ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್ ಕನ್ನಡದಲ್ಲಿ ಶಿವರಾತ್ರಿ ಮಹಾತ್ಮೆ

By Mrutyunjaya Kalmat
|
Google Oneindia Kannada News

Significance of Mahashivaratri, hindu festival
ಸರ್ವಶಕ್ತ ಶಿವನ ನಾಮ ಜಪಿಸಿ ಭವಭಾರ ಹಗುರಮಾಡಿಕೊಳ್ಳಲು ಆಸ್ಪದ ನೀಡುವ ದೈವಶ್ರದ್ಧೆಯ ಮಹತ್ವದ ದಿನ ಶಿವರಾತ್ರಿ ಮತ್ತೆ ಬಂದಿದೆ.

ಜೊತೆಗೆ ಕಣ್ಣಪ್ಪ, ಸಿರಿಯಾಳ, ಮಾರ್ಕಾಂಡೇಯ, ಕೊಡಗೂಸು ಮುಂತಾದ ಶಿವಶರಣರ ನೆನಪುಗಳು ಜೊತೆಗಿವೆ. ಬೇಸಿಗೆ ಜೋರಿರುವುದರಿಂದ ಜಾಗರಣೆ, ಕೋಸಂಬರಿ, ಪಾನಕಗಳ ಘಮಲು ಮತ್ತಷ್ಟು ಹೆಚ್ಚಲಿದೆ. ಇಷ್ಟಕ್ಕೂ ಪಾನಕ ಪನಿವಾರವಿಲ್ಲದೆ ಶಿವರಾತ್ರಿ ಎಂತು ಪೂರ್ಣಗೊಳ್ಳಲು ಸಾಧ್ಯ. ಕಳೆದ ವರ್ಷದಂತೆ ಈ ವರ್ಷವೂ ಶಿವರಾತ್ರಿ ದಿನದಂದು ಭಕ್ತಾಧಿಗಳಿಗೆ ಗಂಗಾಜಲ ವಿತರಿಸುವ ಕೆಲಸವನ್ನು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹೊತ್ತುಕೊಂಡಿದ್ದಾರೆ.

ರಾಜ್ಯಾದ್ಯಂತ ಶುಕ್ರವಾರ (ಫೆಬ್ರವರಿ 12) ಎಲ್ಲ ಶಿವ ದೇಗುಲಗಳಲ್ಲೂ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ನಡೆಯಲಿದೆ. ಮಹಾ ಶಿವರಾತ್ರಿ ಹಬ್ಬದಲ್ಲಿ ಪ್ರಳಯಕಾಲಕನಾದ ಪರಶಿವನನ್ನು ಅನನ್ಯ ಶ್ರದ್ಧಾ ಮತ್ತು ಭಕ್ತಿಯಿಂದ ನಾಲಕ್ಕು ಯಾಮಗಳಲ್ಲಿ ಪೂಜಿಸಲಾಗುತ್ತದೆ. ಆ ದಿನದಂದು ಶಿವನಿಗೆ ಅತ್ಯಂತ ಇಷ್ಟವಾದ ಬಿಲ್ವಪತ್ರೆಯನ್ನು ಅರ್ಪಿಸಿ, ಉಪವಾಸವನ್ನೂ ಆಚರಿಸುತ್ತಾರೆ. ಆ ದಿನ, ಅಂದರೆ ನಾಳೆ ಜಾಗರಣೆಯನ್ನು ಮಾಡಿ ಶಿವಜಪ, ಭಜನೆಗಳನ್ನು ಮಾಡುತ್ತಾ ಆ ಪರಶಿವನ ಕೃಪೆಗೆ ಪಾತ್ರರಾಗುತ್ತಾರೆ. ಮಾಘಮಾಸದ ಚತುರ್ದಶಿಯಂದು ಬರುವ ಈ ಮಹಾಶಿವರಾತ್ರಿ ಸಮಸ್ತರಿಗೂ ಸನ್ಮಂಗಳವನ್ನು ಉಂಟುಮಾಡಲಿ.

ಹಿಂದೂಗಳ ನಂಬಿಕೆಯ ರೀತ್ಯ ದೇವತೆಗಳಲ್ಲಿ ಸರ್ವ ಶ್ರೇಷ್ಠರೆಂದರೆ ತ್ರಿಮೂರ್ತಿಗಳು. ಸೃಷ್ಟಿ, ಸ್ಥಿತಿ, ಲಯಗಳನ್ನು ನಿಯಂತ್ರಿಸುವವರೇ ಇವರು. ಬ್ರಹ್ಮದೇವ ಸೃಷ್ಟಿಕರ್ತನಾದರೆ, ಸ್ಥಿತಿ ಸ್ಥಾಪಕತ್ವದ ದೃಷ್ಟಿಯಿಂದ ಶಿಷ್ಟ ರಕ್ಷಣೆ, ದುಷ್ಟ ಶಿಕ್ಷಣೆ ಮಾಡುವಾತ ಶ್ರೀಮನ್ನಾರಾಯಣ. ಇನ್ನು ಲಯದ ಹೊಣೆ ಶಿವನದು.

ಪ್ರತಿ ತಿಂಗಳೂ ಚತುರ್ದಶಿಯಂದು ಮಾಸ ಶಿವರಾತ್ರಿ. ಆದರೆ, ಮಾಘ ಕೃಷ್ಣ ಚತುರ್ದಶಿಯಂದು ಮಹಾಶಿವರಾತ್ರಿ. ಮಹಾಶಿವರಾತ್ರಿಯಂದು ಲಯಕರ್ತನಾದ ಶಿವ ಹುಟ್ಟಿದನೆಂಬ ನಂಬಿಕೆ ಕೆಲವರದು. ಇಲ್ಲ ಇಲ್ಲ, ಸಮುದ್ರ ಮಂಥನ ಕಾಲದಲ್ಲಿ ಶಿವನು ಹಾಲಾಹಲ ಕುಡಿದ ದಿನವೇ ಶಿವರಾತ್ರಿ ಎಂಬುದು ಇನ್ನು ಕೆಲವರ ವಾದ. ಮತ್ತೆ ಕೆಲವರು ಶಿವ ಪಾರ್ವತಿಯನ್ನು ವರಿಸಿದ ದಿನ ಶಿವರಾತ್ರಿ ಎನ್ನುತ್ತಾರೆ. ಆದರೆ, ಶಿವರಾತ್ರಿಯ ದಿನ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ರಾತ್ರಿಯಿಡೀ ಪೂಜಿಸುವುದು ವಾಡಿಕೆ. ಇದಕ್ಕೆ ಬೇಡರ ಕಣ್ಣಪ್ಪನ ತ್ಯಾಗದ ಕತೆಯೂ ಪೂರಕವಾಗಿದೆ.

ಜಾಗರಣೆ, ವೈಜ್ಞಾನಿಕ ವಿಶ್ಲೇಷಣೆ : ಮಾನವನ ಬದುಕಿನ ಚಕ್ರ ಸೃಷ್ಟಿ, ಸ್ಥಿತಿ ಹಾಗೂ ಲಯಗಳನ್ನು ಅವಲಂಬಿಸಿದೆ. ಜಲ, ನೆಲ, ಗಾಳಿ, ಬೆಂಕಿ, ಆಕಾಶಗಳೆಂಬ ಪಂಚಭೂತಗಳಿಂದ ಆದ ಮಾನವ ಪ್ರಕೃತಿ ನಿಯಮಗಳಿಗೆ ಒಳಪಟ್ಟಿದ್ದಾನೆ. ಪ್ರಕೃತಿಗೂ ಒಂದು ನಿಯಮಿತ ನಿಯಮ, ಚಲನೆ ಇದೆ.

ಭೂಮಿಯ ಸುತ್ತ ಚಲಿಸುವ ಚಂದ್ರ ಒಂದು ದಿನದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಇದಕ್ಕೆ ತಿಥಿ (ಪಾಡ್ಯ, ಬಿದಿಗೆ.....) ಎನ್ನುತ್ತಾರೆ. ಭೂಮಿಯ ಒಂದು ನಿಗದಿತ ಕೋನಕ್ಕೆ ಚಂದ್ರನು ಬಂದಾಗ ಆತನ ಪ್ರಭಾವ ಹೆಚ್ಚಾಗಿರುತ್ತದೆ. ಚಂದ್ರನು ಭೂಮಿಯ 180 ಡಿಗ್ರಿ ಕೇಂದ್ರ- ಕೋನಕ್ಕೆ ಬಂದಾಗ ಆಕರ್ಷಣೆ ಅಧಿಕವಾಗಿರುತ್ತದೆ. ಹೀಗಾಗೇ ಸಮುದ್ರದ ಅಲೆಗಳ ಮೊರೆತವೂ ಹೆಚ್ಚುತ್ತದೆ.

ಮಿಗಿಲಾಗಿ ಶೇಕಡಾ 80ರಷ್ಟು ಜಲವರ್ಗಕ್ಕೆ ಸೇರಿದ ಮನುಷ್ಯನ ಮೆದುಳು, ಜೀರ್ಣಾಂಗ, ಪಿತ್ತಕೋಶ ಹಾಗೂ ಮೂತ್ರ ಜನಕಾಂಗಳ ಮೇಲೂ ಚಂದ್ರನ ಪ್ರಭಾವ ಈ ಅವಧಿಯಲ್ಲಿ ತೀಕ್ಷ್ಣವಾಗಿರುತ್ತದಂತೆ. ಅದಕ್ಕೆ ಅಮಾವಾಸ್ಯೆ ಮತ್ತು ಪೂರ್ಣಿಮೆಯಲ್ಲಿ ಮಾನಸಿಕ ರೋಗಿಗಳಿಗೆ ಉದ್ರೇಕ ಹೆಚ್ಚುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಮಾಘ ಮಾಸದ ಚತುರ್ದಶಿಯಂದು ಕ್ಷೀಣ ಚಂದ್ರನ ಪ್ರಭಾವ ಇರುವುದರಿಂದ ಅಂದು ಜಾಗರೂಕರಾಗಿದ್ದು, ಜಾಗರಣೆ ಮಾಡಿದರೆ (ನಿದ್ದೆ ಮಾಡದೆ ಎಚ್ಚರ ಸ್ಥಿತಿ) ಮಾನವನಲ್ಲಿ ಉತ್ಸಾಹ ಹೆಚ್ಚಿ, ಆತನ ಚಿಂತನೆ ವೃದ್ಧಿಸುತ್ತದೆ ಎಂಬ ವೈಜ್ಞಾನಿಕ ಕಾರಣವನ್ನೂ ಜ್ಯೋತಿಷ್ಯರು ಹಾಗೂ ಅಳಲೇಕಾಯಿ ಪಂಡಿತರು ನೀಡುತ್ತಾರೆ.

ಆಚರಣೆ : ಆರೋಗ್ಯದ ದೃಷ್ಟಿಯಿಂದ ನೀವು ಜಾಗರಣೆ ಮಾಡಿ ಎಂದರೆ ಯಾರೂ ಮಾಡರು, ಹೀಗಾಗೇ ಶಾಸ್ತ್ರದ ಕಟ್ಟಳೆಯಂತೆ. ರಾತ್ರಿ ನಿದ್ದೆ ಮಾಡದೇ ಇರಬೇಕಾದರೆ, ಹೊಟ್ಟೆ ಹಸಿದಿರಬೇಕು ಎಂಬ ತತ್ವ ಇದೆ. ಇದಕ್ಕಾಗೇ ಮಹಾ ಶಿವರಾತ್ರಿಯ ದಿನ ಉಪವಾಸ ಇರಬೇಕು ಎಂಬ ನಿಯಮವಂತೆ. ಯಾರು ಒಪ್ಪಲಿ ಬಿಡಲಿ, ಅನಾದಿ ಕಾಲದಿಂದಲೂ ಈ ಆಚರಣೆ ಅನೂಚಾನವಾಗಿ ನಡೆದು ಬಂದಿದೆ. ನಡೆಯುತ್ತಲೇ ಇರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X