ರೈತರ ಪರಿಸ್ಥಿತಿ ತಿಳಿಸಲು ದೆಹಲಿಗೆ ತೆರಳಲಿದೆ ಸರ್ವಪಕ್ಷ ನಿಯೋಗ
ಹುಬ್ಬಳ್ಳಿ, ಆಗಸ್ಟ್, 05 : ರೈತರ ಆತ್ಮಹತ್ಯೆ, ಬೆಳೆ ಹಾನಿ ಮತ್ತು ಕೆಲವೆಡೆ ಬರ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ರಾಜ್ಯದ ಸರ್ವ ಪಕ್ಷಗಳ ನಿಯೋಗ ದೆಹಲಿಗೆ ತೆರಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತಿಳಿಸಿದರು.
ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳಲು ಆಗಮಿಸಿದ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.[ಮಂಡ್ಯ ಪಾಲಿಟಿಕ್ಸ್: ಅಂಬಿ ಮೂಲೆ ತಳ್ಳಲು ಎಸ್ ಎಂ ಕೃಷ್ಣ 'ರಮ್ಯಾ'ಸ್ತ್ರ?]
ಪ್ರಧಾನಿ ಕಾರ್ಯಾಲಯವನ್ನು ಈಗಾಗಲೇ ಸಂಪರ್ಕಿಸಿ ಸಂಸತ್ ಅಧಿವೇಶನ ಮುಗಿಯುವ ಮುನ್ನವೇ ಭೇಟಿಗೆ ಸಮಯ ನಿಗದಿಪಡಿಸುವಂತೆ ಕೋರಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಕಳಸಾ ಬಂಡೂರಿ ನಾಲಾ ಯೋಜನೆ ಕುರಿತು ಪ್ರಸ್ತಾಪಿಸಿ ಪ್ರಧಾನ ಮಂತ್ರಿ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಬೆಟ್ಟಿಂಗ್ ಹಗರಣದ ತನಿಖೆ ಪ್ರಗತಿಯಲ್ಲಿದೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಇಂತಹ ಕೃತ್ಯಗಳಲ್ಲಿ ತೊಡಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಹೇಳಿದರು.
ಗದಗ, ಆಗಸ್ಟ್, 05 : ಮುಂಡರಗಿ ತಾಲೂಕಿನ ಅಕ್ಕಿಗುಂದ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೃತ ರೈತನ ಕುಟುಂಬ ಭೇಟಿ ನೀಡಿದ ಸಿದ್ದರಾಮಯ್ಯ, ಮೃತ ರೈತನ ಪತ್ನಿ ಮೀರವ್ವ ಧನಸಿಂಗಪ್ಪ ಲಮಾಣಿ ಅವರಿಗೆ ಕೃಷಿ ಇಲಾಖೆಯಿಂದ ಮಂಜೂರಾದ 2 ಲಕ್ಷ ರೂ ಪರಹಾರ ಚೆಕ್ನ್ನು ವಿತರಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ ಪಾಟೀಲ್ ಹಾಗೂ ವಿಧಾನಸಭಾ ಸದಸ್ಯರಾದ ಜಿ.ಎಸ್ ಪಾಟೀಲ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.