ವೀರಶೈವರಿಗೆ ಸೂಕ್ತ ಸ್ಥಾನ ನೀಡಲು ಸಿಎಂ ಸಿದ್ದುಗೆ ಪತ್ರ
ತುಮಕೂರು, ಡಿಸೆಂಬರ್, 25: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವೀರಶೈವ ಸಮಾಜವನ್ನು ಕಡೆಗಣಿಸುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಹಿರಿಯ ಉಪಾಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ ಆರೋಪಿಸಿದ್ದಾರೆ. ಅಲ್ಲದೇ ವೀರಶೈವರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ದಕ್ಷ ಅಧಿಕಾರಿ ವಿ. ಉಮೇಶ್ ಅವರನ್ನ ಪರಿಗಣಿಸಬೇಕು. ಹೊರ ರಾಜ್ಯದ ಅಧಿಕಾರಿಗಳಿಗೆ ಮಣೆ ಹಾಕುವುದರಿಂದ ರಾಜ್ಯ ಮತ್ತು ಸಮಾಜಕ್ಕೆ ಹಾನಿ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.[ಸಾಲ ಮಾಡುವುದರಲ್ಲಿ ದಾಖಲೆ ಮಾಡಿದ ಸಿದ್ದರಾಮಯ್ಯ!]
ಕನ್ನಡದ ಮೇಲೆ ನಿಜ ಅಭಿಮಾನ ಇರುವ ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಪುರಸ್ಕರಿಸಬೇಕು. ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ಪರಿಚಯವುಳ್ಳ ಕನ್ನಡಿಗರು ಈ ಹುದ್ದೆಗೆ ಬಂದರೆ ಹೆಚ್ಚಿನ ಪ್ರಯೋಜನ ರಾಜ್ಯಕ್ಕಾಗುತ್ತದೆ ಎಂದು ಹೇಳಿದ್ದಾರೆ.[ಸಿದ್ದರಾಮಯ್ಯ ಸರ್ಕಾರವನ್ನು ಕಾಡಿದ 10 ವಿವಾದಗಳು]
ಸಮಾಜದ ಶಾಸಕರಿಗೆ ಮಂತ್ರಿಮಂಡಲ ವಿಸ್ತರಣೆಯಲ್ಲಿ, ನಿಗಮಮಂಡಳಿ ನೇಮಕಾತಿಯಲ್ಲಿ, ಪರಿಷತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭಗಳಲ್ಲಿ ಸೂಕ್ತ ಸ್ಥಾನ ನೀಡಲಾಗಿಲ್ಲ. ಇತ್ತೀಚೆಗೆ ನೇಮಿಸಲಾದ 11 ಜನ ಸಂಸದೀಯ ಕಾರ್ಯದರ್ಶಿಗಳಲ್ಲಿ ಸಮಾಜದ ಯಾರನ್ನು ಪರಿಗಣಿಸಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತಿ, ವಿದ್ವಾಂಸ, ಸಂಶೋಧಕ, ಪ್ರಗತಿಪರ ಚಿಂತಕ ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆಯ ತನಿಖೆಯಲ್ಲಿ ವಿಳಂಬ ಅನುಸರಿಸಲಾಗುತ್ತಿದೆ. ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ಅವರನ್ನು ಕಾರಣವಿಲ್ಲದೇ ಪದಚ್ಯುತಿಗೊಳಿಸಲು ತೆಗೆದುಕೊಂಡಿರುವ ತೀರ್ಮಾನ ಅಸಮಾಧಾನ ತಂದಿದೆ ಎಂದು ಹೇಳಿದ್ದಾರೆ.