ಸೋಮವಾರ ರಾತ್ರಿ ಇಬ್ಬರು ಒತ್ತೆಯಾಳುಗಳ ಬಿಡುಗಡೆ ನಿರೀಕ್ಷೆ
ಬೆಂಗಳೂರು : ರಾಜ್ಕುಮಾರ್ ಹಾಗೂ ಮತ್ತಿತರ ಮೂವರನ್ನು ಗಾಜನೂರು ಬಳಿಯ ತೋಟದ ಮನೆಯಿಂದ ವೀರಪ್ಪನ್ ಅಪಹರಿಸಿ 9 ದಿನಗಳಾಗುತ್ತಾ ಬಂದಿದ್ದು, ಸೋಮವಾರ ರಾತ್ರಿಯೇ ಇಬ್ಬರನ್ನು ವೀರಪ್ಪನ್ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ವೀರಪ್ಪನ್ ತಾನು ಕಳುಹಿಸಿದ ಕ್ಯಾಸೆಟ್ನಲ್ಲಿದ್ದ ಬೇಡಿಕೆಗಳಿಗೆ ಸಂಬಂಧಿಸಿದಂತೆ ತಮಿಳು ನಾಡು ಹಾಗೂ ಕರ್ನಾಟಕ ರಾಜ್ಯಗಳು ಸ್ಪಂದಿಸಿರುವ ಬಗ್ಗೆ ಸಂತುಷ್ಟನಾದಂತೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ವೀರಪ್ಪನ್ ಕನಿಷ್ಠ ಇಬ್ಬರನ್ನು ಸೋಮವಾರವೇ ಬಿಡುಗಡೆ ಮಾಡುತ್ತಾನೆ ಎಂದು ರಾಜ್ಯ ಸರಕಾರದ ಬೇಹುಗಾರಿಕೆ ಮೂಲಗಳು ಅಭಿಪ್ರಾಯಪಟ್ಟಿವೆ.
ರಾಜ್ಕುಮಾರ್ ಹಾಗೂ ಅವರ ಅಳಿಯ ಗೋವಿಂದರಾಜ್ ಅವರನ್ನು ತನ್ನ ವಶದಲ್ಲೇ ಉಳಿಸಿಕೊಂಡು, ಉಳಿದಿಬ್ಬರಾದ ನಾಗೇಶ್ ಮತ್ತು ನಾಗಪ್ಪ ಅವನ್ನು ವೀರಪ್ಪನ್ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ ಎಂದು ತಿಳಿದುಬಂದಿದೆ. ಉಭಯ ರಾಜ್ಯಗಳ ಅಧಿಕೃತ ಸಂಧಾನಕಾರ ನಕ್ಕೀರನ್ ಪತ್ರಿಕೆಯ ಗೋಪಾಲ್ ಹೊತ್ತು ತರಬಹುದಾದ ಅಧಿಕೃತ ಸಂದೇಶಕ್ಕಾಗಿ ಈಗ ಕಾಯಲಾಗುತ್ತಿದೆ..
ವೀರಪ್ಪನ್ ಸಹಚರರು ಲೈನ್ಮ್ಯಾನ್ ಒಬ್ಬನನ್ನು ಕೆಲವು ಮಾಹಿತಿಗಳಿಗಾಗಿ ವಿಚಾರಿಸಿರುವ ಬಗ್ಗೆ ತಿಳಿದುಬಂದಿದ್ದು, ಆತನ ವಿಚಾರಣೆಯಿಂದ ಪೊಲೀಸರಿಗೆ ಕೆಲವು ಸುಳಿವುಗಳು ಸಹ ದೊರೆತಿವೆ. ಈ ಸುಳಿವಿನ ಮೇರೆಗೆ ವೀರಪ್ಪನ್ ರಾಜ್ಕುಮಾರ್ ಹಾಗೂ ಇತರರನ್ನು ಕರ್ನಾಟಕ ಅರಣ್ಯ ಪ್ರದೇಶದ ಆಸುಪಾಸಿನ ಮನೆಯಾಂದರಲ್ಲಿ ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ.
ಮೊಕದ್ದಮೆ ವಾಪಸಿಗೆ ಸೂಚನೆ : ಏತನ್ಮಧ್ಯೆ ಮೈಸೂರಿನಲ್ಲಿ ವೀರಪ್ಪನ್ ಸಹಚರರ ವಿರುದ್ಧದ ಟಾಡಾ ಮೊಕದ್ದಮೆಗಳನ್ನು ವಾಪಸು ಪಡೆಯುವಂತೆ ಸರಕಾರ ಸೂಚನೆ ನೀಡಿದೆ ಎಂದೂ ತಿಳಿದುಬಂದಿದೆ.
ಸರಕಾರ ಬೇಡಿಕೆಗಳನ್ನು ಒಪ್ಪಿರುವ ಕಾರಣ ಕೂಡಲೇ ರಾಜ್ ಹಾಗೂ ಮತ್ತಿರರನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಕೋರಿದ್ದಾರೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ರಾಜ್ಯದಲ್ಲಿ ಜನಜೀವನ ಸಹಜವಾಗಿದೆ. ಆದರೂ ಆಯಕಟ್ಟಿನ ಸ್ಥಳಗಳಲ್ಲಿ ಹೊರರಾಜ್ಯಗಳಿಂದ ಬಂದಿರುವ ಪೊಲೀಸ್ ಪಡೆ ಹಾಗೂ ರಾಜ್ಯದ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಪುಣಜನೂರು ಅರಣ್ಯವಲಯದ ಚೆಕ್ಪೋಸ್ಟ್ನಲ್ಲಿರುವ ಸಿಬ್ಬಂದಿಗೆ ಎರಡು ಕಿಲೋ ಮೀಟರ್ ಹಿಂದೆ ಸರಿಯುವಂತೆ ಸೂಚನೆ ನೀಡಲಾಗಿದೆ. ವೀರಪ್ಪನ್ ಚೆಕ್ಪೋಸ್ಟ್ನಲ್ಲಿರುವ ಸಿಬ್ಬಂದಿಯನ್ನು ಪೊಲೀಸರೆಂದು ತಿಳಿದು, ಯಾವುದೇ ಅನಾಹುತಕ್ಕೆ ಕೈಹಾಕಬಾರದು ಎಂಬ ಕಾರಣಕ್ಕಾಗಿ ಈ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ನಗರದಲ್ಲಿ ಮತ್ತೆ 7 ದಿನಗಳ ಕಾಲ ಪ್ರತಿಬಂಧಕಾಜ್ಞೆಯನ್ನು ಮುಂದುವರಿಸಲಾಗಿದೆ.