ದೇಶಪಾಂಡೆಗೆ ಮ್ಯಾಗಿ ಮುರುಗಿ ಮಸಾಲಾ

ರಾಜ್ಯಪಾಲರ ಹುದ್ದೆಗೆ ಘನತೆ ಮತ್ತು ಗೌರವ ಇದೆ. ಇದೆಲ್ಲಕ್ಕಿಂತ ಮಿಗಿಲಾಗಿ ಶಿಷ್ಟಾಚಾರ ಎಂಬುದಿದೆ. ಎಲ್ಲವನ್ನೂ ಗಾಳಿಗೆ ತೂರಿ ಉತ್ತರಾಖಂಡ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಭೇಟಿ ಯಾಗುವ ಔಚಿತ್ಯವೇನು ? ಎಂಬುದು ಹಲವು ಸಂವಿಧಾನ ತಜ್ಞರ ಪ್ರಶ್ನೆ. ತಾವು ಇದ್ದ ಜಾಗಕ್ಕೇ ಮುಖ್ಯಮಂತ್ರಿಯನ್ನು ಕರೆಸಿಕೊಂಡು ಆಳ್ವ ಅವರು ಸಮಾಲೋಚಿಸಬಹುದಿತ್ತು. ಆದರೆ, ಯಡಿಯೂರಪ್ಪ ಅವರಿದ್ದ ಜಾಗಕ್ಕೇ ಹೋಗಿದ್ದು ಔಚಿತ್ಯ ಪೂರ್ಣವಲ್ಲ. ರಾಜ್ಯಪಾಲರು- ಮುಖ್ಯಮಂತ್ರಿ ಯನ್ನು ಭೇಟಿ ಮಾಡಬಾರದು ಎಂಬ ನಿಯಮವೇನಿಲ್ಲ. ಆದರೆ ಅದಕ್ಕೂ ರೀತಿ-ರಿವಾಜು ಎಂಬುದಿದೆ. ಅದನ್ನು ಆಳ್ವ ಮರೆತಂತಿದೆ ಎನ್ನುತ್ತಾರೆ ಅವರು.
ಆಳ್ವ-ಯಡಿಯೂರಪ್ಪ ಭೇಟಿಯಲ್ಲಿ ವಿಶೇಷವೇನಿಲ್ಲ. ಇದು ಸೌಜನ್ಯದ ಭೇಟಿ ಎಂದು ಮುಖ್ಯಮಂತ್ರಿಯ ಸಚಿವಾಲಯ ಹೇಳುತ್ತದೆ. ಆದರೆ, ಅಂತಹ ಅನಿವಾರ್ಯತೆ ಏನಿತ್ತು ಎಂಬ ಕುತೂಹಲ ಕಾಡುತ್ತಿದೆ. ಭೇಟಿಯ ಹಿಂದಿರುವ ಕಾರಣ ವಿಧಾನ ಪರಿಷತ್ ಚುನಾವಣೆ. ಸ್ಥಳೀಯ ಸಂಸ್ಥೆಗಳಿಂದ ಪರಿಷತ್ತಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಆಸಕ್ತಿ ತೋರಿದ್ದಾರೆ. ಪಕ್ಷದ ಜಿಲ್ಲಾ ಸಮಿತಿ ಈ ಸಂಬಂಧ ನಿರ್ಣಯ ಅಂಗೀಕರಿಸಿದೆ.
ಒಂದು ವೇಳೆ ದೇಶಪಾಂಡೆ ಕಣಕ್ಕಿಳಿದರೆ ಅವರಿಗೆ ಗೆಲುವು ಸಿಗಬಾರದು ಎಂಬುದು ಆಳ್ವ ಅವರ ಉದ್ದೇಶ. ದೇಶಪಾಂಡೆ ಮತ್ತು ಆಳ್ವ ರಾಜಕೀಯವಾಗಿ ಕಡುವೈರಿಗಳು. ಯಾರೇ ಚುನಾವಣೆಗೆ ಸ್ಪರ್ಧಿಸಿದರೂ ಪರಸ್ಪರ ಕಾಲೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ
ಉತ್ತರಾಖಂಡ್ ರಾಜ್ಯಪಾಲರಾಗಿದ್ದರೂ ಆಳ್ವ ಸೇಡಿನ ರಾಜಕಾರಣ ಮರೆತಿಲ್ಲ. ಇದಕ್ಕೆ ಯಡಿಯೂರಪ್ಪ ನೆರವು ಕೇಳಿದ್ದಾರೆ. ಪರಿಷತ್ ಚುನಾವಣೆಗೆ ಉತ್ತರ
ಕನ್ನಡ ಜಿಲ್ಲೆಯಿಂದ ಅಭ್ಯರ್ಥಿಗಳಾಗಲು ಬಿಜೆಪಿಯಲ್ಲಿ ಹಲವರು ಪೈಪೋಟಿ ನಡೆಸಿದ್ದಾರೆ. ಅವರಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ ಕೂಡ ಒಬ್ಬರು.
ವಿಧಾನಸಭೆ ಚುನಾವಣೆಯಲ್ಲಿ ದೇಶಪಾಂಡೆ ಸೋಲಿಗೆ ಕಾರಣರಾದ ಪ್ರಮುಖರಲ್ಲಿ ಶಿವಾನಂದ ಒಬ್ಬರು.
ಪರಿಷತ್ ಚುನಾವಣೆಯಲ್ಲಿ ಅವರಿಗೇ ಟಿಕೆಟ್ ನೀಡುವಂತೆ ಯಡಿಯೂರಪ್ಪ ಅವರಿಗೆ ಆಳ್ವ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಶಿವಾನಂದ ವಿರುದ್ಧ ದೇಶಪಾಂಡೆ ಅವರಿಗೆ ಗೆಲುವು ಸುಲಭವಲ್ಲ ಎಂಬುದು ಆಳ್ವ ಲೆಕ್ಕಾಚಾರ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications