ಯಡಿಯೂರಪ್ಪ:ಲೋಕಾಯುಕ್ತ ತಡವಾಗಿ ದಾಳಿ ಮಾಡಿದ್ದು ಸರಿಯೇ ?
ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಡಿನೋಟಿಫಿಕೇಷನ್ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಟೆಂಡರ್ ಪ್ರಕ್ರಿಯೆ ಹಾಗೂ ಜಮೀನು ಡಿನೋಟಿಫಿಕೇಷನ್ಗೆ ಸಂಬಂಧಿಸಿದ ದಾಖಲೆ ಪತ್ರಗಳು ಸಂಬಂಧಪಟ್ಟ ಇಲಾಖೆಯಲ್ಲೇ ಸಿಗುತ್ತವೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಕ್ಕಳು ಹಾಗೂ ಅಳಿಯ ಸೋಹನ್ಕುಮಾರ್ ಮನೆ ಮೇಲೆ ದಾಳಿ ಮಾಡಿದ್ದು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳಿಗಾಗಿ ಅಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಪೂರಕ ಮಾಹಿತಿ ಸಂಗ್ರಹಿಸಲಷ್ಟೇ ದಾಳಿ ಮಾಡಲಾಗಿತ್ತು ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಮುಚ್ಚಿಡಲು ಯಡಿಯೂರಪ್ಪ ಕುಟುಂಬಕ್ಕೆ ಸಹಕರಿಸುವ ಉದ್ದೇಶದಿಂದ ಲೋಕಾಯುಕ್ತ ಪೊಲೀಸರು ತಡವಾಗಿ ದಾಳಿ ಮಾಡಿದ್ದಾರೆ ಎಂಬ ಆರೋಪಗಳನ್ನು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಳ್ಳಿ ಹಾಕಿ, ಯಾವಾಗ, ಎಲ್ಲಿ ದಾಳಿ ಮಾಡಿದರೆ ಸೂಕ್ತ ಮಾಹಿತಿ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ. ಆತುರಾತುರವಾಗಿ ಆರೋಪಿತರ ಮನೆಗಳ ಮೇಲೆ ದಾಳಿ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.