ಮಧುಗಿರಿ : ಜಯದ ಹಾದಿಯಲ್ಲಿ ಅನಿತಾ ಕುಮಾರಸ್ವಾಮಿ
ಮಧುಗಿರಿ, ಡಿ. 30 : ಆಪರೇಷನ್ ಕಮಲ ಸಕ್ಸಸ್ಫುಲ್ ಬಟ್ ದಿ ಪೇಷಂಟ್ ಈಸ್ ಡೆಡ್.
ಇದು ಮಧುಗಿರಿಯಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಸತ್ಯವಾಗಿದೆಯಾ? ಆಪರೇಷನ್ ಕಮಲದ ಮುಖಾಂತರ ಜೆಡಿಎಸ್ ನಲ್ಲಿದ್ದ ಸಿ. ಚೆನ್ನಿಗಪ್ಪ ಅವರನ್ನು ಸೆಳೆದಿದ್ದ ಡಾ. ಯಡಿಯೂರಪ್ಪ ಅವರ ಆಪರೇಷನ್ ಇಲ್ಲಿ ಕೈಕೊಟ್ಟಿದೆ. ಎಲ್ಲೆಂದರಲ್ಲಿ ಹಣ ಬಿಸಾಡಿದ್ದರಿಂದ ಸೊಂಕು ತಗುಲಿ ಆಪರೇಷನ್ ವಿಫಲವಾಗುವ ಹಂತದಲ್ಲಿದೆ.
ಪ್ರತಿಷ್ಠಿತ ಕಣವಾಗಿದ್ದ ಮಧುಗಿರಿಯಲ್ಲಿ ಕುರುಡು ಕಾಂಚಾಣದ ಮುಂದೆ ಹುಲ್ಲು ಹೊತ್ತ ಮಹಿಳೆ ಪರಾರಿಯಾಗುತ್ತಾಳೆಂದು ಬಿಜೆಪಿ ಬಗೆದಿದ್ದು. ಹಾಗೆಯೇ ಕಂಡೂಕೇಳರಿಯದಂತೆ ಹಣ ಮತ್ತು ಹೆಂಡ ಇಲ್ಲಿ ಹರಿದಿತ್ತು. ಕೆಸರಿನಲ್ಲಿ ಬೆಳೆಯುವ ಕಮಲ ಹೆಂಡದ ಹೊಳೆಯಲ್ಲಿ ಅರಳೀತೆ?
ಮನೆಮನೆಗೆ ಬಂದು ಮತಯಾಚಿಸಿದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಅರಿಷಿಣ ಕುಂಕುಮ, ರವಿಕೆ ನೀಡಿದ ಮಹಿಳೆಯರು ಈಗ ಉಡಿ ತುಂಬಿದ್ದಾರೆ. ದೇವೆಗೌಡರ ಕುಟುಂಬದ ಮುಖಾಂತರ ಕಣಕ್ಕಿಳಿದಿದ್ದ ಪ್ರಥಮ ಮಹಿಳೆ ಜಯದ ಹಾದಿಯಲ್ಲಿದ್ದಾರೆ.. ಒಂದು ಅಂದಾಜಿನ ಪ್ರಕಾರ ಅನಿತಾ ಕುಮಾರಸ್ವಾಮಿಗೆ 25 ಸಾವಿರಕ್ಕೂ ಹೆಚ್ಚಿನ ರವಿಕೆ ಉಡುಗೊರೆಯಾಗಿ ಬಂದಿತ್ತೆಂದರೆ ಮಹಿಳೆಯರು ಅನಿತಾ ಮೇಲೆ ಇಟ್ಟ ಭರವಸೆಯನ್ನು ಹುಸಿಗೊಳಿಸಿಲ್ಲ.
ಆರಂಭದ ಮತಎಣಿಕೆಯಲ್ಲಿ ಕಾಂಗ್ರೆಸ್ ನ ರಾಜಣ್ಣ ಮುಂದಿದ್ದರೂ ನಂತರದಲ್ಲಿ ಅವರ ಎಣಿಕೆ ತಿರುವುಮುರುವಾಗಿದೆ. ಹದಿಮೂರನೇ ಸುತ್ತಿನ ಮತ ಎಣಿಕೆಯ ನಂತರ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಅನಿತಾ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದರು.
ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರರಲ್ಲಿ ಮತಎಣಿಕೆ ಮುಕ್ತಾಯವಾಗಿದ್ದು, ಮಧುಗಿರಿ ಮತ್ತು ತುರುವೇಕೆರೆ ಫಲಿತಾಂಶ ಮಾತ್ರ ಬಾಕಿಯಿದೆ. ಅರಭಾವಿ(ಬಾಲಚಂದ್ರ ಜಾರಕಿಹೊಳಿ), ಹುಕ್ಕೇರಿ(ಉಮೇಶ್ ಕತ್ತಿ), ಕಾರವಾರ(ಆನಂದ್ ಆಸ್ನೋಟಿಕರ್), ದೇವದುರ್ಗ(ಶಿವನಗೌಡ) ಮತ್ತು ದೊಡ್ಡಬಳ್ಳಾಪುರ(ಜೆ ನರಸಿಂಹಸ್ವಾಮಿ)ದಲ್ಲಿ ಬಿಜೆಪಿ ನಿಚ್ಚಳ ಗೆಲುವು ಸಾಧಿಸಿದೆ. ಮದ್ದೂರಿನಲ್ಲಿ ಜೆಡಿಎಸ್ ನ ಕಲ್ಪನಾ ಸಿದ್ದರಾಜು ಜಯಭೇರಿ ಬಾರಿಸಿದ್ದಾರೆ. ಮಧುಗಿರಿ ಮತ್ತು ತುರುವೇಕೆರೆ ಕ್ಷೇತ್ರಗಳಲ್ಲಿ ಎಣಿಕೆ ಜಾರಿಯಲ್ಲಿದೆ.
(ದಟ್ಸ್ ಕನ್ನಡ ವಾರ್ತೆ)