ಸರ್ಕಾರದ ರಕ್ಷಣೆಗೆ ಮಾಟ, ಮಂತ್ರ, ವಾಮಾಚಾರ?
ವಿಧಾನಸೌಧ ಮುಖ್ಯದ್ವಾರದ ಪೂರ್ವ ಭಾಗದಲ್ಲಿ ಮರವೊಂದರ ಕೆಳಗೆ ಮಾಟ, ಮಂತ್ರ ಮಾಡಿ ಅರಿಶಿನ ನೀರು ಚೆಲ್ಲಿ ಹೋಗಿರುವ ಕುರುಹುಗಳು ಪತ್ತೆಯಾಗಿದೆ. ಅಮಾವಾಸ್ಯೆಯ ದಿನದಮ್ದು ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಯಾರು, ಯಾವ ಉದ್ದೇಶಕ್ಕೆ ಈ ಮಾಟ ಮಾಡಿಸಿದ್ದಾರೆ ಎಂಬುದರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಆದರೆ, ಇದು ಕಿಡಿಗೇಡಿಗಳ ಕೃತ್ಯ ಎಂದು ವಿಧಾನಸೌಧ ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪೂರ್ವದಿಕ್ಕಿನ ದ್ವಾರದ ಬಳಿ ಮರದ ಕೆಳಗೆ ಕೋಳಿ ತಲೆ, ಗೊಂಬೆ, ಮೊಳೆ ಚುಚ್ಚಿದ ನಿಂಬೆ ಹಣ್ಣು, ಅರಿಶಿನ ನೀರು ಕಂಡು ಬಂದಿದೆ. ಪೊಲೀಸ್ ಸರ್ಪಗಾವಲಿನ ನಡುವೆ ವಿಧಾನಸೌಧದ ಬಳಿ ಬಂದು ಮಾಟ ಮಾಡಿರುವುದು ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಈ ಹಿಂದೆ ದೇವೇಗೌಡರಿಂದ ಹಿಡಿದು ಅನೇಕಾನೇಕ ಘಟಾನುಘಟಿ ರಾಜಕಾರಣಿಗಳ ಮೇಲೆ ವಶೀಕರಣ, ವಾಮಾಚಾರ ಪ್ರಯೋಗದ ಬಗ್ಗೆ ಆರೋಪ ಹೊರೆಸಲಾಗಿತ್ತಾದರೂ ಯಾವುದೂ ದೃಢಪಟ್ಟಿರಲಿಲ್ಲ. ವಿಧಾನಸೌಧದಲ್ಲಿ ಇಂದು ಕಂಡು ಬಂದಿರುವ ವಾಮಚಾರ ಪ್ರಯೋಗ ಸರ್ಕಾರದ ಪರವೋ ಅಥವಾ ವಿರೋಧವೋ ತಿಳಿದುಬಂದಿಲ್ಲ.
ಯಾರೋ ಕಿಡಿಗೇಡಿಗಳು ತಮಾಷೆಗೆ ಕೋಳಿ ತಲೆ, ನಿಂಬೆ ಹಣ್ಣು ಎಸೆದಿದ್ದಾರೆ ಎನ್ನುವಂತಿಲ್ಲ. ಕಾರಣ, ವಾಮಾಚಾರಿಗಳು ಬಳಸುವ ವಿಧಾನದಲ್ಲೇ ಎಲ್ಲಾ ಅವಶೇಷಗಳು ಕಂಡುಬಂದಿದ್ದು ಅನುಮಾನಕ್ಕೆ ಎಡೆ ಮಾಡಿದೆ ಎಂದು ವಿಧಾನಸೌಧದ ಸಿಬ್ಬಂದಿ ಹೇಳುತ್ತಾರೆ..