟಾಭಿಯನ್ನು ಮನೆಗೆ ಕಳಿಸುವುದಕ್ಕೆ ಒಂದೆರಡು ದಿನಗಳ ಮುನ್ನ ಇದೇ ನ್ಯಾ. ಲೋಕೂರ್ ಅವರು ಮತ್ತೊಂದು ಖಡಕ್ ತೀರ್ಪು ನೀಡಿ ಸಾಕಷ್ಟು ಸುದ್ದಿಗೆ ಬಂದಿದ್ದರು. ಇತರೆ ಹಿಂದುಳಿದ ವರ್ಗದವರಿಗೆ ನೀಡಲಾಗಿರುವ ಶೇ. 27ರಷ್ಟು ಮೀಸಲಾತಿಯಲ್ಲಿ ಮುಸ್ಲಿಮರಿಗೆ ಶೇ. 4.5ರಷ್ಟು ಒಳ ಮೀಸಲು ನೀಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಇತ್ತೀಚೆಗಷ್ಟೇ ಆಂಧ್ರಪ್ರದೇಶ ಹೈಕೋರ್ಟ್ ವಜಾ ಮಾಡಿತ್ತು. ಈ ತೀರ್ಪು ನೀಡಿದ್ದು ಲೋಕೂರ್ ಅವರನ್ನೊಳಗೊಂಡ ನ್ಯಾಯಪೀಠ.
ಇವರ ತಂದೆ ಮತ್ತು ಅಜ್ಜ ಕೂಡಾ ವಿವಿಧ ಹೈಕೋರ್ಟ್ಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಹಿರಿಮೆ ಹೊಂದಿದವರು. 1953ರಲ್ಲಿ ಜನಿಸಿದ ನ್ಯಾ. ಮದನ್ ಲೋಕೂರ್ ಅವರು ದೆಹಲಿ ಮತ್ತು ಅಲಹಾಬಾದ್ನಲ್ಲಿ ವಿದ್ಯಾಭ್ಯಾಸ ಮಾಡಿದರು. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ವಕೀಲಿಕೆ ಮಾಡಿದ್ದ ಇವರು 1998ರಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು.
1999ರಲ್ಲಿ ದೆಹಲಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ಮತ್ತು 2010ರಲ್ಲಿ ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾದರು. ಇದಾದ ಬಳಿಕ ಗುವಾಹಟಿ ಹೈಕೋರ್ಟ್ ಮತ್ತು ಆಂಧ್ರಪ್ರದೇಶ ಹೈಕೋರ್ಟ್ಗಳ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.
ನ್ಯಾ. ಲೋಕೂರ್ ಅವರ ತಂದೆ ಭೀಮರಾವ ಲೋಕೂರ್ ಅವರು ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿಯಾಗಿ, ಆ ಬಳಿಕ ಅಲಹಾಬಾದ್ ಹೈಕೋರ್ಟ್ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಇನ್ನು, ಮದನ್ ಅವರ ಅಜ್ಜ ನ್ಯಾ. ಎನ್.ಬಿ. ಲೋಕೂರ್ ಅವರು ಧಾರವಾಡ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ, ಪುಣೆ ನ್ಯಾಯಾಲಯದ ನ್ಯಾಯಾಧೀಶರಾಗಿ ಆ ಬಳಿಕ ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು. ಈಗ ಎನ್.ಬಿ. ಲೋಕೂರ್ ಅವರ ಹೆಸರನ್ನು ಧಾರವಾಡ ಜೆಎಸ್ಎಸ್ ಕಾಲೇಜು ಗ್ರಂಥಾಲಯಕ್ಕೆ ಇಡಲಾಗಿದೆ.