ಲಾಕ್ ಡೌನ್ ನಡುವೆ ಜೂಜಾಟ; ಮೈಸೂರು ನಗರಸಭೆ ಸದಸ್ಯ ಸೇರಿ 12 ಜನ ವಶಕ್ಕೆ
ಮೈಸೂರು, ಏಪ್ರಿಲ್ 14: ಕೊರೊನಾ ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿದ್ದರೂ ಜನರು ಒಂದಿಲ್ಲೊಂದು ನೆಪದಿಂದ ಬೀದಿಗಿಳಿಯುತಿದ್ದಾರೆ. ಈ ಲಾಕ್ ಡೌನ್ ಸಮಯದಲ್ಲೂ ಜೂಜಾಟದಲ್ಲಿ ತೊಡಗಿದ್ದ ಮನೆಗಳ ಮೇಲೆ ಇಂದು ಪೊಲೀಸರು ದಾಳಿ ನಡೆಸಿ 12 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ನಂಜನಗೂಡು ಪಟ್ಟಣದಲ್ಲಿ ಜೂಜಾಟದಲ್ಲಿ ತೊಡಗಿಕೊಂಡಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದಿರುವವರಲ್ಲಿ ನಗರಸಭಾ ಸದಸ್ಯರೊಬ್ಬರೂ ಸೇರಿದ್ದಾರೆ.
ಕೊರೊನಾ ಬಂದ್ರೂ ಕಾವಡಿಯಲ್ಲಿ ಕೋಳಿ ಅಂಕ ನಿಂತಿಲ್ಲ
ನಂಜನಗೂಡಿನ 2 ಮನೆಗಳಲ್ಲಿ ಜೂಜು ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ಹಳ್ಳದಕೇರಿಯ ಹಾಗೂ ಮುಸ್ಲಿಂ ಬಡಾವಣೆಯ 2 ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಳ್ಳದ ಕೇರಿಯ ಮನೆಯಲ್ಲಿ ನಗರಸಭೆಯ ಬಿಜೆಪಿ ಸದಸ್ಯ ಗಿರೀಶ್ ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ.
ಇದಾದ ನಂತರ ಮತ್ತೊಂದು ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, 7 ಜನರನ್ನು ದಸ್ತಗಿರಿ ಮಾಡಿದ್ದಾರೆ. ಈ ಸಂಬಂಧ ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ತನಿಖೆ ಕೈಗೊಂಡಿದ್ದಾರೆ.