ರೆಡ್ಡಿ ಸೋದರರ ಮಹಾಪತನಕ್ಕೆ ನಾಂದಿ: ಟಪಾಲ್ ಗಣೇಶ್
ಈ ಮಧ್ಯೆ, ಸಿಬಿಐ ವಶದಲ್ಲಿರುವ ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿಗೆ ಗುಂತಕಲ್ಲಿನಲ್ಲಿ ಬೆಳಗಿನ ಉಪಹಾರ ನೀಡಲಾಗಿದ್ದು, ಸಿಬಿಐ ಮಹಾ ನಿರ್ದೇಶಕ ಲಕ್ಷ್ಮಿನಾರಾಯಣ್ ತಂಡ ಅವರಿಬ್ಬರನ್ನೂ ಹೈದರಾಬಾದಿಗೆ ಕರೆದೊಯ್ಯುತ್ತಿದೆ. ಅಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಅವರನ್ನೂ ಹಾಜರುಪಡಿಸಿ, ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆಯನ್ನು ಮುಂದಿಟ್ಟುಕೊಂಡು ಈ ದಾಳಿಗಳು ನಡೆದಿವೆ. ಇತ್ತೀಚೆಗೆ, ಸುಪ್ರೀಂಕೋರ್ಟಿನ ಉನ್ನತಾಧಿಕಾರ ತಂಡ (cec) ರೆಡ್ಡಿಯ ಅಕ್ರಮ ಗಣಿಗಾರಿಕೆ ಮೇಲೆ ಹದ್ದಿನಕಣ್ಣಿಟ್ಟಿತ್ತು. ಅತ್ತ ಆಂಧ್ರ ಸರಕಾರ ಸಹ ಓಬಳಾಪುರಂ ಕಂಪನಿಯ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು.
ಈ ಸಂದರ್ಭದಲ್ಲಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ ವರದಿಯೂ ಸಿಬಿಐಗೆ ನೆರವಾಗಿ, ರೆಡ್ಡಿಗೆ ಮುಳುಗುನೀರು ತರುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಈ ಸಂದರ್ಭದಲ್ಲಿ ಹೈದರಾಬಾದ್ ಸಿಬಿಐ ದಾಳಿ ನಡೆಸಿರುವುದು ಸ್ವಾಗತಾರ್ಹ ಎಂದು ಕಳೆದ 50 ವರ್ಷಗಳಿಂದ ಗಣಿಗಾರಿಕೆ ನಡೆಸಿಕೊಂಡು ಬಂದಿರುವ, ರೆಡ್ಡಿ ಸೋದರರ ಕಡುವೈರಿ ಎಂದೇ ಹೆಸರಾಗಿರುವ ಟಪಾಲ್ ಗಣೇಶ್ ಪ್ರತಿಕ್ರಿಯಿಸಿದ್ದಾರೆ.