ಹಾಸನ: ಸಾಲ ಬಾಧೆಗೆ ಮತ್ತಿಬ್ಬರು ರೈತರ ಬಲಿ
ಸೋಮನಾಥ ಹಳ್ಳಿ ಹಾಗೂ ಬ್ಯಾಡರ ಹಳ್ಳಿಯ ರೈತರ ಸಾವು; ಮುಂದುವರಿದೇ ಇದೇ ರಾಜ್ಯದ ಅನ್ನದಾತರ ಆತ್ಮಹತ್ಯೆ ಪ್ರಕರಣ
ಹಾಸನ, ಮೇ 4: ಸಾಲ ಹೊರೆಯಿಂದ ಬೇಸತ್ತಿದ್ದ ಜಿಲ್ಲೆಯ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಸೋಮನಾಥಹಳ್ಳಿಯ ಗ್ರಾಮದ ಚಿಕ್ಕೇಗೌಡ ( 44) ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬಾಗೂರು ಬ್ಯಾಡರಹಳ್ಳಿ ಗ್ರಾಮದ ರಾಮಯ್ಯ ( 41) ತನ್ನ ಹೊಲದ ಹಲಸಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.
ಬೆಳೆ ನಷ್ಟ ಹಾಗೂ ಬ್ಯಾಂಕ್ , ಕೈ ಸಾಲ ತೀರಿಸಲಾಗದೇ ಆ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರೈತರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿ ಆತ್ಮಹತ್ಯೆ: ಲೋಕೋಪಯೋಗಿ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಶಿವ ಪ್ರಕಾಶ್ ಎಂಬುವರ ಪತ್ನಿ ರಾಧಿಕಾ ( 36) ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಧಿಕಾ ಅವರು ಶಿವಪ್ರಕಾಶ್ ಅವರನ್ನು ಕೈ ಹಿಡಿದು ಎಂಟು ವರ್ಷಗಳಾಗಿದ್ದವು. ಪತಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.