ನ್ಯಾ. ಹೆಗಡೆಯವರೇ ದೇಶದ ಹಿತದೃಷ್ಟಿಯಿಂದ ಮುಂದುವರಿಯಿರಿ
ಸಮಿತಿಯ ಕೆಲವು ಸದಸ್ಯರ ಚಾರಿತ್ರ್ಯಕ್ಕೆ ವ್ಯವಸ್ಥಿತವಾಗಿ ಮಸಿಬಳಿಯಲಾಗುತ್ತಿದೆ ಎಂದು ಕಿಡಿಕಾರಿರುವ ಸಮಿತಿಯ ಸದಸ್ಯ ನ್ಯಾ. ಸಂತೋಷ್ ಹೆಗಡೆ ಅವರು ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಗುರುವಾರ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಮಧ್ಯೆ, ಅಣ್ಣಾ ಹಜಾರೆ ಅವರು ಮೇ ಮೊದಲ ವಾರದಲ್ಲಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು India Against Corruption ಸಂಘಟನೆ ತಿಳಿಸಿದೆ.
ನಾನಾ ಸಂಘಟನೆಗಳ ಸದಸ್ಯರು ಧರಣಿ, ಮೆರವಣಿಗೆ ನಡೆಸಿ ಸಮಿತಿಯಿಂದ ಹೊರಬರಬಾರದು ಎಂದು ನ್ಯಾ. ಹೆಗಡೆ ಅವರಿಗೆ ಮನವಿ ಮಾಡಿದರು. ಕಾನೂನು ರಂಗದಲ್ಲಿ ಅಪಾರ ಅನುಭವ ಹೊಂದಿದ್ದೀರಿ. ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದೀರಿ. ಆದ್ದರಿಂದ ಭ್ರಷ್ಟರ ವಿರುದ್ಧದ ಹೋರಾಟವನ್ನು ಮುಂದುವರಿಸಬೇಕು ಎಂದು ನ್ಯಾ. ಹೆಗಡೆ ಬೆಂಬಲಿಗರು ಒತ್ತಾಯಿಸಿದ್ದಾರೆ.
ರಾಷ್ಟ್ರದ ಹಿತದೃಷ್ಟಿಯಿಂದ ಸಮಿತಿಯನ್ನು ತೊರೆಯಬಾರದು ಎಂದು ಜೆಡಿ ಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಹ ನ್ಯಾ. ಹೆಗಡೆ ಅವರನ್ನು ಕೋರಿದ್ದಾರೆ. ರಾಜಕೀಯ ನಾಯಕರ ಟೀಕೆಗಳಿಗೆ ನೊಂದು ನ್ಯಾ. ಹೆಗಡೆ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟರ ವಿರುದ್ಧ ಲೋಕಾಯುಕ್ತರಾಗಿದ್ದುಕೊಂಡು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನ್ಯಾ. ಹೆಗಡೆ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪ ಮಾಡಿದ್ದಾರೆ.