ದಿನದ ಪಾಸ್ ದರ ಏರಿಸಿ ಬಿಸಿ ಮುಟ್ಟಿಸಿದ ಬಿಎಂಟಿಸಿ

ರು.32ರ ಪಾಸ್ ಜೊತೆಗೆ 3 ರು. ಟಿಕೆಟ್ ನೀಡುವ ಬದಲು 8 ರು. ಟಿಕೆಟ್ ನೀಡಿ ನೇರವಾಗಿ ಪ್ರಯಾಣಿಕರ ಜೇಬಿಗೆ ಕೈ ಹಾಕಿದೆ. ಅಂದರೆ, ದಿನಪಾಸ್ ದರವನ್ನು 40 ರು.ಗೆ ಏರಿಸಿ ಏಕಾಏಕಿ ಶಾಕ್ ನೀಡಿದೆ.
ಇದರಿಂದಾಗಿ ದಿನದ ಪಾಸ್ ಬಳಸಿ ಓಡಾಡುವವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಸ್ಟ್ ಕೊನೆಯ ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ 1 ರು. ಏರುತ್ತದೆಂಬ ಸುದ್ದಿ ಬಂದಿದೆ. ಪೆಟ್ರೋಲ್ ದರ ಏರಿಕೆಯ ಮೊದಲೇ ಬಿಎಂಟಿಸಿ ದಿನ ಪಾಸ್ ದರವನ್ನು ಏರಿಸಿರುವುದು ಜನತೆಗೆ ನುಂಗಲಾಗದ ತುತ್ತಾಗಿದೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಯಾಣಿಕರೊಬ್ಬರು, ಇಲ್ಲಿ ನಮ್ಮಂಥ ಬಡವರ ಪಾಡನ್ನು ಕೇಳುವವರೇ ಇಲ್ಲ. ಅಕ್ರಮ ಗಣಿಗಾರಿಕೆಯೊಂದನ್ನೇ ಗುರಿಯಾಗಿಟ್ಟುಕೊಂಡು ಸರಕಾರ ಮತ್ತು ವಿರೋಧ ಪಕ್ಷಗಳು ಬಡಿದಾಡುತ್ತಿವೆ. ಯಾರಿಗೂ ಬೇಡವಾಗಿರದ ಪಾದಯಾತ್ರೆ ಮಾಡುತ್ತಿವೆ. ಇಲ್ಲಿ ಬೆಲೆ ಏರಿಸಿದ್ದನ್ನು ವಿರೋಧಿಸಲು ಒಬ್ಬ ವಿರೋಧ ಪಕ್ಷದ ಶಾಸಕನೂ ಮುಂದೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಮತ್ತೊಬ್ಬರು, ಸಾರ್ ಎಲ್ಲೆಡೆಯೂ ಬೆಲೆ ಏರಿಕೆಯಾಗಿದೆ, ಸ್ವಲ್ಪ ಇನ್ ಕ್ರಿಮೆಂಟಾದರೂ ಕೊಡಿ ಅಂತ ಫ್ಯಾಕ್ಟರಿ ಮಾಲಿಕನನ್ನು ಕೇಳಿದರೆ, ಬೇರೆ ಕೆಲಸ ನೋಡ್ಕೊ ಹೋಗು ಅಂತ ಮಾರುತ್ತರ ನೀಡುತ್ತಾನೆ. ನಮ್ಮಂಥ ಸಾಮಾನ್ಯರು ಎಲ್ಲಿ ಹೋಗಬೇಕು. ಪೆಟ್ರೋಲು ಹಾಕಿಸಿ ಗಾಡಿಯಲ್ಲೂ ಹೋಗುವ ಹಾಗಿಲ್ಲ, ಬಸ್ಸಲ್ಲೂ ಓಡಾಡುವ ಹಾಗಿಲ್ಲ ಅಂತ ಅಲವತ್ತುಕೊಂಡಿದ್ದಾರೆ.
ಬಡಜನತೆಗೆ ಸಾರಿಗೆ ಸಚಿವ ಆರ್ ಅಶೋಕ್ ಉತ್ತರ ನೀಡುವರೆ? ಶ್ರೀಸಾಮಾನ್ಯರ ಕೂಗು ಅವರಿಗೆ ಕೇಳುವುದೆ?












Click it and Unblock the Notifications