ಬಳ್ಳಾರಿ ಗಣಿ ತನಿಖಾಧಿಕಾರಿಯೇ ಭ್ರಷ್ಟಾಚಾರದ ಆರೋಪಿ!
ಅಶೋಕ ಸದಲಗಿ ಅವರು ಆಗಸ್ಟ್ 28, 2008ರಂದು ಬಳ್ಳಾರಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಸಂದರ್ಭದಲ್ಲೇ ಗಣಿ ಹಗರಣದ ವಿವಾದ ರಾಜ್ಯ - ರಾಷ್ಟ್ರಮಟ್ಟದಲ್ಲಿ ಬಿಸಿಯನ್ನು ಸೃಷ್ಟಿಸಿತ್ತು. ಪ್ರಸ್ತುತ ಅವರು ಬಳ್ಳಾರಿ ಜಿಲ್ಲಾ ಲೋಕಾಯುಕ್ತ ಎಸ್ಪಿ ಆಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೋರಿಕೆಯಾಗಿರುವ ಗಣಿ ಹಗರಣದ ವರದಿಯಲ್ಲಿ ತಮ್ಮ ಹೆಸರು ನಮೂದಾಗಿರುವ ಕುರಿತು ಮಾತನಾಡಿದ ಅಶೋಕ ಸದಲಗಿ 'ಗಣಿ ಹಗರಣ ಕುರಿತು ಮೇಲಧಿಕಾರಿಗಳು ಕೋರಿದ ಎಲ್ಲಾ ಸಹಕಾರ ನೀಡಿರುವೆ. ಕಾಲಕಾಲಕ್ಕೆ ಅಗತ್ಯ ದಾಖಲಾತಿಗಳನ್ನೂ ನೀಡಲಾಗಿದೆ. ನನ್ನ ಹೆಸರು ಭ್ರಷ್ಟರ ಪಟ್ಟಿಯಲ್ಲಿ ಸೇರಿರುವುದು ವಿಷಾದನೀಯ" ಎನ್ನುತ್ತಾರೆ.
ವಾಸ್ತವದಲ್ಲಿ 2008ರ ಆಗಸ್ಟ್ನಿಂದಲೂ ಅಶೋಕ ಸದಲಗಿ ಬಳ್ಳಾರಿಯಲ್ಲೇ ಬೇರುಬಿಟ್ಟಿರುವುದಕ್ಕೆ ಅವರ ಸಹದ್ಯೋಗಿಗಳೇ ಸಾಕಷ್ಟು ಭಿನ್ನವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಗಣಿ ಹಗರಣದಲ್ಲಿ ಅಶೋಕ ಸದಲಗಿ ಅವರ ಹೆಸರು ಪ್ರಸ್ತಾಪ ಆಗಿರುವುದಕ್ಕೆ 'ಸತ್ಯ ಬಯಲಾಗಿದೆ" ಎಂದು ಕೆಲವರು ಮೀಸೆಯಡಿಯಲ್ಲಿ ಮುಗುಳ್ನುಗುತ್ತಿದ್ದಾರೆ.
ಜಿಲ್ಲೆಯ ಗಣಿ ಹಗರಣದ ಕುರಿತು ಹೋರಾಟ ನಡೆಸುತ್ತಿರುವ ಟಪಾಲ್ ಗಣೇಶ್, 'ಎಂಬಿಟಿ ಗಣಿ ಸಿಬ್ಬಂದಿ ಅನಧಿಕೃತವಾಗಿ ಕಬ್ಬಿಣದ ಅದಿರನ್ನು ಹೊರತೆಗೆದು, ಸ್ಟಾಕ್ ಮಾಡಿ ರವಾನೆ ಮಾಡುತ್ತಿರುವ ಕುರಿತು ಅಧಿಕೃತ ದಾಖಲೆಗಳ ಸಮೇತ ಬಳ್ಳಾರಿ ಜಿಲ್ಲಾ ಲೋಕಾಯುಕ್ತ ಎಸ್ಪಿ ಅವರಿಗೆ ದೂರು ನೀಡಿದ್ದೆ. ಅವರು ಕೇವಲ ಕ್ಲರ್ಕ್ ಕೆಲಸ ಮಾಡಿದರು. ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲಿಲ್ಲ. ತಪ್ಪಿತಸ್ಥರನ್ನು ಮಧ್ಯವರ್ತಿಗಳ ಮೂಲಕ ಖಾಸಗಿಯಾಗಿ ಭೇಟಿ ಮಾಡಿದರು" ಎಂದು ಆರೋಪಿಸುತ್ತಾರೆ.
ಗಣಿ - ಗಡಿ ವಿವಾದ ತೀವ್ರಗೊಂಡಾಗ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಇಚ್ಛಿಸದ ಅಶೋಕ ಸದಲಗಿ 'ಗಣಿ ವಿಷಯವೇ ತಮ್ಮ ವ್ಯಾಪ್ತಿಯಲ್ಲಿ ಇಲ್ಲ" ಎನ್ನುತ್ತಲೇ ದೂರು ನೀಡುವವರಿಂದ ಆರೋಪ ಕೇಳಿ, ದಾಖಲಾತಿಗಳನ್ನು ಪಡೆದು ಆರೋಪಿಗಳನ್ನು ಭೇಟಿ ಆಗುತ್ತಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ.