ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ಹೆಚ್ಚುವರಿ 8 ಸಾವಿರ ಯೋಧರ ನಿಯೋಜನೆ
ಶ್ರೀನಗರ, ಆಗಸ್ಟ್ 5: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದ್ದು ಮತ್ತೆ 8 ಸಾವಿರ ಯೋಧರನ್ನು ನಿಯೋಜನೆ ಮಾಡಲಾಗಿದೆ.
ಈಗಾಗಲೇ ಕಳೆದ ಒಂದು ವಾರದಲ್ಲಿ ಹೆಚ್ಚುವರಿಯಾಗಿ 38 ಸಾವಿರ ಯೋಧರನ್ನು ನಿಯೋಜಿಸಲಾಗಿತ್ತು. ಈಗ ಪರಿಚ್ಛೇದ 370 ರದ್ದತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವಾಗಿರದೆ ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿದೆ.
ಹಾಗೆಯೇ ಲಡಾಖ್ ಕೂಡ ಕೇಂದ್ರಾಡಳಿತ ಪ್ರದೇಶವಾಗಿದ್ದು ಅಲ್ಲಿ ವಿಧಾನಸಭೆ ಇರುವುದಿಲ್ಲ. ಇಡೀ ದೇಶಕ್ಕೆ ಒಂದೇ ಕಾನೂನು ಅನ್ವಯವಾಗಲಿದೆ. ಇದಕ್ಕೆ ರಾಷ್ಟ್ರಪತಿ ಕೂಡ ಅಂಕಿತ ಹಾಕಿದ್ದಾರೆ.
ಇದಕ್ಕೆ ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಾದ ಓಮರ್ ಅಬ್ದುಲ್ಲಾ, ಮೆಹಬೂಬಾ ಮಫ್ತಿ ಟ್ವೀಟ್ ಮಾಡಿದ್ದು, ಪರಿಚ್ಛೇದ ರದ್ದತಿ ಮಸೂದೆ ವಿರುದ್ಧ ಗುಡುಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರೇ ಮುಖ್ಯಸ್ಥರಾಗಿರುತ್ತಾರೆ.
ಜಮ್ಮು ಕಾಶ್ಮೀರದಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಮೆಹಬೂಬಾ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಜೊತೆಗೆ ಇಂಟರ್ನೆಟ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ.
ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ 38 ಸಾವಿರ ಯೋಧರನ್ನು ನಿಯೋಜಿಸಲಾಗಿದೆ. ಅಲ್ಲಿ ಗಲಭೆಗಳು ನಡೆಯುವ ಸಾಧ್ಯತೆ ಇದ್ದು ಹಾಗಾಗಿ ಭದ್ರತೆ ಹೆಚ್ಚಿಸಲಾಗಿದೆ.