ಬುಡಕಟ್ಟು ಸಮುದಾಯದ ಆಶಾಕಿರಣ ಹೇಮಂತ್ ಸೊರೆನ್ ವ್ಯಕ್ತಿಚಿತ್ರ
ರಘುಬರ್ ದಾಸ್ ರಂತೆ ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಕೂಡಾ ತಮ್ಮ ತಂದೆ, ಪಕ್ಷದ ಸ್ಥಾಪಕ ಶಿಬು ಸೊರೆನ್ ಅವರ ನೆರಳಿನಿಂದ ಹೊರ ಬಂದು ರಾಷ್ಟ್ರಮಟ್ಟದಲ್ಲಿ ಜನನಾಯಕ ಎನಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಆಶಾಕಿರಣವಾಗಿರ ಹೇಮಂತ್ ವ್ಯಕ್ತಿಚಿತ್ರ ಇಲ್ಲಿದೆ...
44 ವರ್ಷ ವಯಸ್ಸಿನ ಹೇಮಂತ್ ಪದವಿ ತನಕ ವ್ಯಾಸಂಗ ಮಾಡಿಲ್ಲ, ರಾಂಚಿಯ ಬಿಐಟಿ ಮೆಸ್ರಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ಆದರೆ, 8.52 ಕೋಟಿ ರು ಆಸ್ತಿವಂತರಾಗಿದ್ದಾರೆ. ಇವರ ವಿರುದ್ಧ 2 ಕ್ರಿಮಿನಲ್ ಕೇಸುಗಳಿವೆ. ಜಾರ್ಖಂಡ್ ಮುಕ್ತಿ ಮೋರ್ಚಾ ಸ್ಥಾಪಕ, ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಹಾಗೂ ರೂಪಿ ದಂಪತಿಯ ಪುತ್ರ. ಹೇಮಂತ್ ಗೆ ಇಬ್ಬರು ಸೋದರರು, ಓರ್ವ ಸೋದರಿ ಇದ್ದಾರೆ. ಹೇಮಂತ್ ಹಾಗೂ ಪತ್ನಿ ಕಲ್ಪನಾ ಅವರಿಗೆ ಇಬ್ಬರು ಪುತ್ರರಿದ್ದಾರೆ.
2009ರ ಜೂನ್ 24ರಿಂದ 2010ರ ಜನವರಿ 4 ರ ತನಕ ರಾಜ್ಯಸಭಾ ಸದಸ್ಯರಾಗಿದ್ದರು. 2013ರ ಜುಲೈ 15ರಂದು ಕಾಂಗ್ರೆಸ್, ಆರ್ ಜೆಡಿ ನೆರವಿನಿಂದ ಅಧಿಕಾರ ಸ್ಥಾಪಿಸಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವಿಪಕ್ಷ ನಾಯಕರಾಗಿ ಜನಪ್ರಿಯತೆ:
* ಛೋಟಾ ನಾಗ್ಪುರ್ ಹಿಡುವಳಿ ಕಾಯ್ದೆ ಹಾಗೂ ಸಂತಾಲ್ ಪರಗಣ ಹಿಡುವಳಿ ಕಾಯ್ದೆ ಜಾರಿಗೊಳಿಸಲು ಯತ್ನಿಸಿದ ಬಿಜೆಪಿ ವಿರುದ್ಧ ಕಿಡಿಕಾರಿದರು. ಈ ಕಾಯ್ದೆಗಳು ಜಾರಿಗೊಂಡರೆ ಆದಿವಾಸಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಾರೆ, ಕೃಷಿ ಭೂಮಿ ನಾಶವಾಗಲಿದೆ ಎಂದು ಪ್ರತಿಭಟಿಸಿದರು.
* 2017ರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಅಂದಿನ ಸಿಎಂ ರಘುಬರ್ ದಾಸ್ ಅವರು ಹೇಮಂತ್ ಅವರನ್ನು ಆಹ್ವಾನಿಸಿದ್ದರು. ಆದರೆ, ಈ ಹೂಡಿಕೆ ಸಮಾವೇಶ ಭೂ ಕಬಳಿಕೆದಾರರ ಮಹಾಚಿಂತನ ಶಿಬಿರ ಎಂದು ಹೇಮಂತ್ ಗೇಲಿ ಮಾಡಿದರು. ಆದಿವಾಸಿ, ಮೂಲನಿವಾಸಿ ಹಾಗೂ ರೈತರ ಪರ ದನಿಯೆತ್ತಿದರು.

ಮದ್ಯ ನಿಷೇಧಕ್ಕೆ ಆಗ್ರಹ
* ಆಧಾರ್ ಕಾರ್ಡ್ ಇಲ್ಲದೆ ಪಡಿತರ ಪೂರೈಕೆ ಪಡೆಯದ ಕುಟುಂಬವೊಂದರ 11 ವರ್ಷ ವಯಸ್ಸಿನ ಹುಡುಗಿಯೊಬ್ಬಳು ಹಸಿವಿನಿಂದ ಮೃತಪಟ್ಟ ಘಟನೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಹೇಮಂತ್ ಆಗ್ರಹಿಸಿದ್ದರು.
* ತೃತೀಯ ರಂಗ ಸ್ಥಾಪನೆಗೆ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರರಾವ್ ಮುಂದಾದಾಗ ಅವರ ಬೆಂಬಲಕ್ಕೆ ನಿಂತರು. ಸೋನಿಯಾ ಗಾಂಧಿ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲೂ ಕಾಣಿಸಿಕೊಂಡರು.
* ಬಿಹಾರದಂತೆ ಜಾರ್ಖಂಡ್ ನಲ್ಲಿ ಮದ್ಯ ನಿಷೇಧಕ್ಕೆ ಹೇಮಂತ್ ಆಗ್ರಹಿಸಿದರು. ಸಾರಾಯಿ ಅಂಗಡಿ ಸ್ಥಾಪಿಸುವ ಮೂಲಕ ಸರ್ಕಾರವು ಬುಡಕಟ್ಟು ಜನಾಂಗ, ಗ್ರಾಮಾಂತರ ಜನರ ಬದುಕಿಗೆ ಕೊಳ್ಳಿ ಇಡಲಿದೆ ಎಂದು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು.

2014ರಲ್ಲಿ ಜೆಎಂಎಂ ಸ್ಥಾನಮಾನ
2014ರಲ್ಲಿ ಜೆಎಎಂ ಕೇವಲ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮ್ಯಾಜಿಕ್ ನಂಬರ್ 41 ದಾಟಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. ಈ ಬಾರಿ 81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜೆಎಂಎಂಗೆ ಶೇ 26 ರಷ್ಟಿರುವ ಬುಡಕಟ್ಟು ಸಮುದಾಯದ ಮತಗಳು ಆಧಾರವಾಗಲಿದೆ.
ಹೇಮಂತ್ ಸೊರೆನ್ ಈ ಬಾರಿ ಚುನಾವಣಾ ಪ್ರಚಾರದ ವೇಳೆ ಹೆಚ್ಚು ಕಾಲ ಬುಡಕಟ್ಟು ಜನಾಂಗದವರ ಅಹವಾಲು ಸ್ವೀಕರಿಸುವುದರಲ್ಲಿ ಕಳೆದಿದ್ದಾರೆ. ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಯತ್ನಿಸಿದ್ದಾರೆ.

ಸರ್ಕಾರ ರಚನೆಗೆ ಜೆಎಂಎಂ ಅಗತ್ಯ
ಜಾರ್ಖಂಡ್ ನಲ್ಲಿ ಬಿಜೆಪಿಯಾಗಲಿ ಬಿಜೆಪಿಯೇತರ ಸರ್ಕಾರವಾಗಲಿ ಜೆಎಂಎಂ ನೆರವಿಲ್ಲದೆ ಸರ್ಕಾರ ರಚನೆ ಕಷ್ಟಸಾಧ್ಯ. ಸದ್ಯದ ಟ್ರೆಂಡ್ ನಂತೆ ಬಿಜೆಪಿ 29, ಜೆಎಂಎಂ 24, ಕಾಂಗ್ರೆಸ್ 14, ಏಜೆಎಸ್ ಯು 3, ಜೆವಿಎಂ 3, ಇತರೆ 7ರಲ್ಲಿ ಮುನ್ನಡೆ ಪಡೆದುಕೊಂಡಿವೆ. ಕಾಂಗ್ರೆಸ್ ಪ್ಲಸ್ 40, ಬಿಜೆಪಿ 30 ಸ್ಥಾನ ಖಾತ್ರಿ ಪಡಿಸಿಕೊಂಡಿವೆ. ಅಂತಿಮ ಫಲಿತಾಂಶದಲ್ಲಿ ಮಹಾ ಘಟಬಂಧನ್ ಸಂಖ್ಯೆ 40ಕ್ಕಿಂತ ಕಡಿಮೆಯಾದರೆ ಬಿಜೆಪಿ ಸರ್ಕಾರ ರಚನೆ ಬಗ್ಗೆ ಕಾರ್ಯತಂತ್ರ ರೂಪಿಸಲಿದೆ ಎಂಬ ಮಾಹಿತಿ ಸಿಕ್ಕಿದೆ.












Click it and Unblock the Notifications