ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಕುರ್ಚಿ ಮೇಲೆ ತೂಗುಕತ್ತಿ!

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ನ. 17 : ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಭೂ-ಹಗರಣಗಳ ಸರಮಾಲೆ ಹೆಚ್ಚಾಗುತ್ತಿದ್ದಂತೆಯೇ ದಿಲ್ಲಿ ಅಂಗಳದಲ್ಲಿ ಹಗರಣ ಪ್ರತಿಧ್ವನಿಸಿದೆ. ಕರ್ನಾಟಕ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು. ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಯಡಿಯೂರಪ್ಪ ಅವರ ಹಗರಣಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆರೆಸ್ಸೆಸ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಸರಕಾರದ ಬಾನಗಡಿಯ ಮಧ್ಯೆಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನ.18ರಂದು ರಾಜ್ಯಕ್ಕೆ ಆಗಮಿಸುತ್ತಿರುವುದಕ್ಕೆ ಭಾರಿ ಮಹತ್ವ ಬಂದಿದೆ. ಯಡಿಯೂರಪ್ಪ ಮತ್ತು ಅವರ ಮಕ್ಕಳು ಡಿನೋಟಿಫೈ ಹಗರಣದಲ್ಲಿ ಭಾಗಿಯಾಗಿರುವುದು ಖಾತ್ರಿಯಾಗಿದ್ದು, ಸ್ವತಃ ಮುಖ್ಯಮಂತ್ರಿಯೇ ಇದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸುತ್ತಾರಾ? ಅಥವಾ ಅವರನ್ನು ಸಮರ್ಥಿಸಿಕೊಳ್ಳುತ್ತಾರಾ ಎನ್ನುವುದು ಬಹುಮುಖ್ಯ ಪ್ರಶ್ನೆಯಾಗಿದೆ. ಇನ್ನೊಂದಡೆ ಅನಂತ್ ಕುಮಾರ್ ಗ್ಯಾಂಗ್ ಯಡಿಯೂರಪ್ಪ ಅವರನ್ನು ಮನೆಗೆ ಕಳುಹಿಸುವ ತಂತ್ರಕ್ಕೆ ಕೈಹಾಕಿದೆ ಎಂದು ಹೇಳಲಾಗಿದೆ.

ಪ್ರತಿಪಕ್ಷದವರಂತೂ ಮುಖ್ಯಮಂತ್ರಿಯ ಹಗರಣವನ್ನು ಕೇಂದ್ರದ ಅಂಗಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಹಗರಣದ ಬಗ್ಗೆ ಬರೀ ರಾಜ್ಯ ಮಟ್ಟದ ವಾಹಿನಿಗಳಿಗೆ ಸೀಮಿತವಾಗಿದ್ದ ವಿವಾದ ಇದೀಗ ದಿಲ್ಲಿ ಮುಟ್ಟಿದೆ. ರಾಷ್ಟ್ರೀಯ ವಾಹಿನಿಗಳು ಸಹ ಯಡಿಯೂರಪ್ಪ ಅವರ ಹಗರಣವನ್ನು ಬಯಲುಗೊಳಿಸತೊಡಗಿವೆ. ಕೇಂದ್ರದ ಆಡಳಿತರೂಢ ಯುಪಿಎ ಸರಕಾರಕ್ಕೆ ಯಡಿಯೂರಪ್ಪ ಅವರ ಪ್ರಕರಣ ಅಸ್ತ್ರವಾಗಿ ಪರಿಣಮಿಸಿದೆ. ಮಾಜಿ ಕೇಂದ್ರ ಸಚಿವ ಎ ರಾಜಾ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ತಲೆದಂಡಕ್ಕೆ ಕಾರಣವಾದ ಬಿಜೆಪಿಯನ್ನು ಸದ್ದಡಗಿಸಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದೆ.

ಯಡಿಯೂರಪ್ಪ ರಾಜೀನಾಮೆ ನೀಡಲಿ : ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಸರಕಾರಿ ಭೂಮಿಯನ್ನು ಕುಟುಂಬ ಸದಸ್ಯರಿಗೆ ನೀಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆಚಾರ್ ಹೇಳಿ ಬದ್ನೆಕಾಯಿ ತಿನ್ನುತ್ತಿರುವ ಬಿಜೆಪಿ, ಇದೀಗ ತಮ್ಮದೇ ಪಕ್ಷದ ಮುಖ್ಯಮಂತ್ರಿ ಸ್ವಪಕ್ಷಪಾತದಲ್ಲಿ ತೊಡಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಬೇಕು ಎಂದು ತಿವಾರಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ವಿಷಯದಲ್ಲಿ ಪಾರದರ್ಶಕವಾಗಿ ನಡೆದುಕೊಂಡಿದ್ದು, ಭ್ರಷ್ಟಾಚಾರದ ಆರೋಪದ ಮೇಲೆ ಕೇಂದ್ರ ಟೆಲಿಕಾಂ ಮಂತ್ರಿ ಎ ರಾಜಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ರಾಜೀನಾಮೆ ಪಡೆಯುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಬಿಜೆಪಿ ಕೂಡಾ ಭ್ರಷ್ಟ ಮುಖ್ಯಮಂತ್ರಿಯನ್ನು ಮನೆಗೆ ಕಳುಹಿಸುವುದೆ ಎಂದು ತಿವಾರಿ ಬಿಜೆಪಿ ಹೈಕಮಾಂಡ್ ಗೆ ಸವಾಲು ಹಾಕಿದ್ದಾರೆ.

ಶೆಟ್ಟರ್ ಗೆ ಅದೃಷ್ಟ? : ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಹೆಚ್ಚಾಗುತ್ತಿದ್ದಂತೆಯೇ ಪಕ್ಷದೊಳಗೆ ಭಾರಿ ಚಟುವಟಿಕೆಗಳು ಆರಂಭವಾಗಿವೆ. ಯಡಿಯೂರಪ್ಪ ಉತ್ತರಾಧಿಕಾರಿಯ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಮುಖ್ಯವಾಗಿ ಅನಂತಕುಮಾರ್, ಕೆಎಸ್ ಈಶ್ವರಪ್ಪ, ಜನಾರ್ದನರೆಡ್ಡಿ, ಜಗದೀಶ್ ಶೆಟ್ಟರ್ ಮತ್ತು ಸುರೇಶ್ ಕುಮಾರ್ ಹೆಸರು ಚಾಲ್ತಿಯಲ್ಲಿವೆ. ಮೊದಲಿನ ಮೂರು ಹೆಸರಿಗೆ ಸಿಎಂ ಸ್ಥಾನದ ಸಾಧ್ಯತೆ ಕಡಿಮೆ. ಹೀಗಾಗಿ ಉತ್ತರಾಧಿಕಾರ ಪಟ್ಟ ಮಿಸ್ಟರ್ ಕ್ಲೀನ್ ಎಂದೇ ಹೆಸರುವಾಸಿಯಾಗಿರುವ ಲಿಂಗಾಯಿತರ ಮುಖಂಡ ಜಗದೀಶ್ ಶೆಟ್ಟರ್ ಅಥವಾ ಸುರೇಶ್ ಕುಮಾರ್ ಅದೃಷ್ಟ ಒಲಿಯುವ ಸಾಧ್ಯತೆ ಇದೆ.

ಗುರುವಾರ ಬೆಂಗಳೂರಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕರ್ನಾಟಕ ಬಿಜೆಪಿ ಉಸ್ತುವಾರಿ ವಹಿಸಿರುವ ಶಾಂತಕುಮಾರ್, ಅರುಣ್ ಜೈಟ್ಲೀ ಬರುವ ನಿರೀಕ್ಷೆ ಇದೆ. ಈ ನಾಯಕರು ರಾಜ್ಯ ಮುಖಂಡರು ಹಾಗೂ ಆರೆಸ್ಸೆಸ್ ನಾಯಕರನ್ನು ಭೇಟಿ ಮಾಡಿ ಹಗರಣದಲ್ಲಿ ಯಡಿಯೂರಪ್ಪ ಅವರ ಪಾತ್ರದ ಬಗ್ಗೆ ಮಾಹಿತಿ ಕಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

English summary
A series of land scams involving his sons and cabinet colleagues have put B S Yeddyurappa"s job as chief minister on a shaky wicket. It is now up to the BJP high command to take the final decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X