ಹೆಸರುಕಾಳು ಬೆಲೆ ದಿಢೀರ್ ಕುಸಿತ; ಎಂಎಸ್ಪಿ ನಿಗದಿಗೆ ರೈತರ ಒತ್ತಾಯ
ಬೆಂಗಳೂರು, ಆಗಸ್ಟ್ 24: ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಕಳೆದೆರಡು ದಿನಗಳಿಂದ ಮುಂಗಾರಿನ ಪ್ರಮುಖ ಬೆಳೆ ಹೆಸರುಕಾಳು ಬೆಲೆ 10 ರುಪಾಯಿ ಕುಸಿತ ಕಂಡಿದೆ. ಕಿಲೋ ಗ್ರಾಂಗೆ 85-95 ರುಪಾಯಿ ಇದ್ದ ಹೆಸರುಕಾಳು ಬೆಲೆ ಮಂಗಳವಾರ ಪ್ರತಿ ಕಿಲೋ ಗ್ರಾಂಗೆ 75-85 ರುಪಾಯಿಗೆ ಇಳಿಕೆಯಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಇನ್ನು ಬಾಗಲಕೋಟೆ ಸೇರಿ ರಾಜ್ಯದ ಹಲವು ಪ್ರಮುಖ ಮಾರುಕಟ್ಟೆಗಳಲ್ಲಿ ಹೆಸರುಕಾಳು ಬೆಲೆ ಕೆ.ಜಿ.ಗೆ 60 ರುಪಾಯಿಗೆ ಕುಸಿದಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
MSP Team: ರೈತರಿಗೆ ಸಿಹಿಸುದ್ದಿ ಕೊಡಲು ಒಂದೊಂದು ತಂಡದಲ್ಲಿ ಒಂದೊಂದು ಚರ್ಚೆ!
ಎಪಿಎಂಸಿ ವರ್ತಕ ಮತ್ತು ಎಫ್ಕೆಸಿಸಿಐ ಸದಸ್ಯ ರಮೇಶ ಲಾಹೋಟಿ ಮಾತನಾಡಿ, ಸಗಟು ಮಾರುಕಟ್ಟೆಯಲ್ಲಿ ಹೆಸರುಕಾಳು ಬೆಲೆ 10 ರುಪಾಯಿಗಳಷ್ಟು ಕುಸಿದಿದೆ ಮಹಾರಾಷ್ಟ್ರದ ಜಲಗಾಂವ್ನಿಂದ ಶೀಘ್ರದಲ್ಲೇ ಹೆಚ್ಚಿನ ಹೆಸರುಕಾಳು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದ್ದು, ಹೆಸರುಕಾಳು ಬೆಲೆಯಲ್ಲಿ ಪ್ರತಿ ಕೆ.ಜಿ ಗೆ ಇನ್ನೂ 3 ರಿಂದ 4 ರುಪಾಯಿ ಕುಸಿತ ಕಾಣುವ ಸಾಧ್ಯತೆ ಇದೆ. ಅತಿ ಹೆಚ್ಚು ಮಳೆ ನಡುವೆಯೂ ಈ ಬಾರಿ ಹೆಸರುಕಾಳು ಉತ್ತಮ ಇಳುವರಿ ಬಂದಿದೆ ಎಂದು ಹೇಳಿದರು.
ಬಂಡವಾಳ ವಾಪಸ್ ಬಂದರೆ ಸಾಕು
ಬೆಳಗಾವಿ ಜಿಲ್ಲೆಯ ಹೆಸರು ಕಾಳು ಬೆಳೆಯುವ ರೈತ ಸುರೇಶ ಪಾಟೀಲ ಮಾತನಾಡಿ, "24 ಎಕರೆಯಲ್ಲಿ ಬೆಳೆದ ಬೆಳೆಗೆ ಲಾಭವಿಲ್ಲ, ಏಕೆಂದರೆ ಎಲ್ಲಾ ಕೃಷಿಗೆ ಹಾಕುವ ಬಂಡವಾಳ ಮಾತ್ರ ಎಂದಿಗೂ ಕಡಿಮೆಯಾಗಿಲ್ಲ, 24 ಎಕರೆಗೆ ಬಿತ್ತನೆ, ಕಳೆ ಕೀಳಲು ಮತ್ತು ಕೊಯ್ಲು ಮಾಡಲು ಬೀಜಗಳು, ಗೊಬ್ಬರಗಳು, ಕೀಟನಾಶಕಗಳು ಮತ್ತು ಕಾರ್ಮಿಕರ ವೆಚ್ಚ ಸೇರಿ ಸುಮಾರು 2 ಲಕ್ಷ ರುಪಾಯಿ ಖರ್ಚು ಮಾಡಿದ್ದೇನೆ, ಈಗ ಬೆಲೆ ಕುಸಿತವಾಗಿದ್ದು, ಹಾಕಿದ ಬಂಡವಾಳ ವಾಪಸ್ ಬಂದರೆ ಸಾಕು ಎನ್ನುವಂತಾಗಿದೆ" ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ಮಾರಾಟ ದರ ನಿಗದಿ ಮಾಡಲು ಒತ್ತಾಯ
ದೆಹಲಿಯಲ್ಲಿ ನಡೆದ ರೈತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, "ಸರ್ಕಾರ ಕೂಡಲೇ ಕನಿಷ್ಠ ಮಾರಾಟ ದರ (ಎಂಎಸ್ಪಿ) ದಲ್ಲಿ ಹೆಸರುಕಾಳು ಖರೀದಿ ಕೇಂದ್ರಗಳನ್ನು ತೆರೆಯಬೇಕು" ಎಂದು ಒತ್ತಾಯಿಸಿದ್ದಾರೆ.
ರೈತ ಸಂಘದ ಮುಖಂಡ ಕೆ.ಚಂದ್ರಶೇಖರ್ ಬೆಂಗಳೂರಿನಲ್ಲಿ ಜಿಲ್ಲಾ ಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಪ್ರತಿ ಕ್ವಿಂಟಲ್ ಹೆಸರುಕಾಳಿಗೆ 7,755 ರೂ.ಗಳ ಕನಿಷ್ಠ ಮಾರಾಟ ದರ ನಿರ್ಣಯಿಸಲು ಬುಧವಾರ ಬೇಡಿಕೆ ಸಲ್ಲಿಸಲಿದ್ದಾರೆ.
ಎಂಎಸ್ಪಿ ನಿರ್ಧರಿಸುವ ಅಧಿಕಾರ ಕೇಂದ್ರಕ್ಕೆ ಇದೆ
ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಕನಿಷ್ಠ ಮಾರಾಟ ದರ (ಎಂಎಸ್ಪಿ) ಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ, ನಾವು ಅದನ್ನು ಸುಗಮಗೊಳಿಸುತ್ತೇವೆ. ನಾವು ಕೇಂದ್ರದಿಂದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ. ಈ ಕಾರ್ಯವನ್ನು ಎಪಿಎಂಸಿ ನೆಟ್ವರ್ಕ್ ಮೂಲಕ ಮಾಡಲಾಗುತ್ತದೆ ಎಂದರು.
ಅತಿಯಾದ ಮಳೆಯಿಂದಾಗಿ ಹೆಸರುಕಾಳು ಬೆಳೆ ನಾಶವಾಗುತ್ತದೆ ಎಂಬ ಭಯವಿದ್ದರೂ, ಕೇವಲ ಶೇಕಡ 10ರಷ್ಟು ಬೆಳೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡನೇ ಅತಿ ದೊಡ್ಡ ರಾಜ್ಯ
ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ರಾಯಚೂರು, ಬೆಳಗಾವಿ, ಕಲಬುರಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿಹೆಚ್ಚು ಹೆಸರುಕಾಳು ಬೆಳೆಯಲಾಗುತ್ತದೆ. ಭಾರತದ ಒಟ್ಟು ಉತ್ಪಾದನೆ ಹೆಸರು ಬೆಳೆಯಲ್ಲಿ ಕರ್ನಾಟಕದ ಪಾಲು ಶೇಕಡ 17.5 ರಷ್ಟಿದೆ. ಇಡೀ ದೇಶದಲ್ಲಿ ಹೆಸರುಕಾಳು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪ್ಯಾಕ್ ಮಾಡಿರುವ ಹೆಸರುಕಾಳು ಬೆಲೆ ಕೆ.ಜಿ ಗೆ 125-139 ರುಪಾಯಿಗಳಿದ್ದು, ರೈತರಿಗೆ ಸಿಗುವ ಮೊತ್ತ ಮಾತ್ರ ಇದರ ಅರ್ಧದಷ್ಟಿದೆ.
ಮಳೆಯ ನಡುವೆಯೂ ಉತ್ತಮ ಬೆಳೆ ಸಿಕ್ಕಿದ್ದರಿಂದ ಈ ವರ್ಷ ಒಂದಷ್ಟು ಲಾಭ ನೋಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಕುಸಿತ ಭಾರಿ ಹೊಡೆತ ನೀಡಿದೆ. ಮಹಾರಾಷ್ಟ್ರದಿಂದ ಹೆಸರುಕಾಳು ಬರುವ ನಿರೀಕ್ಷೆ ಇದ್ದು ಹೆಸರುಕಾಳು ಬೆಲೆ ಮತ್ತಷ್ಟು ಕುಸಿತ ಕಾಣಬಹುದು ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
Recommended Video