ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರ ಮಾಡುವುದಕ್ಕೆ ಆಗುತ್ತಾ? ಮುಫ್ತಿಗೆ ರಾಜ್ಯಪಾಲರ ಪ್ರಶ್ನೆ
ಶ್ರೀನಗರ್, ನವೆಂಬರ್ 22: ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರ ಮಾಡೋದಿಕ್ಕೆ ಆಗುತ್ತಾ? ಎಂದು ಜಮ್ಮು-ಕಾಶ್ಮೀರದ ರಾಜ್ಯಪಾಲರಾದ ಸತ್ಯಪಾಲ ಮಲಿಕ್ ಪ್ರಶ್ನೆ ಮಾಡಿದ್ದಾರೆ. ಹೀಗೆ ಪ್ರಶ್ನೆ ಎದುರಾಗಿರುವುದು ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿಯ ಮೆಹಬೂಬಾ ಮುಫ್ತಿ ಅವರಿಗೆ.
"ರಾಜ್ಯಪಾಲರ ಕಚೇರಿಯ ಫ್ಯಾಕ್ಸ್ ನಲ್ಲಿ ಬೆಂಬಲದ ಪತ್ರ ಸ್ವೀಕಾರ ಆಗದಿದ್ದಾಗ ನನಗೆ ಬಹುಮತ ಇರುವ ಬಗ್ಗೆ ಪತ್ರವೊಂದನ್ನು ಟ್ವೀಟ್ ಮಾಡಿದ್ದೆ" ಎಂದಿದ್ದರು ಮುಫ್ತಿ. ಅದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯಪಾಲರು ಪ್ರಶ್ನೆ ಎಸೆದಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲಾಗದ್ದಕ್ಕೆ ಕಾರಣ ಬಿಜೆಪಿ ಮತ್ತು ಫ್ಯಾಕ್ಸ್ ಮಷಿನ್!
ಜಮ್ಮು-ಕಾಶ್ಮೀರದಲ್ಲಿ ಸರಕಾರ ರಚನೆ ಮಾಡುವುದಾಗಿ ಇಬ್ಬರಿಂದ ಮನವಿ ಬಂದಾಗ ಅಲ್ಲಿನ ವಿಧಾನಸಭೆಯನ್ನು ವಿಸರ್ಜಿಸಿ ರಾಜ್ಯಪಾಲರು ಆದೇಶಿಸಿದ್ದರು. ಈ ನಿರ್ಧಾರಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ರಾಜ್ಯದಲ್ಲಿ ಬಿಜೆಪಿಯೇತರ ಸರಕಾರ ರಚನೆ ಮಾಡುವುದಕ್ಕೆ ಬೇಕೆಂತಲೆ ಅಡ್ಡ ಪಡ್ಡಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದವು.
ವಿಧಾನಸಭೆ ವಿಸರ್ಜನೆ ಮಾಡಿದ್ದರಿಂದ ಅವಧಿ ಮುಗಿಯುವ ಎರಡು ವರ್ಷಕ್ಕೆ ಮುನ್ನವೇ ಚುನಾವಣೆ ನಡೆಯುವಂತಾಗಿದೆ. "ನಾನು ರಾಜ್ಯಪಾಲರಿಗೆ ಕರೆ ಮಾಡಲು ಯತ್ನಿಸಿದೆ. ವಿರೋಧ ಪಕ್ಷದ ಒಮರ್ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ನ ಬೆಂಬಲ ನನಗಿದೆ ಎಂದು ಬೆಂಬಲ ಪತ್ರವನ್ನು ಫ್ಯಾಕ್ಸ್ ಮಾಡಲು ಕೂಡ ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ" ಎಂದು ಮುಫ್ತಿ ಆರೋಪ ಮಾಡಿದ್ದರು.
ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ರಾಜ್ಯಪಾಲರು ನೀಡಿದ 4 ಕಾರಣಗಳು
ಇದಕ್ಕೆ ಉತ್ತರ ನೀಡಿರುವ ರಾಜ್ಯಪಾಲರು, ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರ ಮಾಡಕ್ಕೆ ಆಗುತ್ತಾ? ನಾನು ಟ್ವೀಟ್ ಮಾಡೋದೂ ಇಲ್ಲ, ನೋಡುವುದೂ ಇಲ್ಲ" ಮುಫ್ತಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಫ್ಯಾಕ್ಸ್ ಸಮಸ್ಯೆ ಇರಲಿಲ್ಲ. ನಿನ್ನೆ ಈದ್ ಮಿಲಾದ್. ನನಗೆ ಅಡುಗೆ ಮಾಡುವವನು ಕೂಡ ಇರಲಿಲ್ಲ. ಇನ್ನು ಫ್ಯಾಕ್ಸ್ ಆಪರೇಟರ್ ಎಲ್ಲಿರ್ತಾರೆ? ನಿನ್ನೆ ಯಾರೂ ಇರಲಿಲ್ಲ ಎಂದಿದ್ದಾರೆ.
ಇನ್ನೂ ಮುಂದುವರಿದು, ಒಂದು ವೇಳೆ ಫ್ಯಾಕ್ಸ್ ಬಂದು, ಸ್ವೀಕರಿಸಿದ್ದರೂ ನನ್ನ ನಿರ್ಧಾರ ಇದೇ ಆಗಿರ್ತಿತ್ತು. "ಈ ಮಹಾ ಮೈತ್ರಿಯು ಅವಕಾಶವಾದಿಗಳದು. ಚುನಾವಣೆ ಬೇಡ ಎಂಬ ಕಾರಣಕ್ಕೆ ಕುದುರೆ ವ್ಯಾಪಾರಕ್ಕೆ ಪ್ರಯತ್ನಿಸಲಾಯಿತು. ಅವರೇ ಸ್ಥಳೀಯ ಚುನಾವಣೆಗಳನ್ನು ಬಹಿಷ್ಕರಿಸಿದರು. ನನಗೆ ಬೇರೆ ಯಾವ ಹಿತಾಸಕ್ತಿಯೂ ಇಲ್ಲ. ಯಾರ ಪಕ್ಷಪಾತಿಯೂ ಅಲ್ಲ. ಯಾರ ಪರವೂ ವರ್ತಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರೀತಿಯಲ್ಲಿ ನಡೆದುಕೊಂಡಿದ್ದೀನಿ. ದೆಹಲಿಯಲ್ಲೂ ಕೂಡ ಈ ಬಗ್ಗೆ ಕೇಳಿಲ್ಲ" ಎಂದು ಅವರು ಹೇಳಿದ್ದಾರೆ.
ಮೆಹಬೂಬಾ ಮುಫ್ತಿಯ ಮೈತ್ರಿಯೇ ಇರಬಹುದು ಅಥವಾ ಬಿಜೆಪಿ ಬೆಂಬಲಿತ ಸಜದ್ ಲೋನ್ ಇರಬಹುದು. ಯಾರಿಗೂ ಅಗತ್ಯ ಸಂಖ್ಯೆಯ ಬೆಂಬಲ ಇರಲಿಲ್ಲ ಅನ್ನೋದು ನನಗೆ ಗೊತ್ತಿತ್ತು ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.