ಮಂಡ್ಯ: ಕೈಕೊಟ್ಟ ಬೆಳೆ, ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ಮಂಡ್ಯ, ಸೆಪ್ಟೆಂಬರ್ 4: ಕೈತುಂಬ ಸಾಲಮಾಡಿಕೊಂಡಿದ್ದ ರೈತನೊಬ್ಬ ಅದನ್ನು ತೀರಿಸಲು ಸಾಧ್ಯವಾಗದೆ ಕ್ರಿಮಿನಾಶಕದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ಪೇಟೆ ತಾಲೂಕಿನ ಪಿಡಿಜಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಬೋರೆವೆಲ್ ನಲ್ಲಿ ನೀರು ಸಿಗದೆ ಸೌತೆಕಾಯಿ ಬೆಳೆ ಕೈಕೊಟ್ಟಿತ್ತು. ಸಾಲ ತೀರಿಸುವುವದಕ್ಕೆ ಒಂದೇ ದಾರಿಯಾಗಿದ್ದ ಬೆಳೆಯೂ ಕೈಕೊಟ್ಟಿದ್ದರಿಂದ ಹತಾಶನಾದ ರೈತ ಇಂಥ ನಿರ್ಧಾರಕ್ಕೆ ಬಂದಿದ್ದಾರೆ.
ಎಚ್ ಡಿ ಕೋಟೆಯಲ್ಲಿ ರೈತ ಮಹಿಳೆ ಆತ್ಮಹತ್ಯೆ
ಗ್ರಾಮದ ಹನುಮೇಗೌಡ ಎಂಬುವರ ಪುತ್ರ ಜಯರಾಮು(40) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಈತ ಸೌತೆಕಾಯಿ ಬೆಳೆಬೆಳೆಯಲೆಂದು ವಿಠಲಾಪುರ ಗ್ರಾಮದ ಡಿಸಿಸಿ ಬ್ಯಾಂಕಿನಲ್ಲಿ ಒಡವೆ ಇಟ್ಟು 50ಸಾವಿರ ಕೃಷಿಸಾಲ ಪಡೆದಿದ್ದ. ಜೊತೆಗೆ ಸುಮಾರು 4ಲಕ್ಷ ರೂ. ಕೈಸಾಲ ಮಾಡಿ ಮದ್ದಿಕ್ಯಾಚಮನಹಳ್ಳಿ ಎಲ್ಲೆಯಲ್ಲಿದ್ದ ತಮ್ಮ ಕುಟುಂಬಕ್ಕೆ ಸೇರಿದ ಒಂದೂವರೆ ಎಕರೆ ಜಮೀನಿನಲ್ಲಿ ಮೂರು ಕೊಳವೆ ಬಾವಿ ಕೊರೆಯಿಸಿ ತರಕಾರಿ, ಕಬ್ಬು ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದ.
ಕಳೆದ ಎರಡು ವರ್ಷಗಳಿಂದ ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಈ ಬಾರಿ ಮಳೆ ಬಾರದೆ ಬರಗಾಲ ಆವರಿಸಿದ ಕಾರಣದಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದು ಬರಿದಾಗಿತ್ತು. ಇದರಿಂದ ಬೆಳೆ ಕೈಕೊಟ್ಟಿತ್ತು. ಮನನೊಂದ ರೈತ ಜಯರಾಂ ಜಮೀನಿನ ಬಳಿ ಸೌತೆ ಗಿಡಕ್ಕೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ವಿಷಯ ತಿಳಿದು ಅವರನ್ನು ತಕ್ಷಣ ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರುಳೆದಿದ್ದಾರೆ. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.