ಎಂಥಾ ಅಪ್ಪನಿಗೆ ಎಂಥಾ ಮಗ, ಜೀವರಾಜನ ಪುತ್ರ ಆದಿತ್ಯ
ಜನತಾ ಪರಿವಾರದ ಉತ್ತಮ ಸಂಘಟಕರಾಗಿದ್ದ ದಿವಂಗತ ಜೀವರಾಜ ಆಳ್ವ ಹಾಗೂ ಒಂದುಕಾಲದ ಜನಪ್ರಿಯ ನೃತ್ಯಗಾರ್ತಿ ನಂದಿನಿ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಹೆಸರು ಸದ್ಯ ಈ ದಿನ ಟ್ರೆಂಡಿಂಗ್ ಹೆಸರು. ದಿವಂಗತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಜೀವರಾಜ ಆಳ್ವ ಎಂದರೆ ರಾಜಕೀಯ ವಲಯದಲ್ಲಿ ಇಂದಿಗೂ ಒಳ್ಳೆ ಹೆಸರಿದೆ. ಆದರೆ ಇಂದು ಡ್ರಗ್ಸ್ ದಂಧೆಯಲ್ಲಿ ಸಿಲುಕಿಕೊಂಡಿರುವ ಆದಿತ್ಯ(31) ವಿರುದ್ಧ ಜೀವರಾಜ್ ಆಳ್ವ ಅವರ ಮಂಗಳೂರು ಮೂಲದ ಕುಟುಂಬಸ್ಥರು ಗರಂ ಆಗಿದ್ದಾರೆ.
''ಅಪ್ಪನ ಹೆಸರು ಎಂದೋ ಹಾಳು ಮಾಡಿದ್ದಾನೆ. ಇಂದು ಸಿಸಿಬಿ ದಾಳಿಯಾದ ಜಾಗದಲ್ಲಿ ಫಾರ್ಮ್ ಹೌಸ್ ನಿರ್ಮಿಸುವುದಾಗಿ ಹೇಳಿದ್ದ ಆದಿತ್ಯ ಐಷಾರಾಮಿ ರೆಸಾರ್ಟ್ ನಿರ್ಮಿಸಿದ್ದಾನೆ. ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವ ಆರೋಪ ಕೇಳಿ ಬಂದಿದೆ. ನಾವುಗಳು ಎಂದೋ ಆತನನ್ನು ದೂರ ಇಟ್ಟಿದ್ದೇವೆ'' ಎಂದು ನೊಂದು ಖಾಸಗಿ ವಾಹಿನಿ ಜೊತೆ ಕುಟುಂಬದ ಆಪ್ತರೊಬ್ಬರು ಹೇಳಿದ್ದಾರೆ.
ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ?
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿದ್ದು ಎಲ್ಲರಿಗೂ ತಿಳಿದಿರಬಹುದು. ನಟಿ ಸಂಜನಾ ಗಲ್ರಾಣಿ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಆದಿತ್ಯ ಆಳ್ವ ಆರೋಪಿ ನಂಬರ್ 6 ಆಗಿದ್ದಾನೆ. ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಹಲವರ ಮೇಲೆ ಕಾಟನ್ ಪೇಟೆ ಠಾಣೆ ಪೊಲೀಸರು ಎಫ್ಐಆರ್ ಹಾಕಲಾಗಿದೆ. ಆದರೆ, ರಾಗಿಣಿ ಅವರ ಆಪ್ತ ಎನ್ನಲಾದ ರವಿಶಂಕರ್ ಹೆಸರು ಮಾತ್ರ ಎಲ್ಲೂ ಪ್ರಸ್ತಾಪಿಸಲಾಗಿಲ್ಲ.
ಜೀವರಾಜ್ ಆಳ್ವ ನೆನಪು
ಕರಾವಳಿಯ ಬಂಟರ ಕುಟುಂಬದಿಂದ ಬಂದ ಜೀವರಾಜ್ ಆಳ್ವ ಜನತಾದಳ(ಯುನೈಟೆಡ್) ಉಪಾಧ್ಯಕ್ಷರಾಗಿದ್ದರು. ನಂತರ ಕೆಲ ಕಾಲ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಜೆಪಿ ಚಳವಳಿಯಲ್ಲಿ ತೊಡಗಿಕೊಂಡು ವೈದ್ಯ ವೃತ್ತಿಯನ್ನು ಕೈಬಿಟ್ಟ ಆಳ್ವಗೆ ರಾಮಕೃಷ್ಣ ಹೆಗಡೆ ಅವರು ರಾಜಕೀಯದ ಮೊದಲ ಪಾಠ ಹೇಳಿಕೊಟ್ಟರು. ಹಾಗೆ ನೋಡಿದರೆ ಜೀವರಾಜ್ ಅವರ ತಂದೆ ನಾಗಪ್ಪ ಆಳ್ವ ಅವರು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದವರು. ಉತ್ತಮ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಜೀವರಾಜ್ ಅವರು ಶಾಸ್ತ್ರೀಯ ನೃತ್ಯಪಟು ನಂದಿನಿ ಸೇಥ್ ಅವರನ್ನು ಇಷ್ಟಪಟ್ಟು ಮದುವೆಯಾದರು. 2001ರಲ್ಲಿ ಜೀವರಾಜ್ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ನಂದಿನಿ ಆಳ್ವಾ
ಜೀವರಾಜ್ ರನ್ನು ಕಳೆದುಕೊಂಡಾಗ ಆದಿತ್ಯ 12 ಹಾಗೂ ಪ್ರಿಯಾಂಕ 8 ವರ್ಷದ ಇಬ್ಬರು ಮಕ್ಕಳನ್ನು ನೋಡಿಕೊಂಡು ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡ ನಂದಿನಿ ಅವರು "ಬೆಂಗಳೂರು ಹಬ್ಬ" ದ ಮುಖ್ಯ ರುವಾರಿಗಳಲ್ಲಿ ಒಬ್ಬರು. ನಂತರ 2014ರಲ್ಲಿ ಕೊನೆ ಕ್ಷಣದಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಜನತಾದಳ(ಸೆಕ್ಯುಲರ್) ಅಭ್ಯರ್ಥಿಯಾಗಿ ನಂದಿನಿ ಆಳ್ವಾ ಕಣಕ್ಕಿಳಿದರೂ ರಾಜಕೀಯ ಜೀವನ ಲಾಂಚ್ ಆಗಲೇ ಇಲ್ಲ. ಇತ್ತ ಪುತ್ರ ಆದಿತ್ಯನಿಗೆ ರಿಯಲ್ ಎಸ್ಟೇಟ್ ಉದ್ಯಮವೇ ಸಾಕಿತ್ತು. ರಾಜಕೀಯಕ್ಕಿಂತ ಹೈ ಫೈ ಜೀವನ, ಮೋಜು ಮಸ್ತಿಯೇ ಸಾಕೆನಿಸಿತು.
ರೆಸಾರ್ಟ್ ಲೈಸೆನ್ಸ್ ನವೀಕರಿಸದ ಆದಿತ್ಯಾ ಆಳ್ವಾ
ಈ ಪ್ರಕರಣದಲ್ಲಿ ಆರೋಪಿಗಳ ಪಟ್ಟಿ
ಶಿವಶಂಕರ್ ಎಂಬ ಪೆಡ್ಲರ್ ಈ ಪ್ರಕರಣದಲ್ಲಿ ಆರೋಪಿ ನಂ.1 ಎನಿಸಿಕೊಂಡಿದ್ದಾನೆ. ರಾಗಿಣಿ ದ್ವಿವೇದಿ ಎ2, ಫ್ಯಾಷನ್ ಲೋಕದ ಸೆಲೆಬ್ರಿಟಿ, ಪಾರ್ಟಿ ಆಯೋಜಕ ವಿರೇನ್ ಖನ್ನಾ ಎ3, ಪ್ರಶಾಂತ್ ರಂಕಾ ಎ 4, ವೈಭವ್ ಜೈನ್ ಎ 5, ಆದಿತ್ಯ ಆಳ್ವ ಎ 6, ಸೆನೆಗೆಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಎ 7, ಸೈಮನ್ ಎ 8, ಪ್ರಶಾಂತ್ ಬಾಬು ಎ 9, ಅಶ್ವಿನ್ ಅಲಿಯಾಸ್ ಬೂಗಿ ಎ 10, ರಾಹುಲ್ ತೋನ್ಸೆ ಎ 11, ವಿನಯ್ ಎ 12 ಎಂದು ಕಾಟನ್ ಪೇಟೆ ಪೊಲೀಸರು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ಪೈಕಿ ಶಿವಶಂಕರ್, ಆದಿತ್ಯ ಸೇರಿ ಹಲವರು ಇನ್ನೂ ನಾಪತ್ತೆಯಾಗಿದ್ದಾರೆ.
ಆದಿತ್ಯ ಆಳ್ವ ಸೇರಿದಂತೆ ಆರೋಪಿಗಳ ವಿರುದ್ಧ ಆರೋಪ
ಆದಿತ್ಯ ಆಳ್ವ ಸೇರಿದಂತೆ ಆರೋಪಿಗಳ ವಿರುದ್ಧ ಎನ್ ಡಿ ಪಿಎಸ್ ಕಾಯ್ದೆ ಸೆಕ್ಷನ್ 21, 21 ಸಿ, 27 ಎ, 27 ಬಿ, 29 ಹಾಗೂ ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಹಾಕಿರುವ ಸೆಕ್ಷನ್ ಪ್ರಕರಣ ಆರೋಪಿಗಳ ಮೇಲಿನ ಆರೋಪ ಸಾಬೀತಾದರೆ ಕನಿಷ್ಠ 10 ರಿಂದ 20 ವರ್ಷ ಜೈಲುಶಿಕ್ಷೆ ಹಾಗೂ 1 ಲಕ್ಷ ರು ತನಕ ದಂಡ ವಿಧಿಸಬಹುದು.
ಹೌಸ್ ಆಫ್ ಲೈಫ್ ರೆಸಾರ್ಟ್ ನ ಮೇಲೆ ಮೇಲೆ ದಾಳಿ
ಹೆಬ್ಬಾಳ ಬಳಿ ಇರುವ ಹೌಸ್ ಆಫ್ ಲೈಫ್ ರೆಸಾರ್ಟ್ ನ ಮೇಲೆ ಮೇಲೆ ದಾಳಿ ನಡೆಸಿರುವ ಸಿಸಿಬಿ, ಸದ್ಯ ಮ್ಯಾನೇಜರ್ ಸಿದ್ದರಾಜು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಆರೋಪಗಳನ್ನು ಅಲ್ಲಗೆಳೆದಿರುವ ಆದಿತ್ಯ ಮ್ಯಾನೇಜರ್ ಸ್ಟ್ಯಾನಿ, ಇಲ್ಲಿ ಅನೈತಿಕ ಚಟುವಟಿಕೆ, ಡ್ರಗ್ಸ್ ಸೇವನೆ ನಡೆಸಿಲ್ಲ, ಹೈ ಫೈ ಪಾರ್ಟಿ ನಡೆಯುತ್ತಿತ್ತು. ನಾಲ್ಕಾರು ತಿಂಗಳ ಹಿಂದೆ ಒಂದು ಪಾರ್ಟಿ ಬಿಟ್ಟರೆ ನಂತರ ಯಾವುದೇ ಪಾರ್ಟಿ ನಡೆದಿಲ್ಲ. ಸದ್ಯ ರೆಸಾರ್ಟ್ ಮುಚ್ಚುವ ಬಗ್ಗೆ ಮಾತುಕತೆ ನಡೆದಿತ್ತು ಎಂದಿದ್ದಾರೆ.
ನಂದಿನಿ ಆಳ್ವ 'ತಮಿಳು' ಪ್ರೇಮ ಕನ್ನಡಿಗರ ಕಿಡಿ
ಅಮೆರಿಕದಲ್ಲಿ ಆಳ್ವ ಕುಟುಂಬ ನೆಲೆ
ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಹಾಗೂ ನೃತ್ಯಗಾರ್ತಿ ನಂದಿನಿ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಈ ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ. ಆದಿತ್ಯ ಅವರ ಸೋದರಿ ಪ್ರಿಯಾಂಕಾ ಅವರು ನಟ ವಿವೇಕ್ ಒಬೆರಾಯ್ ವರಿಸಿದ್ದಾರೆ. ಉದ್ಯಮಿಯಾಗಿ ಗುರಿಸಿಕೊಂಡಿರುವ ಆದಿತ್ಯ ಆಳ್ವ ಅವರ ಸದಾಶಿವ ನಗರದ 10ನೇ ಕ್ರಾಸ್ ನಲ್ಲಿರುವ ಮನೆ ಸದ್ಯ ಖಾಲಿಯಾಗಿದ್ದು, ಆಳ್ವ ಎಲ್ಲಿದ್ದಾರೆ ಎಂಬುದರ ಮಾಹಿತಿಯಿಲ್ಲ, ಬಹುಶಃ ವಿದೇಶಕ್ಕೆ ಹಾರಿರಬಹುದು ಎಂದು ಸಿಸಿಬಿ ಕೂಡಾ ಸ್ಪಷ್ಟಪಡಿಸಿದೆ. ಮ್ಯಾನೇಜರ್ ಸ್ಟ್ಯಾನಿ ಕೂಡಾ ಈ ವಿಷಯ ದೃಢಪಡಿಸಿದ್ದು, ನಂದಿನಿ ಆಳ್ವ ಅವರು ಯುಎಸ್ ಗೆ ತೆರಳಿದ್ದು ಲಾಕ್ಡೌನ್ ನಿಂದಾಗಿ ಮತ್ತೆ ಭಾರತಕ್ಕೆ ವಾಪಸ್ ಬರಲು ಆಗಿರಲಿಲ್ಲ ಎಂದಿದ್ದಾರೆ.