ಉಡುಪಿ: ವೃದ್ದೆ ಉದರದಿಂದ 16 ಕೆಜಿ ಗಡ್ದೆ ಹೊರ ತೆಗೆದ ಕೆಎಂಸಿ ವೈದ್ಯರು
ದಾವಣೆಗೆರೆ ಮೂಲದ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ 16 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆಯುವಲ್ಲಿ ಮಣಿಪಾಲ ಕೆ.ಎಂ.ಸಿ ವೈದ್ಯರು ಯಶಸ್ವಿಯಾಗಿದ್ದಾರೆ.
ಉಡುಪಿ, ಫೆಬ್ರವರಿ 1: ದಾವಣಗೆರೆಯ 69ವರ್ಷ ವಯಸ್ಸಿನ ಮಹಿಳೆಯ ಉದರದಲ್ಲಿ ಬೆಳೆದಿದ್ದ 16 ಕೆಜಿ ತೂಕದ ಗಡ್ಡೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಮಹಿಳೆಯ ಅಂಡಾಶಯದಲ್ಲಿ ಬೆಳೆದಿದ್ದ ಗಡ್ಡೆಯನ್ನು ಸ್ತ್ರೀರೋಗ ತಜ್ಞರು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ.
ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಶ್ರೀ ಪಾದ ಹೆಬ್ಬಾರ್ ನೇತೃತ್ವದ ನುರಿತ ಸ್ತ್ರೀರೋಗ ತಜ್ಞರ ತಂಡ 4 ಗಂಟೆಗಳಷ್ಟು ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರ ತೆಗೆದಿದೆ. ಈ ಮೂಲಕ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಸ್ತ್ರೀರೋಗ ತಜ್ಞೆಯಾದ ಡಾ. ಸುಜಾತ ಮತ್ತು ಡಾ. ಸುನಂದಾ ಹಾಗೂ ಡಾ. ನೀತಾ ವರ್ಗಿಸ್ ನೇತೃತ್ವದ ಅರಿವಳಿಕೆ ತಂಡ ಈ ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ನೆರವಾದರು.[ಕಾರ್ಕಳ ನಕ್ಸಲ್ ಮುಖಂಡ ನೀಲಗುಳಿ ಸಿಓಡಿ ಕಸ್ಟಡಿಗೆ]
ರೋಗಿಯು ಕಳೆದ ಸುಮಾರು ಒಂದು ವರ್ಷದಿಂದ ಅಸ್ಪಷ್ಟ ಕಿಬ್ಬೊಟ್ಟೆಯ ಊದುವಿಕೆಯನ್ನು ಹೊಂದಿದ್ದರು. ಅಲ್ಲದೇ ಕಳೆದ ಮೂರು ತಿಂಗಳಿನಿಂದ ಮಹಿಳೆಗೆ ಹಸಿವಿನ ನಷ್ಟ ಮತ್ತು ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತಹ ಅನುಭವವಾಗುತ್ತಿತ್ತು. ರೋಗಿಗೆ ಗೆಡ್ಡೆಯ ಅನುಭವ ಬಹಳ ಕಾಲದವರೆಗೆ ಬಂದಿರಲಿಲ್ಲ. ಹೀಗಾಗಿ ಡಾ. ಶ್ರೀಪಾದ್ ಹೆಬ್ಬಾರ್, ತಿಂಗಳೊಳಗೆ ಗೆಡ್ಡೆಯ ಕ್ಷಿಪ್ರ ಬೆಳವಣಿಗೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಕ್ಷಣ ಗೆಡ್ಡೆಯನ್ನು ತೆಗೆಯಲು ಶಸ್ತ್ರಚಿಕಿತ್ಸಾ ವಿಧಾನವನ್ನು ಆಯ್ದುಕೊಂಡರು. ಇದಲ್ಲದೆ ರೋಗಿ 30 ವರ್ಷಗಳ ಹಿಂದೆ ಗರ್ಭಕೋಶ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದರೆ ಆ ಸಮಯದಲ್ಲಿ ಅವರ ಅಂಡಾಶಯಗಳನ್ನು ಉಳಿಸಿಕೊಳ್ಳಲಾಗಿತ್ತು.[ಕುಂದಾಪುರ ಹುಡುಗಿ ಮೇಲೆ ನಿರಂತರ 8 ತಿಂಗಳು ಅತ್ಯಾಚಾರ!]
ಮಹಿಳೆಯ ಹೊಟ್ಟೆಯಲ್ಲಿದ್ದ ಗಡ್ಡೆ 16ಕೆ.ಜಿ ತೂಕವಿತ್ತು. ಇದು ಕರಾವಳಿ ಜಿಲ್ಲೆಗಳಲ್ಲಿ ಪತ್ತೆಯಾದ ಅತಿ ದೊಡ್ಡ ಗಾತ್ರದ ಅಂಡಾಶಯದ ಗಡ್ದೆ ಎನ್ನಲಾಗಿದೆ. ರೋಗಿ ಸುಧಾರಿಸಿಕೊಳ್ಳುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಸಾಮಾನ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.