ಕಾಂಗ್ರೆಸ್ ಪಕ್ಷದ ಸಿ.ಎಚ್.ವಿಜಯ್ ಶಂಕರ್ ಮತ್ತೆ ಬಿಜೆಪಿಗೆ?
ಮೈಸೂರು, ಅಕ್ಟೋಬರ್ 24: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ಅವರು ಮತ್ತೆ ಬಿಜೆಪಿ ಪಕ್ಷಕ್ಕೆ ಮರಳಲಿದ್ದಾರೆ ಎಂಬ ವದಂತಿ ಜಿಲ್ಲಾದ್ಯಂತ ಹರಿದಾಡುತ್ತಿದೆ.
ಬಿಜೆಪಿ ತನಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಸಿ.ಎಚ್.ವಿಜಯಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಇವರು ಮೊದಲೂ ಕಾಂಗ್ರೆಸ್ ನಲ್ಲೇ ಇದ್ದರು. ಕಳೆದ ಫೆಬ್ರುವರಿಯಲ್ಲಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದು, ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಅವರು ಮತ್ತೆ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದ್ದು, ಬಿಜೆಪಿಗೆ ಮರಳುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಜೊತೆಗಿದ್ದವರೇ ಸೋಲಿಗೆ ಕಾರಣರಾದರು: ವಿಜಯ್ ಶಂಕರ್
ವಿಜಯಶಂಕರ್ ಅವರು ಪಿರಿಯಾಪಟ್ಟಣದ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೇಳಿದ್ದು, ಅದಕ್ಕೆ ಬಿಜೆಪಿ ನಾಯಕರೂ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ವಿ.ಸೋಮಣ್ಣ, "ವಿಜಯಶಂಕರ್ ನನ್ನ ಆತ್ಮೀಯ ಸ್ನೇಹಿತ. ನಾನು ವಿಜಯಶಂಕರ್ಗೆ ಮೊದಲೇ ಹೇಳಿದ್ದೆ. ಮೋದಿ ಹವಾ ಇದೆ, ತರಗೆಲೆ ಥರ ತೂರಿ ಹೋಗುತ್ತೀರಿ ಅಂತ. ಅವರ ಮನೆಯವರ ಬಳಿಯೂ ಮಾತುಕತೆ ಆಡಿದ್ದೆ. ಆದರೂ ಪಕ್ಷ ತೊರೆದು ಹೋಗಿದ್ದರು. ವಿಜಯಶಂಕರ್ ಮರಳಿ ಪಕ್ಷಕ್ಕೆ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅದನ್ನು ವರಿಷ್ಠರು ನಿರ್ಧರಿಸುತ್ತಾರೆ" ಎಂದಿದ್ದಾರೆ.