ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಕೇರಳ ಶಾಸಕ ಅಬ್ದಲ್ ಅಜಾಕ್ ನಿಧನ
ಮಂಗಳೂರು, ಅಕ್ಟೋಬರ್ 20: ಕರ್ನಾಟಕ- ಕೇರಳ ಗಡಿ ಭಾಗ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ.ಬಿ. ಅಬ್ದುಲ್ ರಜಾಕ್(63) ಇಂದು ಮುಂಜಾನೆ ವಿಧಿವಶರಾದರು.
ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅಬ್ದುಲ್ ರಜಾಕ್ ಕಳೆದ ಹಲವಾರು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆಗೆ ಸ್ಪಂದಿಸದೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಸುಕಿನಲ್ಲಿ ಅಬ್ದಲ್ ರಜಾಕ್ ನಿಧನರಾದರು. ಅವರು ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ 2011ರಲ್ಲಿ ಮುಸ್ಲಿಂ ಲೀಗಿನಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. ಭಾರೀ ಕುತೂಹಲ ಕೆರಳಿಸಿದ್ದ 2016 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರ ಬಿಜೆಪಿ ಅಭ್ಯರ್ಥಿಯನ್ನು 89 ಮತಗಳ ಅಂತರದಿಂದ ಸೋಲಿಸಿ ಮಂಜೇಶ್ವರ ಶಾಸಕರಾಗಿ ಅಬ್ದುಲ್ ರಜಾಕ್ ಆಯ್ಕೆಯಾಗಿದ್ದರು.
ಮಂಜೇಶ್ವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಅಬ್ದುಲ್ ರಜಾಕ್ ಅವರು ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಮಾಡುವ ಮೂಲಕ ಗಡಿನಾಡ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದರು.
2011ರಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಸೋಲಿಸಿ ವಿಜಯಿಯಾದ ಅವರು 2016ರಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಅವರನ್ನು 89 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಚುನಾವಣೆಯ ಫಲಿತಾಂಶವನ್ನು ಬಿಜೆಪಿ ನ್ಯಾಯಾಯಲದಲ್ಲಿ ಪ್ರಶ್ನಿಸಿತ್ತು. 2016 ರ ಚುನಾವಣೆಯಲ್ಲಿ ನಕಲಿ ಮತದಾನ ಆರೋಪವನ್ನು ಅಬ್ದುಲ್ ರಜಾಕ್ ಕೇರಳ ಹೈಕೋರ್ಟ್ ಕೇಸು ಎದುರಿಸುತ್ತಿದ್ದರು.