ನೀತಿ ಸಂಹಿತೆ ಉಲ್ಲಂಘನೆ: 58 ಪ್ರಕರಣ ದಾಖಲು
ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೀತಿ ಸಂಹಿತೆ ಉಲ್ಲಂಘನೆಗಾಗಿ ಬಿಜೆಪಿ ವಿರುದ್ಧ 24, ಕಾಂಗ್ರೆಸ್ ವಿರುದ್ಧ 9, ಜೆಡಿಎಸ್ ವಿರುದ್ಧ 9, ಬಿಎಸ್ಪಿ ವಿರುದ್ಧ 2 ಹಾಗೂ ಇತರ ಪಕ್ಷಗಳ ವಿರುದ್ಧ ಒಟ್ಟು 14 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಬಳ್ಳಾರಿಯಲ್ಲಿ 11, ಶಿವಮೊಗ್ಗದಲ್ಲಿ 4, ಧಾರವಾಡದಲ್ಲಿ 3 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2 ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದರು.
ನಗದು, ವಸ್ತುಗಳ ವಶ : ಮತದಾರರ ಓಲೈಕೆಗಾಗಿ ಹಂಚಲು ಉದ್ದೇಶಿಸಲಾಗಿದ್ದ ರೂ. 1.73 ಕೋಟಿ ಮೌಲ್ಯದ ನಗದು, ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ 501 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಆರು ಪ್ರಕರಣಗಳಲ್ಲಿ 41 ಲಕ್ಷ ನಗದು, 486 ಪ್ರಕರಣಗಳಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಮದ್ಯ ಹಾಗೂ 9 ಪ್ರಕರಣಗಳಲ್ಲಿ 57 ಲಕ್ಷ ರೂಪಾಯಿ ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರ ನೀಡಿದರು.
ಸಾರ್ವಜನಿಕ ಆಸ್ತಿ ವಿರೂಪಗೊಳಿಸಿದ 50 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದರಲ್ಲಿ 29 ಪ್ರಕರಣಗಳನ್ನು ಬಳ್ಳಾರಿ, 12 ಪ್ರಕರಣಗಳನ್ನು ಶಿವಮೊಗ್ಗದಲ್ಲಿ ಹಾಗೂ 6 ಪ್ರಕರಣಗಳನ್ನು ದಕ್ಷಿಣ ಕನ್ನಡದಲ್ಲಿ ದಾಖಲಿಸಲಾಗಿದೆ. ಹಿಂಸಾತ್ಮಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 12 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅದರಲ್ಲಿ 7 ಪ್ರಕರಣ ಶಿವಮೊಗ್ಗದಲ್ಲಿ, ಮಂಡ್ಯ ಹಾಗೂ ಚಿಕ್ಕಮಗಳೂರಿನಲ್ಲಿ ತಲಾ ಎರಡು ಪ್ರಕರಣ ದಾಖಲಿಸಲಾಗಿದೆ. ಮತದಾರರಿಗೆ ಆಮಿಷವೊಡ್ಡಿದಕ್ಕಾಗಿ 4 ಪ್ರಕರಣ ದಾಖಲಿಸಲಾಗಿದ್ದು, 2 ಬಳ್ಳಾರಿಯಲ್ಲಿ, ಹಾಸನ ಹಾಗೂ ಬಿಬಿಎಂಪಿ ದಕ್ಷಿಣ ವಲಯದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಚುನಾವಣಾ ಆಯೋಗವು ಈಗಾಗಲೇ 501 ಕ್ರಿಮಿನಲ್ ಮೊಕದ್ದಮೆ ಹೂಡಿದ್ದು, ಇನ್ನೂ 370 ದೂರುಗಳು ಪರಿಶೀಲನೆಯಲ್ಲಿವೆ ಎಂದು ವಿದ್ಯಾಶಂಕರ್ ಹೇಳಿದರು.
ಉತ್ತರ ಕನ್ನಡ, ಧಾರವಾಡ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವಿವಿಧ ಪಕ್ಷಗಳ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳ ವರದಿಯನ್ನು ವಿಡಿಯೋ ಸಿಡಿಯೊಂದಿಗೆ ಭಾರತ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕರ್ನಾಟಕ ಗೃಹ ಮಂಡಳಿಯ 959 ಎಕರೆ ಜಮೀನು ಖರೀದಿ ಪ್ರಕ್ರಿಯೆಗೆ ಚುನಾವಣಾ ಆಯೋಗವು ತಡೆಯಾಜ್ಞೆ ನೀಡಿದೆ ಎಂದು ಸಹ ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)