ಎಡೆಬಿಡದೆ ಸುರಿದ ಮಳೆಗೆ ಬೆಂಗಳೂರು ತತ್ತರ
ಕೆಲ ಪ್ರದೇಶಗಳಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆಗೆ ಮಳೆ ಪ್ರಾರಂಭವಾದರೆ, ಇನ್ನು ಕೆಲ ಪ್ರದೇಶಗಳಲ್ಲಿ ಮಧ್ಯಾಹ್ನ 1 ಗಂಟೆಯ ನಂತರ ಮಳೆ ಶುರುವಾಗಿದೆ. ಒಟ್ಟಿನಲ್ಲಿ ಮಳೆಯಿಂದಾಗಿ ಇಡೀ ನಗರವೇ ತೊಯ್ದು ತೊಪ್ಪೆಯಾಗಿದೆ. ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಮಳೆ ಥಳಿಸಿದೆ. ಸಾಯಂಕಾಲವಾದರೂ ಹನಿಸುತ್ತಲೇ ಇದ್ದು, ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ವಾರಾಂತ್ಯವಿದ್ದರೂ ಮೆಜೆಸ್ಟಿಕ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಾಹನ ಸಂಚಾರ ನಿಂತ ನೀರಿನಂತಾಗಿತ್ತು. ಚರಂಡಿಗಳ ಅವ್ಯವಸ್ಥೆಯಿಂದಾಗಿ ರಿಚ್ಮಂಡ್ ರಸ್ತೆ, ಮೆಜೆಸ್ಟಿಕ್ ಪ್ರದೇಶಗಳಲ್ಲಿ ರಸ್ತೆಯಲ್ಲಿ ಮೊಳಕಾಲುದ್ದ ನೀರು ನಿಂತು ಸಂಚಾರಕ್ಕೆ ತಡೆಯುಂಟು ಮಾಡಿತು. ಮಳೆ ಇದ್ದಕ್ಕಿದ್ದಂತೆ ಸುರಿದಿದ್ದರಿಂದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡ ದ್ವಿಚಕ್ರ ವಾಹನ ಚಾಲಕರು ಪರದಾಡಬೇಕಾಯಿತು.
ಕೇಂಬ್ರಿಜ್ ಲೇಔಟ್, ಕೆಂಗೇರಿ ಉಪನಗರ, ಶಿವಾಜಿನಗರ, ಬಸವನಗರ ಪ್ರದೇಶಗಳಲ್ಲಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಜನ ತೊಂದರೆಗೊಳಗಾಗಿದ್ದಾರೆ. ಮೋರಿಗಳು ಕಟ್ಟಿಕೊಂಡಿದ್ದರಿಂದ ನೀರು ಚರಂಡಿಯಲ್ಲಿದ್ದ ಹೊಲಸು ಕೂಡ ರಸ್ತೆಗೆ ನುಗ್ಗಿ ರಸ್ತೆಯಲ್ಲಿ ಕಾಲಿಡದಂತೆ ಮಾಡಿದೆ. ತೊಂದರೆಗೊಳಗಾದ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಆಟೋ ಚಾಲಕನ ಸಾವು : ರಿಚ್ಮಂಡ್ ರಸ್ತೆಯಲ್ಲಿ ತೆಂಗಿನ ಮರವೊಂದು ಧರೆಗುರುಳಿದ್ದರಿಂದ ಶ್ರೀರಾಂಪುರದ ನಿವಾಸಿ ಶ್ರೀನಿವಾಸ್ ಎಂಬುವವರು ಸಾವಿಗೀಡಾಗಿದ್ದಾರೆ. ಅವರಿದ್ದ ಆಟೋ ಸಂಪೂರ್ಣ ಜಖಂ ಆಗಿದೆ.
ದಟ್ಸ್ ಕನ್ನಡ ಹೂವಿನಂಗಡಿ 24/7