ಪರೇಶ್ ಮೆಸ್ತಾ ಸಾವು ಪ್ರಕರಣದಲ್ಲಿ ಬಿಜೆಪಿ ರಾಜಕೀಯ; ಹೊನ್ನಾವರದಲ್ಲಿ ಕಾಂಗ್ರೆಸ್ ಆರೋಪ
ಹೊನ್ನಾವರ, ಅಕ್ಟೋಬರ್, 06: ಮೀನುಗಾರ ಬಾಲಕ ಪರೇಶ್ ಮೆಸ್ತ ಸಾವಿನ ರಹಸ್ಯದ ತನಿಖೆ ವಹಿಸಿಕೊಂಡಿದ್ದ ಸಿಬಿಐ ಕೊನೆಗೂ ನಾಲ್ಕುವರೆ ವರ್ಷದ ಬಳಿಕ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಪ್ರಕರಣ ಸದ್ಯ ತಾರ್ಕಿಕ ಅಂತ್ಯಕ್ಕೆ ಬಂದಂತೆ ಕಂಡರೂ, ಮುಂದಿನ ಚುನಾವಣೆಗೂ ಈ ಪ್ರಕರಣ ಅಸ್ತ್ರವಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಹೊನ್ನಾವರದಲ್ಲಿ ಕಾಂಗ್ರಸ್ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2017ರ ಅಂತ್ಯದ ವೇಳೆಗೆ ಕಿಡಿಗೇಡಿಗಳು ಹೊನ್ನಾವರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಚಂದಾವರದಲ್ಲಿ ಹೊತ್ತಿಸಿದ್ದ ಸಣ್ಣ ಪುಟ್ಟ ಗಲಾಟೆ ನಡೆದಿತ್ತು. ಈ ಸಣ್ಣಪುಟ್ಟ ಕಿಡಿಯೊಂದು ಜಿಲ್ಲೆಯಲ್ಲಿಯೇ ಎಂದು ಕಂಡರಿಯದ ಗಲಭೆಗೆ ಕಾರಣವಾಗಿತ್ತು. ಅಲ್ಲದೆ ಇದೇ ವೇಳೆ ಪರೇಶ್ ಮೆಸ್ತಾ ಎಂಬ ಮೀನುಗಾರ ಯುವಕ ಸಾವನ್ನಪ್ಪಿದ್ದು, ಕೋಮು ಗಲಭೆಗೆ ಕಾರಣವಾಗಿ ಕೊನೆಗೆ ರಾಜಕೀಯ ತಿರುವು ಪಡೆದುಕೊಂಡಿತ್ತು.
ಪರೇಶ್ ಮೆಸ್ತಾ ಕೇಸ್: ಕೋರ್ಟ್ಗೆ 'ಬಿ' ರಿಪೋರ್ಟ್ ಸಲ್ಲಿಸಿದ ಸಿಬಿಐ
ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶೋಭಾ ಕರಂದ್ಲಾಜೆ, ಸಂಸದ ಅನಂತ ಕುಮಾರ್ ಹೆಗಡೆ ಹೊನ್ನಾವರಕ್ಕೆ ಬಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸಾವಿರಾರು ಜನ ಸೇರಿದ ಶವದ ಯಾತ್ರೆಯಲ್ಲಿ ಸ್ವತಃ ಸಂಸದ ಅನಂತ ಕುಮಾರ್ ಹೆಗಡೆ ಭಾಗವಹಿಸಿ ಪರೇಶ ದೇಹದಿಂದ ಚೆಲ್ಲಿದ ಪ್ರತಿ ರಕ್ತದ ಬಿಂದುವಿಗೂ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ಶಪಥ ಮಾಡಿದ್ದರು. ಜನರ ಆಗ್ರಹದಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ತನಿಖೆಯನ್ನು ಕೇಂದ್ರದ ಸಿಬಿಐ ತಂಡಕ್ಕೆ ವಹಿಸಿತ್ತು. ಸಿಬಿಐ 2018ರ ಏಪ್ರಿಲ್ನಿಂದ ತನಿಖೆಯನ್ನು ಕೈಗೆತ್ತಿಕೊಂಡು 250ಕ್ಕೂ ಹೆಚ್ಚು ಸಾಕ್ಷಿದಾರರಿಂದ ಸಾಕ್ಷಿಯನ್ನು ಪಡೆದಿತ್ತು. ವೈಜ್ಞಾನಿಕವಾಗಿ ತನಿಖೆ ಪೂರ್ಣಗೊಳಿಸಿ ನಾಲ್ಕುವರೆ ವರ್ಷಗಳ ಬಳಿಕ ತನ್ನ ಅಂತಿಮ ವರದಿಯನ್ನು ಇದೀಗ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಬಿಜೆಪಿ ಸರ್ಕಾದ ವಿರುದ್ಧ ಕಾಂಗ್ರೆಸ್ ಆಕ್ರೋಶ
ವೈದ್ಯಕೀಯ ತಂಡ ಹಾಗೂ ವಿಧಿವಿಜ್ಞಾನ ಪರಿಣಿತರು ನೀಡಿದ ವೈಜ್ಞಾನಿಕ ವರದಿಯನ್ನು ಆಧರಿಸಿ (ಎಂಟಿ ಮೋರ್ಟಮ್ ಡ್ರೋವಿಂಗ್) ಎಂಬ ಶರಾದೊಂದಿಗೆ ಪರೇಶ್ ಸಾವಿನ ರಹಸ್ಯವನ್ನು ಬೇಧಿಸಿದ್ದಾರೆ. ಆದರೆ ಇದೀಗ ಪರೇಶ್ ಮೆಸ್ತಾ ಸಾವಿನ ಕುರಿತು ಸಿಬಿಐ ನೀಡಿದ ಅಂತಿಮ ವರದಿ ರಾಜಕೀಯ ಕೆಸೆರೆರಚಾಟಕ್ಕೆ ಕಾರಣವಾಗಿದೆ. ಅಂದು ಪರೇಶ್ ಮೆಸ್ತಾ ಸಾವನ್ನು ಅನ್ಯಕೋಮಿನವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕರಾವಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರ ಹತ್ಯೆಗಳು ಆಗುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪರೇಶ್ ಮೆಸ್ತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ಸಿಬಿಐ ಸತ್ಯವನ್ನು ಜನರ ಎದುರು ತೆರೆದಿಟ್ಟಿದೆ. ಅಭಿವೃದ್ಧಿಪರ ರಾಜಕೀಯ ಮಾಡಬೇಕಿದ್ದ ಬಿಜೆಪಿ ಇಲ್ಲದ ವಿಷಯವನ್ನು ಜನರ ತಲೆಯಲ್ಲಿ ತುಂಬಿ ಅಧಿಕಾರ ಪಡೆದುಕೊಂಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ಜನರಿಗೆ ಸತ್ಯ ಗೊತ್ತಾಗಿದೆ. "ಶಾಂತಿಯುತ ಜಿಲ್ಲೆಯಲ್ಲಿ ಎಂದೂ ಕಂಡರಿಯ ಗಲಭೆಗೆ ಕಾರಣವಾಗಿ ಸರ್ಕಾರ ಮಾತ್ರ ಅಲ್ಲದೆ, ಸಾರ್ವಜನಿಕರ ಆಸ್ತಿಪಾಸ್ತಿ ಹಾನಿಗೆ ಬಿಜೆಪಿ ಕಾರಣವಾಗಿತ್ತು. ಬಿಜೆಪಿಗೆ ಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ," ಎಂದು ಮಾಜಿ ಶಾಸಕ ಸತೀಶ್ ಸೈಲ್ ಎಚ್ಚರಿಸಿದ್ದಾರೆ.
ಆಕಸ್ಮಿಕ ಸಾವು ಎಂದು ವರದಿ
"2017ರಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ಸಾವಾಗಿದ್ದ ಪರೇಶ್ ಮೆಸ್ತಾ ಪ್ರಕರಣದ ತನಿಖೆ ನಡೆಸಿದ್ದು, ಇದೊಂದು ಆಕಸ್ಮಿಕ ಸಾವು ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ ಪರೇಶ್ ಮೆಸ್ತಾ ಸಾವಿನ ಸಂದರ್ಭದಲ್ಲಿ ಬಿಜೆಪಿ ಪಕ್ಷದವರು ಕರಾವಳಿ ಭಾಗದಲ್ಲಿ ಕೋಮು-ಗಲಭೆಗೆ ಕಾರಣೀಕರ್ತರಾಗಿ ಅಮಾಯಕರ ಮೇಲೆ ಪ್ರಕರಣ ದಾಖಲಿಸುವಂತೆ ಮಾಡಿದ್ದರು. ಇದೀಗ ಸಿಬಿಐ ಹೊನ್ನಾವರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ವರದಿ ಸಲ್ಲಿಸಿದೆ. ಜನರಲ್ಲಿ ಭೀತಿ ಸೃಷ್ಟಿಸಿ ಕೋಮು-ಗಲಭೆಗೆ ಕಾರಣೀಕರ್ತರಾಗಿ ಅಮಾಯಕನ ಸಾವಿನ ಮೇಲೆ ಅಧಿಕಾರ ಪಡೆದ ಬಿಜೆಪಿ ಪಕ್ಷದವರು ನಾಡಿನ ಜನರ ಕ್ಷಮೆ ಕೇಳಬೇಕು." ಎಂದು ಮಾಜಿ ಶಾಸಕ ಆರ್.ವಿ. ದೇಶಪಾಂಡೆ ಆಗ್ರಹಿಸಿದ್ದಾರೆ.
ಬಿಜೆಪಿ ವಿರುದ್ಧ ಶಾರದಾ ಶೆಟ್ಟಿ ಆರೋಪ
ಪರೇಶ್ ಮೆಸ್ತಾ ಸಾವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದ್ದು, ಗಲಭೆಗೆಯಿಂದ ಜಿಲ್ಲೆಯಲ್ಲಿ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದವರ ಮೇಲೂ ಪ್ರಕರಣ ದಾಖಲಾಗುವಂತೆ ಮಾಡಿತ್ತು. "ಇದೆಲ್ಲವೂ ಗೊತ್ತಿದ್ದರೂ ಬಿಜೆಪಿ ಕಣ್ಣಿಲ್ಲದ ಕುರುಡರಂತೆ ವರ್ತಿಸಿತ್ತು. ಅಲ್ಲದೆ ತೀರ್ಪು ವಿಳಂಬವಾಗಿ ಬರುವುದಕ್ಕೂ ಬಿಜೆಪಿ ರಾಜಕೀಯ ಪ್ರಭಾವ ಬಳಸಿರುವ ಶಂಕೆ ಇದೆ. ಜನರು ಇದೆಲ್ಲವನ್ನು ವಿಚಾರ ಮಾಡುತ್ತಾರೆ. ಮುಂದಿನ ಚುನಾವಣೆ ವೇಳೆಗೆ ತಕ್ಕ ಪಾಠ ಕಲಿಸಲಿದ್ದಾರೆ," ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ವಿರುದ್ಧ ಹರಿಹಾಯ್ದ ಕಾಂಗ್ರಸ್
ಇನ್ನು "ಇತ್ತೀಚೆಗೆ ಬಿಜೆಪಿ ನಾಯಕರು ಮೆಸ್ತಾ ಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿ ಸಿದ್ದರಾಮಯ್ಯ ಅವರು ಎಂದು ಹೇಳಿದ್ದರು. ಆದರೆ ಇದೀಗ ಮೊದಲ ಆರೋಪಿಯನ್ನು ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಮಾಡಬೇಕು. ಎರಡನೇ ಆರೋಪಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಎಂದು ಹೇಳಬೇಕು," ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣಾ ನಾಯ್ಕ ಸುದ್ದಿಗೋಷ್ಠಿ ನಡೆಸಿ ಪರೇಶ್ ಸಾವಿನ ಬಳಿಕ ಗಲಭೆಯಲ್ಲಿ ಅಮಾಯಕ ಹಿಂದೂ ಯುವಕರು ಕಷ್ಟಕ್ಕೆ ಸಿಲುಕುವಂತಾಗಿದೆ. ಆದರೆ ಗಲಭೆ ಬಳಿಕ ಇದೀಗ ಬಿಜೆಪಿ ಅಧಿಕಾರ ಅನುಭವಿಸುತ್ತಿದೆ. "ಅಮಾಯಕ ಯುವಕನ ಸಾವನ್ನು ಪ್ರಚಾರಕ್ಕೆ ಬಳಸಿಕೊಂಡು ಕ್ಷುಲ್ಲಕ ಕೆಲಸ ಮಾಡಿತ್ತು. ಅಮಾಯಕ ಯುವಕರನ್ನು ಕಷ್ಟಕ್ಕೆ ದೂಡಿದ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಲಿ," ಎಂದು ಸವಾಲು ಹಾಕಿದ್ದಾರೆ.
ಇನ್ನು ಪರೇಶ್ ಮೆಸ್ತಾ ತನಿಖಾ ವರದಿ ಬಂದ ಬಳಿಕ ಕಾಂಗ್ರೆಸ್ ನಾಯಕರು ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದರು. ಬಿಜೆಪಿ ನಾಯಕರು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಇನ್ನೇನು ಕೆಲ ತಿಂಗಳುಗಳಲ್ಲಿ ಚುನಾವಣೆ ಬರುವ ಹಿನ್ನೆಲೆಯಲ್ಲಿ ಇದೇ ವಿಷಯ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಎದ್ದು ಕಾಣುತ್ತಿದೆ.