ನಗೆಯುಕ್ಕಿಸುತ್ತಿದ್ದ ವಾಜಪೇಯಿ ಅವರ ಹಾಸ್ಯ ಚಟಾಕಿಗಳು
ಹಾಸ್ಯಪ್ರಜ್ಞೆ ದ್ವೈವೀದತ್ತ ವರ. ಅದು ಎಲ್ಲರಿಗೂ ಸಿದ್ಧಿಸುವಂಥದಲ್ಲ. ಮಾತಿನ ನಡುವಲ್ಲಿ ಅಲ್ಲಲ್ಲಿ ಹಾಸ್ಯ ಇಣುಕುವಂತೆ ಮಾಡಿ ಶ್ರೋತೃವಿಗೆ ಎಲ್ಲೂ ಬೇಸರವಾಗದಂತೆ ಹಿಡಿದಿಟ್ಟುಕೊಳ್ಳುವ ಕಲೆಯೇ ವ್ಯಕ್ತಿಯನ್ನು ಉತ್ತಮ ವಾಗ್ಮಿಯನ್ನಾಗಿ ಮಾಡಬಲ್ಲದು. ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಅವರ ಎದುರಾಳಿಗಳೂ ಇಷ್ಟಪಡುವುದಕ್ಕಿದ್ದ ಬಹುಮುಖ್ಯ ಕಾರಣ ಇದು!
ಎದುರಾಳಿಗಳಿಗೆ ಮಾತಿನ ಚಾಟಿಯಲ್ಲೇ ಬಿಸಿಮುಟ್ಟಿಸುತ್ತಿದ್ದ ಅವರ ವಾಕ್ಚಾತುರ್ಯಕ್ಕೆ ಎಂಥವರೂ ತಲೆಬಾಗಬೇಕು. ಶತ್ರು ರಾಷ್ಟ್ರ ಪಾಕಿಸ್ತಾನಕ್ಕೂ ಇಂಥ ಮಾತಿನ ಏಟಿನಿಂದಲೇ ಅವರು ಹಲವು ಬಾರಿ ಎಚ್ಚರಿಕೆ ನೀಡಿದ್ದರು.
ಸಹೋದ್ಯೋಗಿಗಳೊಂದಿಗೆ ಸದಾ ಹಾಸ್ಯ ಚಟಾಕಿ ಹಾರಿಸುತ್ತ, ಎಂದಿಗೂ ಮಾಸದ ನಗುವೇ ಮುಖದ ಆಭರಣ ಎಂಬಂತೆ ಕಾಪಿಟ್ಟುಕೊಂಡಿದ್ದ ವಾಜಪೇಯಿ ಅವರ ಕೆಲವು ಹಾಸ್ಯೋಕ್ತಿಗಳು ಇಲ್ಲಿವೆ.

ಹರಾಮ್ ನಲ್ಲೂ ರಾಮನಿದ್ದಾನೆ!
ಬಿಜೆಪಿ ಯಾವಾಗಲೂ ರಾಮನ ಬಗ್ಗೆ ಮಾತನಾಡುತ್ತದೆ. ಆದರೆ ಅವರಲ್ಲಿ ರಾಮನಿಲ್ಲ! ನನ್ನ ಹೆಸರಿನಲ್ಲೇ 'ರಾಮ'ನಿದ್ದಾನೆ ಎಂದು ಎಲ್ ಜೆಪಿ ಪಕ್ಷದ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಒಮ್ಮೆ ಹೇಳಿದ್ದರು. ಅದಕ್ಕೆ ತಕ್ಷಣವೇ ಉತ್ತರಿಸಿದ್ದ ವಾಜಪೇಯಿ ಅವರು, 'ಪಾಸ್ವಾನ್ ಜೀ, ಹ'ರಾಮ್' ನಲ್ಲೂ 'ರಾಮ' ಇದೆ ಎಂದಿದ್ದರಂತೆ!

ಬಿಜೆಪಿಯಲ್ಲಿ ಎರಡು ದಳಗಳಿವೆ!
ಬಿಜೆಪಿಯಲ್ಲಿ ಅಡ್ವಾಣಿ ದಳ ಮತ್ತು ವಾಜಪೇಯಿ ದಳ ಎಂಬ ಎರಡು ದಳಗಳಿವೆ ಎಂದು ವಿರೋಧ ಪಕ್ಷದ ಮುಖಂಡರೊಬ್ಬರು ಹೇಳಿದ್ದರಂತೆ. ಅದಕ್ಕೆ ಉತ್ತರಿಸಿದ್ದ ವಾಜಪೇಯಿ, 'ನಾವು ಯಾವುದೇ ದಳದಳದಲ್ಲಿಲ್ಲ. ನಾವೆಲ್ಲ ಈ ದಳಗಳನ್ನು ಸೇರಿಸಿ ನಮ್ಮ 'ಕಮಲ' ಅರಳುವಂತೆ ಮಾಡುತ್ತೇವೆ' ಎಂದಿದ್ದರಂತೆ!

ಪಾಕಿಸ್ತಾನದ ಹೊರತು ಹಿಂದುಸ್ತಾನ ಅಪೂರ್ಣ!
ಕಾಶ್ಮೀರದ ಹೊರತು ಪಾಕಿಸ್ತಾನ ಅಪೂರ್ಣ ಎಂದು ಪಾಕಿಸ್ತಾನದ ಸಚಿವರೊಬ್ಬರು ನೀಡಿದ ಹೇಳಿಕೆಗೆ ಉತ್ತರಿಸಿದ ಅಟಲ್ ಜೀ, ಪಾಕಿಸ್ತಾನದ ಹೊರತು ಹಿಂದುಸ್ತಾನ ಅಪೂರ್ಣ ಎಂದಿದ್ದರಂತೆ!

ಚಿಟಕಿ ಹೊಡೆಯಬಹುದು!
ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಬಗ್ಗೆ ಮಾತಣನಾಡುವಾಗ ಪಾಕಿಸ್ತಾನಿಯರು ಹೇಳುತ್ತಾರೆ, 'ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ' ಎಂದು. ಆದರದೆ ನಾನು ಹೇಳುತ್ತೇನೆ ಒಂದೇ ಕೈಯಿಂದಲಾದರೂ ಚಿಟಕಿ ಹೊಡೆಯಬಹುದು ಅಂತ! ಎಂದು ಖಡಕ್ ಉತ್ತರ ನೀಡಿದ್ದರು ವಾಜಪೇಯಿ!

ಪತ್ರಕರ್ತರಿಗೆ ಮಾತಿನ ಬಾಣ!
ಪಾಕಿಸ್ತಾನಿ ಪ್ರಧಾನಿ ಬೆನೆಜಿರ್ ಭುಟ್ಟೋ ಅವರಿಗೆ ಈ ರಾತ್ರಿ ನಿಮ್ಮ ಸಂದೇಶವೇನು ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಅದಕ್ಕೆ ತಕ್ಷಣ ಪ್ರತಿಪ್ರಶ್ನೆಯನ್ನೇ ಉತ್ತರವನ್ನಾಗಿ ನೀಡಿದ ವಾಜಪೇಯಿ, 'ನಾಳೆ ಬೆಳಿಗ್ಗೆ ಸಂದೇಶ ನೀಡಿದರೆ ಏನಾದರೂ ಪ್ರಮಾದವಾಗುತ್ತದೆಯೇ?' ಎಂದಿದ್ದರು!

ನೆರೆಹೊರೆಯವರನ್ನು ಆರಿಸಿಕೊಳ್ಳುವುದಕ್ಕಾಗೋಲ್ಲ!
ಪಾಕಿಸ್ತಾನದ ನಿರಂತರ ಶತ್ರುತ್ವ ಮತ್ತು ಭಯೋತ್ಪಾದಕತೆಗೆ ಕುಮ್ಮಕ್ಕು ನೀಡುವ ಕುರಿತು ಬೇಸರ ವ್ಯಕ್ತಪಡಿಸುವ ಸಂದರ್ಭದಲ್ಲಿ ವಾಜಪೇಯಿ ಹೇಳಿದ್ದರು, 'ಮಿತ್ರರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ. ಆದರೆ ನೆರೆಹೊರೆಯನ್ನು ಆರಿಸಿಕೊಳ್ಳುವುದಕ್ಕಾಗುವುದಿಲ್ಲವಲ್ಲ!'

ವಾಜಪೇಯಿ ಒಳ್ಳೆಯವರೇ, ಆದರೆ ಪಕ್ಷ..!
ವಾಜಪೇಯಿ ಅವರು ಒಳ್ಳೆಯವರೇ. ಆದರೆ ಅವರ ಪಕ್ಷ ಸರಿಯಿಲ್ಲ ಎಂಬ ವಿರೋಧ ಪಕ್ಷದವರ ಮಾತಿಗೆ ಒಮ್ಮೆ ಉತ್ತರಿಸಿದ್ದ ವಾಜಪೇಯಿ, 'ಒಳ್ಳೆಯ ವಾಜಪೇಯಿಯನ್ನಿಟ್ಟುಕೊಂಡು ಏನು ಮಾಡೋಕೆ ಸಾಧ್ಯ' ಎಂದಿದ್ದರು!












Click it and Unblock the Notifications