Get Updates
Get notified of breaking news, exclusive insights, and must-see stories!

ಪಾಕಿಸ್ತಾನ ಮತ್ತು ಕಾಶ್ಮೀರದ ವಿಚಾರದಲ್ಲಿ ಏಕಾಂಗಿಯಾಗಿದ್ದ ವಾಜಪೇಯಿ

ನವದೆಹಲಿ, ಆಗಸ್ಟ್ 18: ಮೂರನೇ ಬಾರಿಗೆ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯುದ್ದಕ್ಕೂ ಸವಾಲುಗಳು ಎದುರಾಗಿದ್ದವು. ಮುಖ್ಯವಾಗಿ ಪಾಕಿಸ್ತಾನದ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಸಂದಿಗ್ಧ ಸನ್ನಿವೇಶಗಳನ್ನು ಎದುರಿಸಬೇಕಾಗಿತ್ತು.

ಕಂದಹಾರ್ ಹೈಜಾಕ್, ಕಾರ್ಗಿಲ್ ಯುದ್ಧ, ಸಂಸತ್ ದಾಳಿಯಂತಹ ಘಟನೆಗಳು ನೀಡಿದ್ದ ಸವಾಲುಗಳು ಬಹುದೊಡ್ಡದಾಗಿದ್ದವು ಮತ್ತು ಭದ್ರತಾ ಚಟುವಟಿಕೆಗಳ ವಿಚಾರಕ್ಕಾಗಿಯೇ ವಾಜಪೇಯಿ ಅವರು ಹೆಚ್ಚಿನ ಸಮಯವನ್ನು ಮೀಸಲಿಡುವಂತಾಗಿತ್ತು.

2000-2004ರ ಅವಧಿಯಲ್ಲಿ ವಾಜಪೇಯಿ ಅವರೊಂದಿಗೆ ಸುದೀರ್ಘ ಸಂಬಂಧ ಹೊಂದಿದ್ದ ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್‌ನ ಮಾಜಿ ಮುಖ್ಯಸ್ಥ ಸಿ.ಡಿ ಸಹಾಯ್, ಹೇಳುವಂತೆ ವಾಜಪೇಯಿ ಚಿನ್ನದಂತಹ ಹೃದಯವುಳ್ಳವರು. ಮಾತು ಕಡಿಮೆ ಮತ್ತು ಕೆಲಸ ಜಾಸ್ತಿ.

ಸಾರ್ವಜನಿಕವಾಗಿ ಹೆಚ್ಚು ತಿಳಿದಿಲ್ಲದ, ವಾಜಪೇಯಿ ಅವರೊಂದಿಗಿನ ತಮ್ಮ ಬಹು ಸ್ಮರಣೀಯ ಗಳಿಗೆಗಳ ಕುರಿತು ಸಹಾಯ್ 'ಒನ್ ಇಂಡಿಯಾ'ದೊಂದಿಗೆ ಹಂಚಿಕೊಂಡರು.

ವಾಜಪೇಯಿ ಅವರೊಂದಿಗೆ ನನ್ನ ಮೊದಲ ಭೇಟಿ

ವಾಜಪೇಯಿ ಅವರೊಂದಿಗೆ ನನ್ನ ಮೊದಲ ಭೇಟಿ

ವಾಜಪೇಯಿ ಅವರನ್ನು ನಾನು ಮೊದಲು ಭೇಟಿ ಮಾಡಿದ್ದು 2000ದಲ್ಲಿ. ಆಗ ಕಂದಹಾರ್ ವಿಮಾನ ಅಪಹರಣ ನಡೆದಿತ್ತು. ಉಗ್ರರ ಜತೆ ಸಂಧಾನಕ್ಕಾಗಿ ಅಜಿತ್ ದೋವಲ್ ಮತ್ತು ವಿವೇಕ್ ಕಟ್ಜು ಅವರೊಂದಿಗೆ ಅಪ್ಘಾನಿಸ್ತಾನಕ್ಕೆ ತೆರಳಲು ನನ್ನನ್ನೂ ಆಯ್ಕೆ ಮಾಡಲಾಗಿತ್ತು.

ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆದಿತ್ತು. ಅಲ್ಲಿನ ಕಾರ್ಯಯೋಜನೆಗಳ ಬಗ್ಗೆ ನಾನು ಸಿಸಿಎಸ್‌ಗೆ ಮಾಹಿತಿ ನೀಡಬೇಕಾಗಿತ್ತು. ಸಾಮಾನ್ಯವಾಗಿ 10 ನಿಮಿಷಗಳಲ್ಲಿ ಮುಗಿಯುವ ಸಭೆ ಅಂದು 40 ನಿಮಿಷ ತೆಗೆದುಕೊಂಡಿತ್ತು.

40 ನಿಮಿಷಗಳವರೆಗೆ ನಾನು ಸಿಸಿಎಸ್‌ಗೆ ವಿವರಣೆ ನೀಡಿದೆ. ಅದರಲ್ಲಿ ದಾಳಿಕೋರರು ಹೇಗೆ ಬಂದರು, ಹೇಗೆ ದಾಖಲೆಗಳನ್ನು ಪಡೆದುಕೊಂಡರು ಇತ್ಯಾದಿ ವಿವರಗಳು ಸೇರಿದ್ದವು. ಸಂಧಾನದ ಹೊಣೆಗಾರಿಕೆಯನ್ನು ದೋವಲ್ ಅವರು ನೋಡಿಕೊಳ್ಳುವುದು ಮತ್ತು ಕಟ್ಜು ಅವರು ಅದರ ರಾಜತಾಂತ್ರಿಕ ಸಂಗತಿಗಳನ್ನು ನಿಭಾಯಿಸುವುದಾಗಿ ನಿರ್ಧರಿಸಲಾಗಿತ್ತು.

ದೇಶ ಅವರೊಂದಿಗಿರಲಿಲ್ಲ

ದೇಶ ಅವರೊಂದಿಗಿರಲಿಲ್ಲ

ಅದು ಅತ್ಯಂತ ಕಠಿಣ ಸಮಯವಾಗಿತ್ತು. ಅಂದು ದೇಶ ವಾಜಪೇಯಿ ಅವರ ಬೆನ್ನಿಗಿರಲಿಲ್ಲ. ಅದರ ಬದಲು ಜನರು ತಮ್ಮ ರಾಜಕೀಯ ನಿಲುವನ್ನು ಬೆಂಬಲಿಸುತ್ತಿದ್ದರು. ನಾವು ಈಗಿನಂತೆಯೇ ವಿಭಜಿತರಾಗಿದ್ದೆವು. ಆ ಸಭೆಯಲ್ಲಿ ನಾನು ನೋಡಿದ ಮಾಹಿತಿಗಳನ್ನು ವಾಜಪೇಯಿ ಸಂಪೂರ್ಣವಾಗಿ ಕೇಳಿಸಿಕೊಂಡರು ಮತ್ತು ಒಂದೇ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಅದನ್ನು ಅತ್ಯಂತ ಸೂಕ್ಷ್ಮವಾಗಿ ಕೇಳಿಸಿಕೊಂಡರು, ಆದರೆ ಅಷ್ಟೇ ತಾಳ್ಮೆಯಿಂದ ಇದ್ದರು. ಪ್ರತಿಯೊಂದು ಅಂಶವನ್ನೂ ಅವರು ಗ್ರಹಿಸಿಕೊಳ್ಳುತ್ತಿದ್ದರು.

ವಾಜಪೇಯಿ ಅವರ ಹಾವಭಾವ

ವಾಜಪೇಯಿ ಅವರ ಹಾವಭಾವ

ಇಡೀ ಘಟನೆ ಕೊನೆಗೂ ಬಗೆಹರಿದ ಬಳಿಕ ಸಿಸಿಎಸ್‌ನಲ್ಲಿ ಮತ್ತೊಂದು ಸಭೆ ನಡೆಯಿತು. ನಾವೆಲ್ಲರೂ ಅಫ್ಘಾನಿಸ್ತಾನದಿಂದ ಮರಳಿದ್ದೆವು. ಎಲ್ಲರೂ ಬಳಲಿದ್ದೆವು ಮತ್ತು ಸರಿಯಾಗಿ ಊಟ ಮಾಡಿರಲಿಲ್ಲ. ಸಭೆಯಲ್ಲಿ ಟೀ ಮತ್ತು ತಿನಿಸುಗಳನ್ನು ತಂದು ಇರಿಸಿದಾಗ ಕೆಲವರು 'ಈಗ ಇವುಗಳ ಅಗತ್ಯವೇನಿದೆ' ಎಂದು ಕೇಳಿದರು.

ಆಗ ನಡುವಿನಲ್ಲಿ ಕುಳಿತಿದ್ದ ವಾಜಪೇಯಿ ಅವರು ತಮ್ಮ ಕೈಎತ್ತಿ ಸುಮ್ಮನಿರುವಂತೆ ಸೂಚಿಸುತ್ತಾ, 'ಪರ್ವಾಗಿಲ್ಲ ಆಗಲಿ' ಎಂದರು. ಟೀ ಮತ್ತು ತಿಂಡಿ ಒದಗಿಸಲಾಯಿತು. ಈ ಕಾರ್ಯದ ಬಳಿಕ ನಾವು ಆಯಾಸಗೊಂಡಿದ್ದೆವು ಎಂಬುದು ಅವರಿಗೆ ಅರ್ಥವಾಗಿತ್ತು.

ಸಭೆ ಮುಗಿದ ಬಳಿಕ ನಾನು ಅವರ ಬಳಿ ಹೋಗಿ, 'ಸರ್ ಇಂತಹ ಕಠಿಣ ಸಂದರ್ಭದಲ್ಲಿ ತಂಡ ಅದ್ಭುತವಾಗಿ ಕಾರ್ಯನಿಭಾಯಿಸಿದೆ. ನಾವು ನಿಮ್ಮೊಂದಿಗೆ ಒಂದು ಚಿತ್ರ ತೆಗೆಸಿಕೊಂಡರೆ ಚೆನ್ನಾಗಿರುತ್ತದೆ' ಎಂದೆ.

ಆ ವೇಳೆ ಅವರು ಅತಿಯಾದ ಒತ್ತಡದಲ್ಲಿದ್ದರು. ಆದರೆ, ನಗುತ್ತಾ ಕೊನೆಗೂ ನಮ್ಮ ಜತೆ ಫೋಟೊ ತೆಗೆಸಿಕೊಂಡರು.

ಹೃದಯದಿಂದ ಕೆಲಸ

ಹೃದಯದಿಂದ ಕೆಲಸ

ನಾನು 2003ರ ಮಾರ್ಚ್‌ನಲ್ಲಿ ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್‌ನ ಮುಖ್ಯಸ್ಥನಾದೆ. ಆಗ ಅವರೊಂದಿಗೆ ಅನೇಕ ಬಾರಿ ಚರ್ಚೆ ನಡೆಸಿದ್ದೆ. ಪ್ರತಿ ಬಾರಿ ಚರ್ಚೆಯ ವೇಳೆಯೂ ಅವರಿಗೆ ಶ್ರೇಣಿ ಮುಖ್ಯವಾಗಿರಲಿಲ್ಲ. ಅವರಿಗೆ ಏನು ಹೇಳುತ್ತಿದ್ದೀರಿ ಎನ್ನುವುದಷ್ಟೇ ಮುಖ್ಯವಾಗಿರುತ್ತಿತ್ತು.

ಸಭೆ ನಡೆಸಬೇಕು ಎಂದು ನಾನು ಕೋರಿದರೆ ಅದು ತಕ್ಷಣ ನಡೆಯುತ್ತಿತ್ತು. ಅವರು ಗುಪ್ತಚರ ಮಾಹಿತಿಗಳನ್ನು ಹೆಚ್ಚಾಗಿ ಪರಿಗಣಿಸುತ್ತಿದ್ದರು. ಆದರೆ, ಹೇಳಿದ್ದೆಲ್ಲವನ್ನೂ ಕುರುಡಾಗಿ ನಂಬುತ್ತಿರಲಿಲ್ಲ. ಅವರು ತಮ್ಮದೇ ನಿರ್ಧಾರಗಳನ್ನು ತೆಗೆದುಕೊಂಡರು. ಅವರದು ಸ್ವಂತ ಆಲೋಚನೆಗಳಾಗಿರುತ್ತಿದ್ದವು.

2013ರ ಏಪ್ರಿಲ್‌ನಲ್ಲಿ ಅವರು ಶ್ರೀನಗರಕ್ಕೆ ತೆರಳಿದಾಗ ಪಾಕಿಸ್ತಾನದ ಜತೆಗೆ ಸ್ನೇಹದ ಹಸ್ತ ಚಾಚಿದರು. ಅದು ಹೃದಯದಿಂದ ಬಂದದ್ದು. ನಾನು ಅವರನ್ನು ಭೇಟಿ ಮಾಡಿದ್ದಾಗ ಕೇಳಿದ್ದೆ, 'ನೀವು ಅವರಿಗೆ ಏನು ಹೇಳಿದ್ದಿರಿ?' ಅವರು ಪ್ರತಿಕ್ರಿಯೆ ನೀಡಿ ಕೇಳಿದರು 'ಹೇಗಿತ್ತು?'. ಆಗ ಮತ್ತೆ ಕೆದಕಿದೆ, 'ನೀವು ಮಾತನಾಡಿದ್ದು ಹೃದಯದಿಂದಲೇ ಅಥವಾ ಮನಸ್ಸಿನಿಂದಲೇ?'. ಅವರು ಮಾತನಾಡಲಿಲ್ಲ, ಸುಮ್ಮನೆ ತಮ್ಮ ಹೃದಯ ಸ್ಪರ್ಶಿಸಿದರು.

ಸದಾ ಕಾಲವೂ ಒತ್ತಡ

ಸದಾ ಕಾಲವೂ ಒತ್ತಡ

ಅವರು ಎಲ್ಲ ಕಾಲಕ್ಕೂ ಒತ್ತಡದ ಸ್ಥಿತಿಯಲ್ಲಿದ್ದರು. ಅದು ಭದ್ರತೆ ಇರಬಹುದು ಅಥವಾ ಸಮ್ಮಿಶ್ರ ರಾಜಕೀಯದಲ್ಲಿ ಸಮಸ್ಯೆಗಳಿರಬಹುದು. ಕಾಶ್ಮೀರ ಮತ್ತು ಪಾಕಿಸ್ತಾನದ ವಿಷಯಕ್ಕೆ ಬಂದಾಗ ಹೆಚ್ಚಿನವರು ಅವರ ಜತೆಗಿರಲಿಲ್ಲ. ಆದರೂ ಅದನ್ನು ಅವರು ನಿಭಾಯಿಸಿದರು.

ಅವರೊಂದಿಗೆ ನೇರವಾಗಿ ಮಾತನಾಡುವ ಸೌಲಭ್ಯ ನನಗಿತ್ತು. ಸಾಮಾನ್ಯವಾಗಿ ಅಂತಹ ಸಭೆಗಳು ಹತ್ತು ನಿಮಿಷಗಳಲ್ಲಿಯೇ ಮುಗಿದು ಹೋಗುತ್ತಿದ್ದವು. ಆದರೆ ನಾನು ಅವರ ಜತೆ ನಡೆಸಿದ ಪ್ರತಿ ಸಭೆಗಳೂ 60 ನಿಮಿಷಗಳಿಗೂ ಹೆಚ್ಚು ಕಾಲ ಸಾಗುತ್ತಿದ್ದವು.

ಒಬ್ಬ ಪ್ರಧಾನಿ ಅಷ್ಟು ಸಮಯ ನೀಡುವುದನ್ನು ನೀವು ಕಲ್ಪಿಸಿಕೊಳ್ಳಲು ಸಾಧ್ಯವೇ? ಅಷ್ಟು ಸಂಯಮ ಅವರಲ್ಲಿತ್ತು. ಸಭೆಗಳ ಸಂದರ್ಭದಲ್ಲಿ ಪ್ರತಿಯೊಂದನ್ನೂ ಅತಿ ಎಚ್ಚರಿಕೆಯಿಂದ ಕೇಳಿಸಿಕೊಳ್ಳುತ್ತಿದ್ದರು ಮತ್ತು ಸೂಕ್ತವಾದ ಪ್ರಶ್ನೆಗಳನ್ನೇ ಕೇಳುತ್ತಿದ್ದರು.

ಮೊಣಕಾಲಿನ ಕಥೆ

ಮೊಣಕಾಲಿನ ಕಥೆ

ಭಾರತ-ಪಾಕಿಸ್ತಾನ ಸಂಬಂಧದಲ್ಲಿ ಪಾತ್ರ ವಹಿಸಲು ನನಗೆ ಸೂಚಿಸಿದಾಗ ವಾಜಪೇಯಿ ಅವರನ್ನು ಭೇಟಿ ಮಾಡುವಂತೆ ನಿರ್ದೇಶಿಸಲಾಯಿತು. ಅವರ ಬಳಿ ತೆರಳಿ ನನ್ನ ಕಡೆಯಿಂದ ಮಾಹಿತಿ ನೀಡಿದೆ. ಆಗ ಅವರು, 'ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೀವು ಇದನ್ನು ಮಾಡುತ್ತೀರಿ ಎಂದು ನನಗೆ ವಿಶ್ವಾಸವಿದೆ. ಏನೇ ಆದರೂ ನಾನು ನಿಮ್ಮೊಂದಿಗೆ ಇರುತ್ತೇನೆ' ಎಂದು ಧೈರ್ಯ ತುಂಬಿದರು.

ನನ್ನ ದೇಹದ ಹಿಂಬದಿಯಲ್ಲಿ ನೋವು ಕಾಣಿಸಿಕೊಂಡ ಕಾರಣ ಅವರ ಜತೆ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಪ್ರಧಾನಿಯನ್ನು ಭೇಟಿ ಮಾಡಲು ಏಕೆ ಬರಲಿಲ್ಲ ಎಂದು ನನಗೆ ಕರೆಬಂತು. ನನ್ನ ಹಿಂಬದಿಯಲ್ಲಿ ನೋವಿದೆ ಎಂದು ತಿಳಿಸಿದೆ.

ಕೊನೆಗೂ ಒಂದು ದಿನ ಅವರನ್ನು ಭೇಟಿ ಮಾಡಿದೆ. ಆಗ ಅವರು, ಎಲ್ಲ ಸಮಯವೂ ನೀವು ಬ್ಯುಸಿ ಇರುತ್ತೀರಾ ಎಂದು ಕೇಳಿದರು. 'ನನ್ನ ಹಿಂಬದಿಯಲ್ಲಿ ನೋವಿತ್ತು. ಆ ಸ್ಥಿತಿಯಲ್ಲಿ ನಿಮ್ಮ ಎದುರು ಹಾಜರಾಗಲು ನನಗೆ ಇಷ್ಟವಿರಲಿಲ್ಲ' ಎಂದು ಹೇಳಿದೆ.

ಅದೇ ಸಮಯಕ್ಕೆ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 'ನಾನು ನನ್ನ ಮೊಣಕಾಲುಗಳನ್ನು ಹಿಡಿದು ಕುಳಿತಿದ್ದೇನೆ, ನೀವು ಕೂಡ ನಿಮ್ಮ ಹಿಂಬದಿಯನ್ನು ಹಿಡಿದುಕೊಂಡು ಕುಳಿತುಕೊಳ್ಳಿ' ಎಂದರು.

ಚಿನ್ನದ ಹೃದಯದ ವ್ಯಕ್ತಿ

ಚಿನ್ನದ ಹೃದಯದ ವ್ಯಕ್ತಿ

ಒಮ್ಮೆ ಅವರ ಸಹೋದರಿ ಮೃತಪಟ್ಟಿದ್ದರು. ಅದೇ ದಿನ ನಮ್ಮ ಮೀಟಿಂಗ್‌ಅನ್ನು ಮುಂಚಿತವಾಗಿ, ಬೆಳಿಗ್ಗೆ 11 ಗಂಟೆಗೆ ನಿಗಪಡಿಸಿದ್ದೆ. ಬಳಿಕ ಸಾವಿನ ಸುದ್ದಿಯನ್ನು ಟಿ,ವಿಯಲ್ಲಿ ನೋಡಿ, ಸಭೆ ರದ್ದಾಗಲಿದೆ ಎಂದುಕೊಂಡೆ.

ಆದರೆ, ಸಭೆಗೆ ಹೋಗುತ್ತೀರಾ ಎಂದು ಕರೆ ಬಂತು. ಒಂದು ಸಭೆಯನ್ನು ಹೊರತುಪಡಿಸಿ ಉಳಿದೆಲ್ಲ ಸಭೆಗಳನ್ನೂ ಅವರು ರದ್ದುಗೊಳಿಸಿದ್ದರು. ಅವರನ್ನು ಭೇಟಿ ಮಾಡಿದೆ. ಚಹಾ ಕುಡಿಯುವಂತೆ ಕರೆದರು. ಅವರ ಸಹೋದರಿ ಮೃತಪಟ್ಟಿರುವುದರಿಂದ ಚಹಾ ಬೇಡ ಎಂದು ವಿನಮ್ರತೆಯಿಂದ ಹೇಳಿದೆ. ಅವರು ಅದನ್ನು ಮೆಚ್ಚಿಕೊಂಡರು.

ನಾನು ನೋಡಿರುವ ವಾಜಪೇಯಿ ಚಿನ್ನದ ಹೃದಯದ ವ್ಯಕ್ತಿ. ಅವರಲ್ಲಿ ಕೋಪದ ಲವಲೇಶವೂ ಇರಲಿಲ್ಲ. ಅವರು ತುಂಬಾ ಕೇಳಿಸಿಕೊಳ್ಳುತ್ತಿದ್ದರು ಮತ್ತು ಮರೆಯುತ್ತಿರಲಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+