ಮೆಹಬೂಬಾ ಮುಫ್ತಿಯನ್ನು ಬಂಧಿಸಿಲ್ಲ: ಕಾಶ್ಮೀರ ಚುನಾವಣಾ ಆಯುಕ್ತ
ಶ್ರೀನಗರ, ನವೆಂಬರ್ 28: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಿಲ್ಲ ಎಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ಆಯುಕ್ತ ಕೆಕೆ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ತಮ್ಮನ್ನು ಮತ್ತೆ ಗೃಹಬಂಧನದಲ್ಲಿರಿಸಲಾಗಿದೆ, ಬಂಧಿಸಲಾಗಿದೆ ಎಂದು ಮೆಹಬೂಬಾ ಮುಫ್ತಿ ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಚುನಾವಣಾ ಆಯುಕ್ತ ಕೆಕೆ ಶರ್ಮಾ, ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಲಾಗಿಲ್ಲ. ಅವರು ಪುಲ್ವಾಮಕ್ಕೆ ತೆರಳುವವರಿದ್ದರು. ಆದರೆ ಭದ್ರತಾ ದೃಷ್ಟಿಯಿಂದ ಪುಲ್ವಾಮಗೆ ತೆರಳಬೇಡಿ ಎಂದಷ್ಟೇ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ.
ನ.27 ರಂದು ಮೆಹಬೂಬಾ ಮುಫ್ತಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವುದಕ್ಕೆ ಅಧಿಕಾರಿಗಳು ಅವಕಾಶ ನೀಡಿಲ್ಲ ಎಂದು ಮೆಹಬೂಬಾ ಮುಫ್ತಿ ಆರೋಪಿಸಿದ್ದರು.

ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯ(ಡಿಸಿಸಿ) ಮೊದಲ ಹಂತದ ಮತದಾನ ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ.
ಕೇಂದ್ರಾಡಳಿತ ಪ್ರದೇಶದ 280 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು ಮಧ್ಯಾಹ್ನ 2 ಗಂಟೆಗೆ ಮುಕ್ತಾಯಗೊಳ್ಳಲಿದೆ. 8 ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 19ಕ್ಕೆ ಮುಕ್ತಾಯಗೊಳ್ಳಲಿದೆ. ಡಿಸೆಂಬರ್ 22ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಇನ್ನು ಈ ಕೇಂದ್ರಾಡಳಿತ ಪ್ರದೇಶದ 234 ನಗರ ಸ್ಥಳೀಯ ಸಂಸ್ಥೆಗಳಿಗೆ ಸಹ ಒಟ್ಟಿಗೆ ಚುನಾವಣೆ ನಡೆಯುತ್ತಿದೆ.
ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ), ಪೀಪಲ್ಸ್ ಕಾನ್ಫರೆನ್ಸ್ ಮತ್ತು ಸಿಪಿಎಂ ಒಟ್ಟು ಸೇರಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಶನ್ ಎಂದು ಮೈತ್ರಿಕೂಟ ಮಾಡಿಕೊಂಡಿದ್ದು ಈ ಎಲ್ಲಾ ಪಕ್ಷಗಳು ಒಟ್ಟು ಸೇರಿ ಡಿಡಿಸಿ ಚುನಾವಣೆಗೆ ಸ್ಪರ್ಧಿಸುತ್ತಿವೆ.
ಎನ್ಐಎ ವಶಕ್ಕೆ ಪಡೆದಿರುವ ಪಿಡಿಪಿ ನಾಯಕ ವಾಹೀದ್ ಪರ್ರಾ ಅವರ ಪುಲ್ವಾಮದಲ್ಲಿರುವ ನಿವಾಸಕ್ಕೆ ಮೆಹಬೂಬಾ ಮುಫ್ತಿ ಭೇಟಿ ನೀಡುವವರಿದ್ದರು. ಆದರೆ ಇದಕ್ಕೆ ಅವಕಾಶ ನೀಡಲಾಗಿಲ್ಲ.












Click it and Unblock the Notifications