ಜಿಕೆವಿಕೆ ಕ್ಯಾಂಪಸ್ಸಿನಲ್ಲಿ ಫೆ.5ರಿಂದಯುವಜನೋತ್ಸವ
ಬೆಂಗಳೂರು, ಜ. 29:ದೇಶದ ವಿವಿಧ ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ಯುವಜನರಲ್ಲಿ ಭ್ರಾತೃತ್ವ, ರಾಷ್ಟ್ರೀಯ ಐಕ್ಯತೆ ಮತ್ತು ಸೌಹಾರ್ದತೆಯ ಭಾವನೆಗಳಿಗೆ ಸಾಕಾರರೂಪ ನೀಡಲು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಪ್ರಾಯೋಜನೆಯೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಅಂತರ ಕೃಷಿ ವಿಶ್ವವಿದ್ಯಾನಿಲಯಗಳ ಯುವಜನೋತ್ಸವವನ್ನು 2009 ರ ಫೆಬ್ರವರಿ 5 ರಿಂದ 9 ರವರೆಗೆ ಜಿಕೆವಿಕೆ ಕ್ಯಾಂಪಸ್ಸಿನಲ್ಲಿ ಏರ್ಪಡಿಸಿದೆ.
ಪ್ರಸ್ತುತ 5 ದಿನಗಳ ಕಾಲ ನಡೆಯುವ ಅಂತರ ಕೃಷಿ ವಿಶ್ವವಿದ್ಯಾನಿಲಯ ಯುವಜನೋತ್ಸವದ ಈ ಸಾಂಸ್ಕೃತಿಕ ವೈಭವದಲ್ಲಿ ದೇಶದ 47 ಕೃಷಿ ವಿಶ್ವವಿದ್ಯಾನಿಲಯಗಳ 2000 ಪ್ರತಿಭಾವಂತ ಯುವಕ/ಯುವತಿಯರು ಭಾಗವಹಿಸಲಿದ್ದಾರೆ ಹಾಗೂ ಪ್ರತಿದಿನ ಸುಮಾರು 5000 ವಿದ್ಯಾರ್ಥಿಗಳು ಹಾಗೂ ಕಲಾ ಆಸಕ್ತರು ಪ್ರೇಕ್ಷಕರಾಗಿ ಪಾಲುಗೊಳ್ಳಲಿದ್ದಾರೆ.
ಈ ಉತ್ಸವದಲ್ಲಿ ಸಂಗೀತ, ಸಾಹಿತ್ಯ, ಲಲಿತ ಕಲೆಗಳು, ನೃತ್ಯ ಇನ್ನು ಮುಂತಾದ ವಿಷಯಗಳಲ್ಲಿ ಹಲವಾರು ಸ್ಪರ್ಧೆಗಳು ನಡೆಯಲಿವೆ. ಈ ಎಲ್ಲಾ ಸ್ಪರ್ಧೆಗಳನ್ನು ಜಿಕೆವಿಕೆ ಆವರಣದ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಸಲಾಗುತ್ತದೆ. ಇದಕ್ಕಾಗಿ ವಿಶ್ವವಿದ್ಯಾನಿಲಯವು ಉತ್ತಮ ರೀತಿಯ ಎಲ್ಲಾ ಸುಸಜ್ಜಿತ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಈ ಯುವಜನೋತ್ಸವದ ಉದ್ಫಾಟನಾ ಸಮಾರಂಭವು ಫೆಬ್ರವರಿ 5 ರಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಯಲದ ಜಿಕೆವಿಕೆ ಆವರಣದಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿದೆ. ದೆಹಲಿಯಲ್ಲಿರುವ ಐ.ಸಿ.ಎ.ಆರ್. ಸಂಸ್ಥೆಯ ಗೌರವಾನ್ವಿತರು ಮತ್ತು ರಾಜ್ಯದ ಸಾಂಸ್ಕೃತಿಕ ಹಾಗೂ ರಂಗ ಪ್ರತಿಭಾನ್ವಿತರು ಈ ಉದ್ಫಾಟನಾ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
(ದಟ್ಸ್ ಕನ್ನಡ ವಾರ್ತೆ)