ವೃದ್ಧಾಶ್ರಮದಲ್ಲಿ ದೀಪಾವಳಿ ಆಚರಿಸಿದ ಆದರ್ಶ ಮೆರೆದ ಯಾದಗಿರಿ ಪೊಲೀಸರು
ಯಾದಗಿರಿ, ಅಕ್ಟೋಬರ್ 19: ಆಧುನಿಕ ಘಟ್ಟದ ಇಂದಿನ ದಿನಮಾನಗಳಲ್ಲಿ ಬದುಕು, ಜೀವನ ಶೈಲಿ ಬದಲಾಗುತ್ತಿದೆ. ಅದು ಮಾನವೀಯ ಸಂಬಂಧಗಳನ್ನು ಹಂತ ಹಂತವಾಗಿ ಕಳೆದುಕೊಳ್ಳಲಾರಂಭಿಸಿದೆ. ಇದರ ಪರಿಣಾಮವೇ ಹಿರಿಯ ಜೀವಗಳು, ವೃದ್ಧರು ಮನೆಯಿಂದ ಆಚೆ ದೂಡಲ್ಪಡುತ್ತಿದ್ದಾರೆ. ಈ ಕ್ರಿಯೆಯ ಅನಾಗರಿಕ ಫಲಿತಾಂಶವೇ ಇಂದಿನ ವೃದ್ಧಾಶ್ರಮಗಳು.
ಯಾದಗಿರಿ: ಕುಂಬಾರರ ಬದುಕನ್ನು ಬೆಳಗುತ್ತಿಲ್ಲ ಈ ಹಣತೆಗಳು!
ವೃದ್ಧಾಶ್ರಮಗಳಲ್ಲಿರುವ ಹಿರಿಯ ಜೀವಗಳು ನೊಂದು-ಬೆಂದು ಮೌನವೇ ಅವರ ಬದುಕಾಗಿರುತ್ತದೆ. ಅವರಿಗೆ ಹಬ್ಬ-ಹರಿದಿನ, ಸಂಭ್ರಮ-ಸಡಗರ ಯಾವತ್ತೋ ಮರೆಯಾಗಿರುತ್ತದೆ. ಅಂಥ ಜೀವಗಳ ನಡುವೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸುವ ಮೂಲಕ ಯಾದಗಿರಿ ಜಿಲ್ಲಾ ಪೊಲೀಸರು ವೃದ್ಧಾಶ್ರಮದ ಜೀವಗಳಲ್ಲಿ ಸಂತಸ ತಂದಿದ್ದಾರೆ.
ನಗರಸಭೆ ಕಚೇರಿ ಬಳಿಯ ಅಕ್ಷತಾ ಮಹಿಳಾ ಮಂಡಲದ ವೃದ್ಧಾಶ್ರಮದಲ್ಲಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಆಶ್ರಮದಲ್ಲಿರುವ ಹಿರಿಯ ಜೀವಗಳಿಗೆ ಹೊಸ ಬಟ್ಟೆ ವಿತರಿಸಿದರು. ಜೊತೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿ ಹಿರಿಯ ಜೀವಗಳ ಜೊತೆ ಹಬ್ಬದ ಊಟ ಸವಿದರು. ಅಲ್ಲದೇ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಬಳಿಕ ಸಾಂಕೇತಿಕವಾಗಿ ಪಟಾಕಿ ಹಚ್ಚುವ ಮೂಲಕ ಬೆಳಕಿನ ಹಬ್ಬವನ್ನು ಸಂಭ್ರಮಿಸಿದರು. ಈ ವೇಳೆ ಸಿಪಿಐ ಮೌನೇಶ್ವರ್ ಪಾಟೀಲ್, ಪಿಎಸ್ಐ ಮಹಾಂತೇಶ್ ಸಜ್ಜನ್ ಸೇರಿದಂತೆ ಹಲವರಿದ್ದರು.