ಮೋದಿ ಏನು ನನ್ನ ದೊಡ್ಡಪ್ಪನ ಮಗನಾ? : ಪ್ರಕಾಶ್ ರಾಜ್ ಸಂದರ್ಶನ
ಬೆಂಗಳೂರು, ಜನವರಿ 21 : 'ಲಾರಿಯಲ್ಲಿ ಎರಡು ಮೂರು ಸಾವಿರ ಜನರನ್ನು ಕರೆದುಕೊಂಡು ಬಂದು ಮಾಡುವ ರಾಜಕೀಯ ನನ್ನದಲ್ಲ. ಜನರ ಜೊತೆ ಸೇರಿ, ಅವರ ಸಲಹೆಯನ್ನು ತೆಗೆದುಕೊಂಡು ಮುಂದೆ ಸಾಗುವ ರಾಜಕಾರಣ ನನ್ನದು' ಎಂಬುದು ಪ್ರಕಾಶ್ ರಾಜ್ ಮಾತು.
ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಚುನಾವಣಾ ಸಿದ್ಧತೆಗಳ ಕುರಿತು ಮಾತನಾಡಿದರು.
'ದೆಹಲಿಯಲ್ಲಿ ಹೋಗಿ ಕುಳಿತುಕೊಳ್ಳುವವನು ನಾನಲ್ಲ. ಎಲ್ಲಾಎಂಟು ಕ್ಷೇತ್ರಗಳಲ್ಲಿಯೂ ಕಚೇರಿಗಳನ್ನು ಇಟ್ಟುಕೊಂಡು ಕೆಲಸ ಮಾಡುವವನು, ಒಳ್ಳೆಯ ಕೆಲಸ ಮಾಡಲು ಅಧಿಕಾರಿಗಳು ತಯಾರಾಗಿದ್ದಾರೆ. ನಾನು ಜನರು ಮತ್ತು ಅವರ ನಡುವಿನ ಸೇತುವೆ ಆಗಬಹುದಷ್ಟೇ' ಎಂದು ಪ್ರಕಾಶ್ ರಾಜ್ ಹೇಳಿದರು.
'ಮೋದಿನಾ ಬೈತೀನಿ ಬೈತೀನಿ ಅಂತ. ಮೋದಿ ಏನು ನನ್ನ ದೊಡ್ಡಪ್ಪನ ಮಗನಾ?, ಚಿಕ್ಕಪ್ಪನ ಮಗನಾ? ವೈಯಕ್ತಿಕವಾಗಿ ಅವರ ಮೇಲೆ ನನಗೆ ಯಾವ ದ್ವೇಷವಿದೆ. ಅವರು ಒಂದು ಸರ್ಕಾರವನ್ನು ನಡೆಸುತ್ತಾರೆ. ಪ್ರಶ್ನೆಗಳನ್ನು ಅವರನ್ನು ಕೇಳದೇ ಇನ್ಯಾರನ್ನು ಕೇಳಬೇಕು?' ಎಂದರು...ಸಂದರ್ಶನದ ಪೂರ್ಣ ವಿವರ ಇಲ್ಲಿದೆ.....

ಚುನಾವಣಾ ತಯಾರಿ ಹೇಗಿದೆ?
ಹಲವಾರು ದಿನಗಳ ಚರ್ಚೆ, ನನ್ನ ತಂಡದೊಂದಿಗಿನ ನಿರಂತರ ಮಾತುಕತೆ ಬಳಿಕ ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದೇನೆ. ಈ ಕ್ಷೇತ್ರದಲ್ಲಿ ನನ್ನ ಶಾಲಾ ಗೆಳೆಯರು, ಕಾಲೇಜಿನ ಗೆಳೆಯರು ಇದ್ದಾರೆ. ನನ್ನ ವಯಸ್ಸಿನವರು ಈಗ. ಅವರೆಲ್ಲರ ಬೆಂಬಲ ಸಿಗಲಿದೆ ಎಂಬ ನಿರೀಕ್ಷೆ ಇದೆ.
ನನ್ನ ಬಂಧುಗಳು ಇಲ್ಲಿದ್ದಾರೆ. ರಂಗಭೂಮಿ ಇಲ್ಲಿದೆ. ಇಲ್ಲಿಂದ ಬೆಳೆದು ಬಂದ ನನ್ನನ್ನು ನಮ್ಮವನು ಎಂದು ನೋಡಿದ ಜನರಿದ್ದಾರೆ. ಇವೆರೆಲ್ಲರ ಜೊತೆ ಒಂದು ಮಾತುಕತೆ ಆಯಿತು. ಇಲ್ಲಿನ ಸಮಸ್ಯೆಗಳನ್ನು ನೋಡಿ ಆಯಿತು.
ನಾಲ್ಕೂವರೆ ಕಿ.ಮೀ.ಯಲ್ಲಿ ಎಲ್ಲಾ ಧರ್ಮಗಳ, ಭಾಷೆಗಳ ಜನರು ಒಂದು ಕಡೆ ಸೇರಿರುವ ಸುಂದರವಾದ ಕ್ಷೇತ್ರ ಬೆಂಗಳೂರು ಸೆಂಟ್ರಲ್. ಎಲ್ಲಾ ತಯಾರಿಗಳನ್ನು ಮಾಡಿಕೊಂಡೇ ಇಂತಹ ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದು.

ಚುನಾವಣೆಯಲ್ಲಿ ನಿಮ್ಮ ಎದುರಾಳಿ ಯಾರು?
ಯಾರು ಎದುರಾಳಿ ಎನ್ನುವುದಕ್ಕಿಂತ, ಯಾರ ಪರವಾಗಿದ್ದೇವೆ? ಎಂದು ಮಾತನಾಡೋಣ. ಗೆಲ್ಲುವುದು, ಸೋಲುವುದು ಎಂದು ಮಾತನಾಡಲು ಇದು ಕ್ರಿಕೆಟ್ ಮ್ಯಾಚ್ ಅಲ್ಲ. ಇದೊಂದು ಜೀವನ ಕ್ರಮ. ತೊಡೆ ತಟ್ಟುವುದು, ಮೀಸೆ ತಿರುಗಿಸುವುದು, ನಿಮ್ಮನ್ನು ಸೋಲಿಸಿದರೆ ಜನರು ನಮ್ಮ ಪರ ಅಂದುಕೊಳ್ಳುವುದಲ್ಲ ಚುನಾವಣೆ.
ಜನರು ಯಾವುದೇ ಪಕ್ಷವಲ್ಲ. ಐದು ವರ್ಷಗಳ ನಂತರ ಜನಪ್ರತಿನಿಧಿಗಳನ್ನು ಆರಿಸಿದ ಬಳಿಕ ಅವರದ್ದೇ ಆದ ಕೆಲಸಗಳಿವೆ. ಕೆಲಸ ಮಾಡಿ ಎಂದು ನಮಗೆ ಜವಾಬ್ದಾರಿ ನೀಡುತ್ತಾರೆ. ರಸ್ತೆಯಲ್ಲಿ ಯಾವ ಧರ್ಮದವನು ಹೋದರೆ ಏನು?, ರಸ್ತೆ ರಸ್ತಯೇ ಅಲ್ಲವೇ?.
ಪೆಟ್ರೋಲ್ ಬಂಕ್ಗಳಲ್ಲಿ ಜಾತಿ ನೋಡಿ ಪೆಟ್ರೋಲ್ ಹಾಕಿಸಿಕೊಳ್ಳುವಿರಾ?, ವಿದ್ಯುತ್ ಶಕ್ತಿ ಜಾತಿ ನೋಡಿಕೊಂಡು ಬರುತ್ತದೆಯೇ?. ಮಕ್ಕಳು ಗ್ರಹಿಸುವುದು, ಬೆಳೆಯುವುದಕ್ಕೆ ಯಾವ ಜಾತಿ ಇದೆ. ನಮಗೆ ಬೇಕಾಗಿರುವುದು ಒಂದು ಆಳ್ವಿಕೆ, ಸಮಾನ ಆಳ್ವಿಕೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಜಾಪಾಲನೆ.

ಅರವಿಂದ್ ಕ್ರೇಜಿವಾಲ್ ಭೇಟಿ ಹೇಗಿತ್ತು?
ನಾನು ಚುನಾವಣೆಗೆ ನಿಲ್ಲುವ ನಿರ್ಧಾರ ತಿಳಿದು ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಬಂದಿದ್ದರು. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದೆಹಲಿಯ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಲು ಅವರು ತೊಡಗಿಕೊಂಡ ಕಾರ್ಯದ ಬಗ್ಗೆ ಮೆಚ್ಚುಗೆ ಇದೆ. ಅಂತಹ ಯೋಜನೆಗಳನ್ನು ನನ್ನ ಕ್ಷೇತ್ರಕ್ಕೆ ತರುವ ಚಿಂತನೆ ಇದೆ.
ನನ್ನ ಸ್ಪರ್ಧೆಗೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಎಎಪಿ ಪ್ರತಿಭಟನೆ ಮಾಡಲು ಸ್ಪರ್ಧೆ ಮಾಡುತ್ತಿದ್ದೆವು. ಈ ಬಾರಿ ನಮ್ಮ ಬಳಗ ನಿಮ್ಮ ಜೊತೆ ಕೆಲಸ ಮಾಡುತ್ತದೆ ಎಂದು ಹೇಳಿದ್ದರು. ಆದ್ದರಿಂದ ಧನ್ಯವಾದ ಹೇಳಲು ಹೋಗಿದ್ದೆ.
ಅವರ ತತ್ವ ಸಿದ್ದಾಂತಗಳು ಏನೇ ಆದರೂ, ಪಕ್ಷ ಯಾವುದೇ ಆದರೂ ಮಾಡುವ ಕೆಲಸದ ಬಗ್ಗೆ ಮೆಚ್ಚುಗೆ ಇದೆ. ನಿಮ್ಮ ತಜ್ಞರ ಸಹಕಾರವನ್ನು ನಮಗೆ ನೀಡಿ. ಬೆಂಗಳೂರಿನ ಸೆಂಟ್ರಲ್ ಕ್ಷೇತ್ರದ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡುತ್ತೇನೆ. ಆರೋಗ್ಯ ಕ್ಷೇತ್ರವನ್ನು ಅಭಿವೃದ್ದಿಗೊಳಿಸುತ್ತೇನೆ ಎಂದು ಹೇಳಿದ್ದೇನೆ.

ಪ್ರಕಾಶ್ ರಾಜ್ ಅವರು ನಟನೆಯಿಂದ ದೂರವಾಗುತ್ತಿದ್ದಾರಾ?
ನಟನಾಗಿ ಹಣವನ್ನು, ಹೆಸರನ್ನು ಗಳಿಸಿ ಆಗಿದೆ. ಈಗ ಒಳ್ಳೆಯ ನಟ ಎಂದು ಸಾಬೀತು ಮಾಡಬೇಕಿಲ್ಲ. ನಟನೆಯಿಂದ ದೂರ ಆಗಬೇಕಾಗುತ್ತದೆ ಅಲ್ಲವೇ?... ನನ್ನ ಜೀವನದಲ್ಲಿ ನಾನು ಪ್ರಯಾಣಗಳನ್ನು ನಿರ್ಧರಿಸಿಲ್ಲ. ಪ್ರಯಾಣಗಳು ಜೀವನನ್ನು ನಿರ್ಧರಿಸಿವೆ.
ಈಗ ನಾನು ಉತ್ತಮ ಪ್ರಜೆ, ಉತ್ತಮ ಮನುಷ್ಯ ಎಂದು ಸಾಬೀತು ಮಾಡಬೇಕಿದೆ. ಎಲ್ಲಾ ಭಾಷೆಯ, ಧರ್ಮದ, ವರ್ಗದ ಜನರು ಅವರ ಪ್ರೀತಿಯಿಂದ ನನ್ನನ್ನು ಈ ಎತ್ತರಕ್ಕೆ ಬೆಳೆಸಿದ್ದಾರೆ. ನಾನು ಅವರ ಸ್ವತ್ತು. ಈ ಶಕ್ತಿ ಮತ್ತೆ ಅವರ ಧ್ವನಿಯಾಗಬೇಕು. ಜವಾಬ್ದಾರಿ ಹೆಚ್ಚಾದಾಗ ಒಂದನ್ನು ಬಿಟ್ಟು ಮತ್ತೊಂದಕ್ಕೆ ಹೋಗಬೇಕಾಗುತ್ತದೆ.

ಕರ್ನಾಟಕದ ರಾಜಕೀಯದ ಬಗ್ಗೆ ಏನು ಹೇಳುವಿರಿ?
ನೋಡಿ ಇವತ್ತು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳು. ಚುನಾವಣಾ ರಾಜಕಾರಣದಲ್ಲಿ ಅವರು ಸೇರಿಕೊಂಡಿದ್ದಾರೆ. ಅವರು ಕಡಿಮೆ ಸೀಟು ಇದು ನಮಗೇಕೆ ಬೇಕು?. ಬಿಜೆಪಿಯವರಿಗೆ ಏನಾಗಿದೆ, ನಾಚಿಕೆ ಆಗಬೇಕು.
104 ಸೀಟು ಇದೆ ವಿರೋಧ ಪಕ್ಷವಾಗಿ ಮೊದಲು ಕೆಲಸ ಮಾಡಿ. ಆಳ್ವಿಕೆ ಮಾಡುವುದಕ್ಕೆ ಬಿಡಿ. ಯಾವಾಗಲೂ ಆತಂಕದಲ್ಲಿ ಇರುವಂತೆ ಏಕೆ ಮಾಡುತ್ತೀರಿ. ಜೆಡಿಎಸ್ ಕಡಿಮೆ ಸೀಟು ಇದ್ದು ಮುಖ್ಯಮಂತ್ರಿಯಾದರು. ಕಾಂಗ್ರೆಸ್ 80 ಸೀಟು ಇದ್ದು ಕುಳಿತುಕೊಂಡಿದ್ದಾರೆ. ನಿಮಗೇಕೆ ಅದೆಲ್ಲಾ?.
ಒಂದು ಸರ್ಕಾರವಿರಬೇಕು.ಸ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸೇರಿಕೊಂಡು ಮಾಡಿರುವ ನಿರ್ಧಾರ ಅಲ್ಲವೇ?. ಸಿಎಂ ಆಗಬೇಕು, ಅಧಿಕಾರದ ಗದ್ದುಗೆ ಏರಬೇಕು ಎಂದು ಏನು. ವಿರೋಧ ಪಕ್ಷವಾಗಿ ಕೆಲಸ ಮಾಡಿ ನೋಡಿ. ಈ ರೆಸಾರ್ಟ್ ರಾಜಕಾರಣ ನಾಚಿಕೆಗೇಡು.
ಇರುವ ನಾಲ್ಕು ಜನರು ಕಾಂಗ್ರೆಸ್, ಜೆಡಿಎಸ್ ನವರಿಗೆ ಎಷ್ಟು ತೊಂದರೆ ಕೊಡುತ್ತಿದ್ದಾರೆ. ನನಗೆ ಸರಿಯಾದ ಸ್ಥಾನ ಸಿಕ್ಕಿಲ್ಲ. ಸೀಟು ಸಿಕ್ಕಿಲ್ಲ ಎಂದು ಕಿತ್ತಾಡುತ್ತೀರಿ. ಜನರು ಎಲ್ಲವನ್ನು ನೋಡುತ್ತಿದ್ದಾರೆ. ಮೊದಲು ಅವರ ಧ್ವನಿಯಾಗಿ.

ಕ್ಷೇತ್ರದ ಅಭಿವೃದ್ಧಿಯ ಚಿಂತನೆಗಳೇನು?
ವೈಟ್ಫೀಲ್ಡ್ನಿಂದ ಇಲ್ಲಿಗೆ ಒಂದು ರೈಲು ತರಬಹುದು. ಯಾಕಿನ್ನು ತರಲು ಸಾಧ್ಯವಾಗಿಲ್ಲ. ಕೇಂದ್ರದಿಂದ ತರಬಹುದಲ್ಲ?. ಮೂವತ್ತು ನಿಮಿಷದಲ್ಲಿ ಬರಬಹುದಲ್ಲಾ ಆಗ. ಎಷ್ಟು ಫುಟ್ಪಾತ್ ಕಾಣೆಯಾಗಿದೆ. ಫುಟ್ಪಾತ್ ಉಳಿಸಿ ಎಂಬ ಅಭಿಯಾನ ಆರಂಭಿಸಲು ಏಕೆ ಸಾಧ್ಯವಾಗುತ್ತಿಲ್ಲ.
ಶಾಂತಿನಗರ, ಡಬಲ್ ರೋಡ್ನಲ್ಲಿ ನಡೆಯುವ ಜನರು ತೆರಿಗೆ ಕಟ್ಟುತ್ತಾರೆ. ಅವರಿಗೆ ಫುಟ್ಪಾತ್ ಮೇಲೆ ನಡೆಯಲು ಸಾಧ್ಯವಾಗುತ್ತಿಲ್ಲ. ಅವರಿಗೊಂದು ಶೌಚಾಲಯದ ವ್ಯವಸ್ಥೆ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರು ಮಾಡುವ ಮಹಿಳೆಯರ ಉದ್ಯೋಗ ಭದ್ರತೆ ಬಗ್ಗೆ ನಾವು ಏಕೆ ಮಾತನಾಡುತ್ತಿಲ್ಲ. ಎಲ್ಲವನ್ನೂ ಸೂಕ್ಷವಾಗಿ ನೋಡುತ್ತಾ, ಗ್ರಹಿಸುತ್ತಾ ಎಲ್ಲವನ್ನೂ ಅಭಿವೃದ್ಧಿ ಮಾಡುವ ಸಾಧ್ಯತೆ ಇದೆ.

ಚುನಾವಣಾ ಚಿನ್ಹೆಯ ಆಯ್ಕೆ ಕುರಿತು
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದರಿಂದ ಚಿನ್ಹೆಯನ್ನು ಆಯೋಗ ಈಗ ನೀಡುವುದಿಲ್ಲ. ಚುನಾವಣಾ ಘೋಷಣೆಯಾದ ಬಳಿಕ ಮತದಾನಕ್ಕೆ 20 ದಿನ ಇರುವಾಗ ಮೂರು ಚಿನ್ಹೆಯನ್ನು ನೀಡುತ್ತಾರೆ. ನಮ್ಮ ಪುಣ್ಯಕ್ಕೋ, ಅದೃಷ್ಟಕ್ಕೋ ನಮ್ಮ ಫೋಟೋ ಅದರಲ್ಲಿ ಇರುವುದರಿಂದ ನಮ್ಮ ಮುಖವೇ ಚಿನ್ಹೆ.

ಕೇಂದ್ರ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ?
ಮೋದಿ ಬೈತೀನಿ...ಮೋದಿ ಬೈತೀನಿ ಅಂತ. ವೈಯಕ್ತಿಕವಾಗಿ ನನಗೆ ಅವರ ವಿರುದ್ಧ ಏನಿದೆ. ಅವರು ಒಬ್ಬ ನಾಯಕ, ಒಂದು ಸರ್ಕಾರನ್ನು ನಡೆಸುವವರು. ಅವರನ್ನು ಕೇಳದೇ ಇನ್ಯಾರನ್ನು ಕೇಳುವುದು?. ಅವರು ಬಂದಾಗ ನಾವು ಗಲಾಟೆ ಮಾಡಲಿಲ್ಲ ಅಲ್ಲವೇ?.
ಅವರು ಬಂದು ಯುವಕರಿಗೆ ಕೆಲಸ ಎಂದಾಗ ನಮ್ಮ ದೇಶದ ಸಮಸ್ಯೆ ಈ ಮನುಷ್ಯನಿಗೆ ಗೊತ್ತು ಎಂದು ಕೊಂಡೆವು. ಕಪ್ಪು ಹಣ ತರುವೆ ನಿಮ್ಮ ಖಾತೆಗೆ 15 ಲಕ್ಷ ಬರುತ್ತೆ ಎಂದರು. ರೈತರ ಬೆಳೆಗೆ ಬೆಲೆ ಸಿಗುತ್ತದೆ ಎಂದಾಗ, ಭ್ರಷ್ಟಾಚಾರ ಇರೋಲ್ಲ ಎಂದಾಗ ದೇಶದ ಸಮಸ್ಯೆ ಗೊತ್ತಿಲ್ಲ ಇವರಿಗೆ ಅನ್ನಿಸಿತು.
ಆನಂತರ ನೋಡಿದರೆ ಬರೀ ಸುಳ್ಳುಗಳು. ಆ ಮನುಷ್ಯನ ಸಮಸ್ಯೆ ಎಂದರೆ ತಾನು ಹೇಳುವ ಸುಳ್ಳುಗಳನ್ನು ತಾನೇ ನಂಬುತ್ತಾನೆ. ರೈತರ ಸಮಸ್ಯೆ ಇಷ್ಟು ದೊಡ್ಡದಾಗಲ ಕಾರಣವೇನು, ಉದ್ಯೋಗ ಸಿಗುವುದು ಹೋಗಲಿ ಎಷ್ಟು ಲಕ್ಷ ಉದ್ಯೋಗಳು ಕಾಣೆಯಾಗಿವೆ.
ನೋಟುಗಳ ನಿಷೇಧ ನೋಡಿ. ನೋಟುಗಳಲ್ಲಿರುವ ಎಲ್ಲಾ ಭಾಷೆಗಳಲ್ಲೂ ಮೌನವಾಗಿರುವ ಯಾರಾದರೂ ಇದ್ದರೆ ಅದು ನಮ್ಮ ಪ್ರಧಾನಿಗಳು ಮಾತ್ರ. ನೋಟುಗಳ ನಿಷೇಧದಿಂದ ಜನ ಕೆಲಸ ಬಿಟ್ಟು ಕ್ಯೂನಲ್ಲಿ ನಿಂತರು ಬಿಟ್ಟರೆ ಬೇರೆ ಏನು ಆಯಿತು.
ನೀವು ಪ್ರಯೋಗ ಮಾಡಲು ಹೋದಿರಿ. ನೀವು ಜಿಎಸ್ಟಿ ಬಗ್ಗೆ ಕೇಳಿದರೆ ಹಿಂದೂ ವಿರೋಧಿ, ನೋಟುಗಳ ನಿಷೇಧದ ಬಗ್ಗೆ ಕೇಳಿದರೆ ದೇಶ ವಿರೋಧಿ. ಅಯ್ಯೋ ನಾ ಈ ದೇಶದ ಪ್ರಜೆ, ಓದಿಕೊಂಡ ಪ್ರಜೆ. ಬಡತನ ಗೊತ್ತು ನಮಗೆ ನಾವು ಪ್ರಶ್ನೆ ಕೇಳಿದರೆ ಅದನ್ನು ಎಲ್ಲಿಗೆ ತಂದಿಟ್ಟಿದ್ದಾರೆ.
ಜಿಎಸ್ಟಿ ಬಗ್ಗೆ ಪ್ರಶ್ನೆ ಕೇಳಿದರೆ ನಮ್ಮನ್ನು ಬೈಯುವವರು 200ಕ್ಕೂ ಹೆಚ್ಚು ವಸ್ತುಗಳ ಜಿಎಸ್ಟಿ ಬದಲಾವಣೆ ಮಾಡಿದರು. ಜನರ ಬದುಕಿನ ಜೊತೆ ನೀವು ಪ್ರಯೋಗ ಮಾಡುತ್ತಿದ್ದೀರಿ ಎಂದರೆ ಒಂದು ನಿಮ್ಮ ತಲೆಯಲ್ಲಿ ಏನೂ ಇಲ್ಲ ಅಥವ ನೀವು ಬೇರೆ ಏನೋ ತರುವುದಕ್ಕೆ ಹೊರಟಿದ್ದೀರಿ.
ಈ ನಾಲ್ಕೂವರೆ ವರ್ಷಗಳಲ್ಲಿ ಕೋಮು ರಾಜಕೀಯ ನೋಡಿ. ಅಮೀರ್ ಖಾನ್, ನಾಸೀರ್ ಉದ್ದೀನ್ ಷಾ ಅವರನ್ನು ನಾವು ಮುಸ್ಲಿಂ ಎಂದು ನೋಡಿದ್ವಾ, ನಟ ಎಂದು ನೋಡಿದ್ವಿ. ಯಾಕೆ ಮುಸ್ಲಿಂ ಎಂಬುದನ್ನು ತಲೆಗೆ ತುರುಕುತ್ತೀರಿ.
ಗೋಮಾಂಸ ಎಲ್ಲಿಂದ ಬಂತು. ಗೌರಿ, ಪನ್ಸಾರೆ, ದಾಬೋಲ್ಕರ್, ಕಲಬುರ್ಗಿ ಅಂತಹವರ ಹತ್ಯೆ ಏಕಾಗುತ್ತಿದೆ. ಎಸ್ಐಟಿ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಒಂದು ಸಂಸ್ಥೆ ಕಡೆ ಬೆರಳು ತೋರಿಸುತ್ತಿದ್ದಾರೆ. ಯಾಕೆ ಸುಮ್ಮನಿದ್ದೀರಿ. ಒಂದು ಸಿನಿಮಾ ಏಕೆ ಬ್ಯಾನ್ ಆಗುತ್ತದೆ. ಒಬ್ಬ ಮನುಷ್ಯ ಏಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ.
ಮೋದಿ ಮೋದಿ ಮೋದಿ ಬೈಯ್ದಿದ್ದು ಸಾಕು, ಇಳಿಸುವ ಕೆಲಸ ಮಾಡೋಣ. ಎರಡು ತಿಂಗಳು ಕಳೆದರೆ ಮೋದಿ ಕೇವಲ ಒಬ್ಬ ಸಂಸದ. ವಾರಣಾಸಿಯಿಂದ ಅವರು ಮತ್ತೆ ಗೆದ್ದು ಬರಬೇಕು. ಆ ಮೇಲೆ ನೋಡೋಣ ಅಲ್ಲವೇ?.

ಯುವಕರು ಹೇಗೆ ಕೆಲಸ ಮಾಡಬಹುದು?
ಮೊದಲು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ನೀವು ಬಂದು ಬೇರೆ ಪಕ್ಷಗಳಂತೆ ಅಕ್ಕಪಕ್ಕ ನಿಂತುಕೊಳ್ಳುವುದು ಬೇಕಾಗಿಲ್ಲ. ನಿಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿ, ನನ್ನಂತೆ ಯೋಜನೆ ಮಾಡುವವರನ್ನು ಗೆಲ್ಲಿಸಿ. ಆನಂತರ ಸಕ್ರಿಯವಾಗಿ ಬನ್ನಿ ಕೆಲಸ ಮಾಡೋಣ.
ಸುಮ್ಮನೆ ಕುಳಿತುಕೊಂಡರೆ ಆಗೋಲ್ಲ. ಕ್ರಿಕೆಟ್, ಕಬ್ಬಡಿ ಮ್ಯಾಚ್ನಂತೆ ರಾಜಕೀಯವನ್ನು ನೋಡುವುದನ್ನು ನಿಲ್ಲಿಸೋಣ. ಯುವಕರೇ ಮುಂದಿನ 50-60 ವರ್ಷಗಳ ಭಾರತ ನಿಮ್ಮದು. ಅದನ್ನು ಸುಭದ್ರವಾಗಿ ಕಟ್ಟಬೇಕು. ನೀವು ಆರಿಸುವ ಒಬ್ಬ ಪ್ರತಿನಿಧಿ ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಬದುಕಿನ ಪ್ರತಿ ಕ್ಷಣದ ಮೇಲೆ ಪ್ರಭಾವ ಬೀರುತ್ತದೆ.
ವಾದ ವಿವಾದಗಳು ಸಾಕು. ನಾವು ಆ ಪಕ್ಷ ನೀನು ಈ ಪಕ್ಷ ಸಾಕು. ಸರಿಯಾದವರನ್ನು ಆರಿಸಿ. ಕೇವಲ ಚುನಾವಣೆ ಸಮಯವಲ್ಲ ಐದು ವರ್ಷಗಳ ಕಾಲ ಜೊತೆಗೆ ಇರುತ್ತೇವೆ ಎಂಬ ಸಂಕಲ್ಪದೊಂದಿಗೆ ಕೆಲಸ ಮಾಡಲು ಬನ್ನಿ....
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications