ಗುಲಬರ್ಗ ಉರ್ದು ಪಾಲಿಕೆಗೆ ಕರವೇ ಮುತ್ತಿಗೆ
ಶುಕ್ರವಾರ ಸಂಜೆ ಗುಲಬರ್ಗ ಪಾಲಿಕೆಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ, ಪಾಲಿಕೆ ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ. ಬೆಂಗಳೂರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವೃತ್ತದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಭೂತದಹನ ಮಾಡಲು ಕರವೇ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.
ಈ ಕುರಿತು ಒನ್ಇಂಡಿಯಾ-ಕನ್ನಡದೊಡನೆ ಮಾತನಾಡಿದ ಕರವೇ ನೂತನ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ ಅವರು, ಕರ್ನಾಟಕದಲ್ಲಿ ಕನ್ನಡ ಮತ್ತು ಉರ್ದು ಅಣ್ಣತಮ್ಮಂದಿರಂತೆ ಇವೆ. ಆದರೆ, ಈ ಎಡಬಿಡಂಗಿ ಗುಲಬರ್ಗ ಸದಸ್ಯರು ಇಂತಹ ನಿರ್ಣಯಗಳನ್ನು ತೆಗೆದುಕೊಂಡು ಉರ್ದು ಭಾಷಿಕರನ್ನು ಎತ್ತಿಕಟ್ಟುವ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ನಿರ್ಣಯಗಳನ್ನು ತೆಗೆದುಕೊಂಡಾಗ ಪಾಲಿಕೆಯಲ್ಲಿದ್ದ ಕನ್ನಡಿಗರು ಯಾವುದೇ ಚಕಾರವೆತ್ತದಿರುವುದು ಅಕ್ಷಮ್ಯ ಅಪರಾಧ. ಅಲ್ಲದೆ, ಇದರ ವಿರುದ್ಧ ಇತರ ಕನ್ನಡ ಸಂಘಟನೆಗಳು ಬಾಯಿಮುಚ್ಚಿಕೊಂಡು ಇರುವುದು ಆಶ್ಚರ್ಯದ ಜೊತೆಗೆ ಆಘಾತ ತಂದಿದೆ ಎಂದು ಸಣ್ಣೀರಪ್ಪ ಮಾತಿನಲ್ಲಿಯೇ ಕುದಿಯುತ್ತಿದ್ದರು.
ಕರ್ನಾಟಕದಲ್ಲಿ ಹಿಂದಿ ಹಾಡುಗಳನ್ನು ಎಲ್ಲರೂ ಕೇಳುತ್ತಾರೆ. ಸಂಗೀತಕ್ಕೆ ಯಾವುದೇ ಎಲ್ಲೆ ಇರುವುದಿಲ್ಲ. ಗುಲಬರ್ಗದಲ್ಲಿ ಉರ್ದು ಭಾಷೆ ಹೆಚ್ಚಾಗಿ ಬಳಸಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗಂತ ರಫಿ ಜನ್ಮದಿನವನ್ನು ಪಾಲಿಕೆ ವೆಚ್ಚದಲ್ಲಿ ಆಚರಿಸುವುದು ಯಾವ ನ್ಯಾಯ ಎಂದು ಸಣ್ಣೀರಪ್ಪ ಸಣ್ಣಗೆ ಗುಡುಗಿದರು.