ತೆರೆಗೆ ಬರಲಿದ್ದಾನೆ ಕೋಲಾರ 'ಮಂಜುನಾಥ'
'ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ದಕ್ಷತೆ ಮತ್ತು ನಿಷ್ಠೆಗೆ ಮಂಜುನಾಥ್ ಬದುಕು ಮಾದರಿಯಾಗಿದೆ. ಅದನ್ನು ಸಿನಿಮಾ ಮಾಡಿದರೆ ಯುವಕರಿಗೆ ಆದರ್ಶವಾಗುತ್ತದೆ' ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ಹಾಗೆ ನೋಡಿದರೆ 2007ರಲ್ಲೇ ಮಂಜುನಾಥ್ ಷಣ್ಮುಗಂ ಟ್ರಸ್ಟ್ ಮಂಜುನಾಥ್ ಕುರಿತು ಸಿನಿಮಾ ಮಾಡುವಂತೆ ವರ್ಮಾ ಅವರನ್ನು ಕೇಳಿತ್ತು. ನಿಜ ಜೀವನದ ಘಟನೆಗಳನ್ನು ಆಧರಿಸಿ ನಿರ್ಮಾಣವಾಗುವ ಇಂತಹ ಸಿನಿಮಾಗಳು ಹೆಚ್ಚಾಗಿ ಓಡುವದಿಲ್ಲ ಎಂದು ವರ್ಮಾ ಸುಮ್ಮನಾಗಿದ್ದರು.
ಈ ಮಧ್ಯೆ, ಎರಡು ವರ್ಷಗಳ ಕಾಲ ಮಂಜುನಾಥ್ ಬದುಕಿನ ಆಧ್ಯಯನ ನಡೆಸಿ, ಅವರ ತಂದೆ ತಾಯಿಯನ್ನು ಮಾತನಾಡಿಸಿ, ಸ್ನೇಹಿತರ ಜತೆ ಚರ್ಚಿಸಿದ ಬಳಿಕ ಸಿನಿಮಾ ನಿರ್ಮಿಸುವುದನ್ನು ವರ್ಮಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸೀಮಾ ಬಿಸ್ವಾಸ್, ಯಶಪಾಲ್ ಶರ್ಮಾ ನಟಿಸುವುದು ಖಚಿತವಾಗಿದೆ. ಆದರೆ ಮಂಜುನಾಥ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಟ್ಟನ್ನು ವರ್ಮಾ ಬಿಟ್ಟುಕೊಟ್ಟಿಲ್ಲ.
'ಬಾಲಿವುಡ್-ನಲ್ಲಿ ನಿರ್ಮಾಣವಾಗುವ ಎಲ್ಲ ಮಸಾಲೆ ಚಿತ್ರಗಳೂ ಸಕ್ಸಸ್ ಆಗದು. ಕೆಲವಷ್ಟೇ ಕ್ಲಿಕ್ ಆಗುತ್ತವೆ. ಹಾಗೆಯೇ ನೈಜ ಘಟನೆಗಳ ಸಿನಿಮಾಗಳಲ್ಲಿ ಕೆಲವಾದರೂ ಯಶಸ್ವಿಯಾಗುತ್ತವೆ' ಎಂದು ವರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿರಿಯ ಚಿತ್ರ ನಿರ್ಮಾಣಕಾರ ಶ್ಯಾಮ್ ಬೆನಗಲ್ ಇದನ್ನು ತಮ್ಮದೇ ಆದ ರೀತಿಯಲ್ಲಿ ಪುಷ್ಟೀಕರಿಸುತ್ತಾರೆ. ನೈಜ ಘಟನೆಗಳ ಸಿನಿಮಾವನ್ನು ಕಮರ್ಷಿಯಲ್ ಚಿತ್ರಗಳಿಗೆ ಹೋಲಿಸಲಾಗದು. ಆದರೆ ಈ ಚಿತ್ರಗಳು ಸೋತರೂ ಹಣಕಾಸು ದೃಷ್ಟಿಯಿಂದ ನಷ್ಟ ಅನುಭವಿಸದು. ಖರ್ಚಾಗಿರುವಷ್ಟು ಮೊತ್ತಕ್ಕೆ ಮೋಸವೇನೂ ಇರದು. ಮತ್ತೊಂದು ಗಮನಾರ್ಹ ಅಂಶವೆಂದರೆ ಇಂತಹ ಸಿನಿಮಾ ನಿರ್ಮಿಸಬೇಕು ಎಂದು ನಿರ್ಧರಿಸುವಾಗಲೇ ದುಂದುವೆಚ್ಚಕ್ಕೆ ಹೋಗದೆ ಕಥೆಗೆ ಅಗತ್ಯವಿರುವಷ್ಟು ಖರ್ಚು ಮಾಡಲು ಆಲೋಚಿಸುತ್ತಾರೆ ಎಂಬುದು ಶ್ಯಾಮ್ ಅಭಿಮತ. ಇದು ವಾಸ್ತವವೂ ಹೌದು, ಅಲ್ವಾ!?