'ಮೋದಿ' ಗಮನ ಸೆಳೆಯಲು ಹೋಗಿ 'ಮಸಿ' ಬಳಿಸಿಕೊಂಡ 'ಬ್ಯಾನರ್ ಮುನಿ'
ಬೆಂಗಳೂರು, ಜೂ. 19: ಪ್ರಧಾನಿ ಮೋದಿ ಗಮನ ಸೆಳೆಯಲು ಹಿಂದಿ ಭಾಷೆಯಲ್ಲಿ ಬ್ಯಾನರ್ ಹಾಕಿ ಪ್ರಚಾರ ಗಿಟ್ಟಿಸಲು ಯತ್ನಿಸಿದ ಸಚಿವ ಮುನಿರತ್ನ ಅವರ ಬ್ಯಾನರ್ ಗಳಿಗೆ ಕರವೇ ಕಾರ್ಯಕರ್ತರು ಅದಾಗಲೇ ಮಸಿ ಬಳಿದು ಧ್ವಂಸಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಹಿಂದಿ ಭಾಷೆ ಬಳಿಸಿ ರಸ್ತೆಯುದ್ಧಕ್ಕೂ ಸಚಿವ ಮುನಿರತ್ನ ಹಾಕಿಸಿದ್ದ ಹಿಂದಿ ಬ್ಯಾನರ್ ಗಳನ್ನು ಮೋದಿ ನೋಡುವ ಮುನ್ನವೇ ಕನ್ನಡ ಪರ ಸಂಘಟನೆಗಳು ಕಿತ್ತೆಸೆದಿವೆ. ಹಿಂದಿ ಭಾಷೆಯ ಬ್ಯಾನರ್ ಗಳಲ್ಲಿ ರಾಜಾಜಿಸುತ್ತಿದ್ದ ಮುನಿರತ್ನ ಮುಖಕ್ಕೆ ಮಸಿ ಬಳಿದು ಕನ್ನಡ ಪರ ಹೋರಾಟಗಾರರು ಸಚಿವರ ಹಿಂದಿ ಪ್ರೇಮದ ವಿರುದ್ಧ ಧ್ವನಿಯೆತ್ತಿದ್ದಾರೆ. ಕರವೇ ಕನ್ನಡ ಹೋರಾಟಕ್ಕೆ ಮಣಿದು ಬಿಜೆಪಿ ಕಾರ್ಯಕರ್ತರು ಅದಾಗಲೇ ತಮ್ಮ ಬಾಸ್ ನ ಹಿಂದಿ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ.

ಹಿಂದಿ ಭಾಷೆಯಲ್ಲಿ ಮೋದಿಗೆ ಸ್ವಾಗತ ಕೋರಿ ಬ್ಯಾನರ್ :
ಪ್ರಧಾನಿ ನರೇಂದ್ರ ಮೋದಿ ಅವರು ಜೂ. 20 ರಂದು ಬೆಂಗಳೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನು ಅರಿತ ಸಚಿವ ಮುನಿರತ್ನ ಮೈಸೂರು ರಸ್ತೆಯಲ್ಲಿರುವ ಎಲ್ಲಾ ಕಂಬಗಳಿಗೂ ಬ್ಯಾನರ್ ಹಾಕಿದ್ದಾರೆ. ಬ್ಯಾನರ್ ಹಾಕಿ ಶುಭ ಹಾರೈಸಿದ್ದಲ್ಲಿ ಯಾವುದೇ ತರಕಾರು ಇರಲಿಲ್ಲ. ಮೋದಿ ಓದಿ ಮೆಚ್ಚಬೇಕು ಎಂಬ ಆಸೆಯಿತ್ತೋ ಏನೋ? ಒಂದು ಪದ ಕನ್ನಡ ಬಳಸದೇ ಹಿಂದೆ ಭಾಷೆಯಲ್ಲಿ ಬ್ಯಾನರ್ -ಬಂಟಿಂಗ್ ಮುದ್ರಿಸಿ ಮೈಸೂರು ರಸ್ತೆಯ ಉದ್ಧಗಲಕ್ಕೂ ಅದಾಗಲೇ ಬ್ಯಾನರ್ ಕಟ್ಟಿದ್ದರು.

ಮುನಿರತ್ನ ಹಿಂದಿ ಬ್ಯಾನರ್ ಗಳಿಗೆ ಮಸಿ ಬಳಿದ ಕರವೇ:
ವಿಷಯ ತಿಳಿದ ಟಿಎ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಧರ್ಮರಾಜ್ ಮತ್ತು ಬೆಂಬಲಿಗರು ಮೈಸೂರು ರಸ್ತೆಯಲ್ಲಿ ಮುನಿರತ್ನ ಬ್ಯಾನರ್ ತೆರವು ಗೊಳಿಸಲು ಯತ್ನಿಸಿದರು. ಕನ್ನಡ ವಿರೋಧಿ ಮುನಿರತ್ನ ಹಾಗೂ ಬೆಂಬಲಿಗರ ವಿರುದ್ಧ ಧಿಕ್ಕಾರ ಕೂಗಿದ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಯತ್ನಿಸಿದರು. ಇದರ ಮಧ್ಯೆಯೂ ಮುನಿರತ್ನ ಮತ್ತು ಅವರ ಬೆಂಬಲಿಗರ ಹಿಂದಿ ಬ್ಯಾನರ್ ಗಳಿಗೆ ಮಸಿ ಬಳಿದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಮುನಿರತ್ನ ಬ್ಯಾನರ್ ಗಳಿಗೆ ಮಸಿ ಬಳಿಯುವುದನ್ನು ತಡೆಯಲು ಪೊಲೀಸರು ಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ನಾಳೆ ವೇಳೆ ಹಿಂದಿ ಭಾಷೆಯ ಬ್ಯಾನರ್ ತೆಗೆಯದಿದ್ದರೆ ಇರುವ ಬ್ಯಾನರ್ ಗಳಿಗೆ ಮಸಿ ಬಳಿದು ಕಿತ್ತೆಸೆಯಲಾಗುವುದು ಎಂದು ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಮಸಿ ಬಳಿಯಲು ಪೇಂಟ್ ರೋಲರ್ ಬ್ರಶ್ ಬಳಕೆ:
ಇನ್ನು ಮೈಸೂರು ರಸ್ತೆಯಲ್ಲಿ ಕರವೇ ಕಾರ್ಯಕರ್ತರು ಹಿಂದಿ ಭಾಷೆಯಲ್ಲಿ ಬ್ಯಾನರ್ ಹಾಕಿದ್ದ ಮುನಿರತ್ನ ಬ್ಯಾನರ್ ಗಳಿಗೆ ಮಸಿ ಬಳಿಯಲು ಮುಂದಾದರು. ಈ ವೇಳೆ ಪ್ರಧಾನಿ ಮೋದಿಗೆ ಸ್ವಲ್ಪವೂ ಮಸಿ ತಾಗಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದರು. ಪೇಂಟ್ ರೋಲರ್ ಬ್ರಶ್ ಗಳನ್ನು ತಂದಿದ್ದ ಕರವೇ ಕಾರ್ಯಕರ್ತರು ಮುನಿರತ್ನ ಹಾಗೂ ಹಿಂದಿ ಭಾಷೆ ಪದಗಳಿಗಷ್ಟೇ ಮಸಿ ಬಳಿದ ದೃಶ್ಯ ಕಂಡು ಬಂತು. ಇದರ ನಡುವೆ ಪ್ರತಿಭಟನೆ ಮಾಡಿದ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರವೇ ಕಾರ್ಯಕರ್ತರ ಬಂಧನ:
ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುವ ನೂರಾರು ಹಿಂದಿ ಫ್ಲೆಕ್ಸ್ ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಸಿ ಬಳಿದ ಹೋರಾಟಕ್ಕೆ ಬಿಜೆಪಿ ಮಣಿದಿದ್ದು, ಹಿಂದಿ ಫ್ಲೆಕ್ಸ್ ಗಳನ್ನು ಬಿಜೆಪಿ ಮುಖಂಡರೇ ತೆರವುಗೊಳಿಸುತ್ತಿದ್ದಾರೆ. ಫ್ಲೆಕ್ಸ್ ಗಳಿಗೆ ಮಸಿ ಬಳಿದ ಕರವೇ ಯುವಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಸೇರಿದಂತೆ ಹಲವಾರು ಕರವೇ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿಯೊಳಗೆ ಒಂದೇ ಒಂದು ಹಿಂದಿ ಫ್ಲೆಕ್ಸ್ ಉಳಿದಿದ್ದರೂ, ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಧರ್ಮರಾಜ್ ಎಚ್ಚರಿಸಿದ್ದಾರೆ.












Click it and Unblock the Notifications