ಕಾಶ್ಮೀರಿ ಪಂಡಿತ್ ಸುನಿಲ್ ಭಟ್ ಹತ್ಯೆ ಪ್ರಕರಣ: ಗುರಿ ಹತ್ಯೆಯ ವಿರುದ್ಧ ಪ್ರತಿಭಟನೆ
ಶ್ರೀನಗರ ಆಗಸ್ಟ್ 17: ಕಾಶ್ಮೀರದಲ್ಲಿ ನಿರಂತರವಾಗಿ ನಾಗರಿಕರು ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನದ ನಂತರ, ಭಯೋತ್ಪಾದಕರು ಇಬ್ಬರು ಕಾಶ್ಮೀರಿ ಪಂಡಿತರನ್ನು ಹೊಡೆದುರುಳಿಸಿದ್ದಾರೆ. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಎರಡನೇ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಕಾಶ್ಮೀರಿ ಪಂಡಿತರ ಜೊತೆಗೆ ಕಾಶ್ಮೀರಿ ಮುಸ್ಲಿಮರು ಕೂಡ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ನೂರಾರು ಕಾಶ್ಮೀರಿ ಮುಸ್ಲಿಮರು ಸುನೀಲ್ ಭಟ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು ಮತ್ತು ಗುರಿ ಹತ್ಯೆಗಳ ವಿರುದ್ಧ ಪ್ರತಿಭಟಿಸಿದರು. ಜೊತೆಗೆ ಈ ದಾಳಿಯನ್ನು ವಿರೋಧಿಸಿ ಕಾಶ್ಮೀರಿ ಪಂಡಿತರು ಇಂದು ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಪ್ರತಿಕ್ರಿಯಿಸಿದ್ದಾರೆ. "ಕಾಶ್ಮೀರಿ ಪಂಡಿತರು ಅಸುರಕ್ಷಿತರಾಗಿದ್ದಾರೆ. ಪ್ರಧಾನಿ ಮೋದಿಯವರ ಆಡಳಿತ ಮತ್ತು ಲೆಫ್ಟಿನೆಂಟ್ ಗವರ್ನರ್ ನೇಮಕ ಇಲ್ಲಿ ವಿಫಲವಾಗಿದೆ. ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿರುತ್ತಾರೆ ಎಂದು ಹೇಳಿ 370ನೇ ವಿಧಿಯನ್ನು ತೆಗೆದುಹಾಕಲಾಗಿದೆ. ಆದರೆ, ಎಲ್ಲಾ ಕಾಶ್ಮೀರಿ ಪಂಡಿತರು ಭಯದಿಂದ ಬದುಕುತ್ತಿದ್ದಾರೆ. ಇದಕ್ಕೆ ಪ್ರಧಾನಿ, ಗೃಹ ಸಚಿವರು ಮತ್ತು ಬಿಜೆಪಿ ಉತ್ತರಿಸಬೇಕು" ಎಂದಿದ್ದಾರೆ..
ಶ್ರೀನಗರ: ಟಿಕ್ಟಾಕ್ ಕಲಾವಿದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು
ಗುಂಡು ಹಾರಿಸಿದ ಭಯೋತ್ಪಾದಕರು
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಇಬ್ಬರು ಕಾಶ್ಮೀರಿ ಪಂಡಿತರು ತಮ್ಮ ಹೆಸರನ್ನು ಕೇಳಿದ ನಂತರ ಭಯೋತ್ಪಾದಕರು ಗುಂಡಿಕ್ಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ದಾಳಿಯಲ್ಲಿ ಸುನೀಲ್ ಭಟ್ ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಯೋತ್ಪಾದಕ ಸಂಘಟನೆ ಕೆಎಫ್ಎಫ್ (ಕಾಶ್ಮೀರ ಸ್ವಾತಂತ್ರ್ಯ ಹೋರಾಟಗಾರರು) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಸುನೀಲ್ ಭಟ್ ತ್ರಿವರ್ಣ ಧ್ವಜಾರೋಹಣಕ್ಕೆ ಹೋಗಿದ್ದ ಕಾರಣ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಭಯೋತ್ಪಾದಕ ಸಂಘಟನೆ ಹೇಳುತ್ತಿದೆ. ವರದಿಗಳ ಪ್ರಕಾರ, ಭಯೋತ್ಪಾದಕರು ಮೊದಲು ಸುನೀಲ್ನ ಹೆಸರನ್ನು ಕೇಳಿದರು ನಂತರ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಕಾಶ್ಮೀರಿ ಮುಸ್ಲಿಮರೂ ಪ್ರತಿಭಟನೆಯಲ್ಲಿ ಭಾಗಿ
ಘಟನೆ ಬಳಿಕ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸುನೀಲ್ ಭಟ್ ಅವರಿಗೆ ನಾಲ್ವರು ಪುತ್ರಿಯರಿದ್ದು, ಅವರ ಸ್ಥಿತಿ ಹದಗೆಟ್ಟಿದೆ. ಸುನೀಲ್ ಹತ್ಯೆ ಇಡೀ ಕುಟುಂಬವನ್ನೇ ಬೆಚ್ಚಿ ಬೀಳಿಸಿದೆ. ಗುರಿ ಹತ್ಯೆಯಲ್ಲಿ ಹುತಾತ್ಮರಾದ ಕಾಶ್ಮೀರಿ ಪಂಡಿತ್ ಸುನೀಲ್ ಭಟ್ ಅವರ ಅಂತ್ಯಕ್ರಿಯೆ ಮಂಗಳವಾರವೇ ನೆರವೇರಿತು. ಕೊನೆಯ ಯಾತ್ರೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಸುನೀಲ್ ಅವರ ಅಂತ್ಯಕ್ರಿಯೆಯಲ್ಲಿ ಮುಸ್ಲಿಂ ಸಮುದಾಯದ ನೂರಾರು ಜನರು ಪಾಲ್ಗೊಂಡಿದ್ದರು. ಈ ಘಟನೆಯ ವಿರುದ್ಧ ಕಾಶ್ಮೀರಿ ಮುಸ್ಲಿಮರು ಧ್ವನಿ ಎತ್ತಿದ್ದಾರೆ. ಈ ದಾಳಿಯನ್ನು ವಿರೋಧಿಸಿ ಕಾಶ್ಮೀರಿ ಪಂಡಿತರು ಇಂದು ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಾಶ್ಮೀರದಲ್ಲಿ ರಾಜಕೀಯ ಆರಂಭ
ಈ ಹಿಂದೆ ಭಯೋತ್ಪಾದಕರು ಸಾಂಬಾದ ರಾಹುಲ್ ಭಟ್ ಮತ್ತು ರಜನಿ ಬಾಲಾ ಅವರನ್ನು ಕೊಂದಿದ್ದರು. ಕಳೆದ 4 ತಿಂಗಳುಗಳಲ್ಲಿ, ಕಾಶ್ಮೀರದಲ್ಲಿ ಹಲವಾರು ಗುರಿ ಹತ್ಯೆಗಳು ನಡೆದಿವೆ. ವಿಶೇಷವಾಗಿ ಕಾಶ್ಮೀರಿ ಪಂಡಿತರು ಮತ್ತು ವಲಸಿಗರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆದಿವೆ. ಮೊನ್ನೆ ದಾಳಿಯಲ್ಲಿ ಗಾಯಗೊಂಡಿರುವ ಪಿಂಟು ಅವರ ಸ್ಥಿತಿಗತಿ ತಿಳಿಯಲು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೇನಾ ಆಸ್ಪತ್ರೆಗೆ ಆಗಮಿಸಿದ್ದರು. ಇನ್ನೊಂದೆಡೆ ಈ ವಿಚಾರದಲ್ಲಿ ರಾಜಕೀಯವೂ ಶುರುವಾಗಿದೆ. ಕಾಶ್ಮೀರದಲ್ಲಿ ಹಾರಾಡುತ್ತಿರುವ ತ್ರಿವರ್ಣ ಧ್ವಜವನ್ನು ನೋಡಿ ಭಯೋತ್ಪಾದಕರು ಹೇಡಿತನದ ಘಟನೆಗಳನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಪ್ರತಿಪಕ್ಷಗಳು ಈ ಗುರಿ ಹತ್ಯೆಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡಿವೆ.
168ಕ್ಕೂ ಹೆಚ್ಚು ಭಯೋತ್ಪಾದಕರು ಕಾರ್ಯ
ಕಳೆದ ಎಂಟು ತಿಂಗಳಿನಿಂದ ಕಾಶ್ಮೀರವನ್ನು ವ್ಯಾಪಿಸುತ್ತಿರುವ ವಲಸೆ ಕಾರ್ಮಿಕರು ಮತ್ತು ಸ್ಥಳೀಯ ಅಲ್ಪಸಂಖ್ಯಾತರ ಮೇಲಿನ ಉದ್ದೇಶಿತ ದಾಳಿಯ ಸರಣಿಯಲ್ಲಿ ಇಂದಿನ ದಾಳಿ ಇತ್ತೀಚಿನದು. ಉದ್ದೇಶಿತ ಹತ್ಯೆಗಳು ಅಕ್ಟೋಬರ್ನಲ್ಲಿ ಪ್ರಾರಂಭವಾಗಿದ್ದವು, ಬಲಿಪಶುಗಳು ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರದ ಹೊರಗಿನಿಂದ ಉದ್ಯೋಗಗಳನ್ನು ಹುಡುಕಿಕೊಂಡು ಬಂದ ವಲಸೆ ಪಂಡಿತರು ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ 168 ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷ ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ 75 ಮಂದಿ ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ 21 ವಿದೇಶಿ ಸೈನಿಕರು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿ ನೇತೃತ್ವದ ಕೇಂದ್ರವು ಕಣಿವೆಯ ಜನರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.