ವೀರಶೈವ ಲಿಂಗಾಯತರ ಮತಾಂತರ ತಡೆಗೆ ಶಾಸಕ ಶಾಮನೂರು ಶಿವಶಂಕರಪ್ಪ ಪತ್ರ
ದಾವಣಗೆರೆ, ನವೆಂಬರ್ 22: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವುದರ ಕುರಿತು ಚರ್ಚೆ ತೀವ್ರಗೊಂಡಿದೆ. ಇದರ ಮಧ್ಯೆ ಅನ್ಯಧರ್ಮಗಳಿಗೆ ಮತಾಂತರ ಆಗುತ್ತಿರುವ ವೀರಶೈವ ಲಿಂಗಾಯತ ಸಮುದಾಯದರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪತ್ರ ಬರೆದಿದ್ದಾರೆ.
ವೀರಶೈವ ಲಿಂಗಾಯತರ ಮತಾಂತರಕ್ಕೆ ಕಡಿವಾಣ ಹಾಕಬೇಕು. ಲಿಂಗಾಯತರು ಮತಾಂತರ ಆಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾಗೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಬರೆದ ಪತ್ರದ ತಿರುಳನ್ನು ಮುಂದೆ ಓದಿ.
"ನಮ್ಮ ವೀರಶೈವ ಲಿಂಗಾಯತ ಧರ್ಮ ಪರಂಪರೆಯು ಅತ್ಯಂತ ಪ್ರಭಾವಿ, ಸಾತ್ವಿಕ, ತಾತ್ವಿಕ ನೆಲೆಯನ್ನು ಹೊಂದಿರುವುದರ ಕುರಿತು ನಾವೆಲ್ಲ ಸದಾಕಾಲ ಅಭಿಮಾನ ಮತ್ತು ಹೆಮ್ಮೆ ತಾಳಬೇಕು ಎಂಬುದು ಸರ್ವತಾ ಸತ್ಯದ ಮಾತು. ನಮ್ಮವರ ಒಗ್ಗಟ್ಟು, ಏಕತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ನಾವೆಲ್ಲರೂ ಹೊರಲೇಬೇಕಾಗಿದೆ.

ಆದರೆ ಇತ್ತೀಚಿನ ಮಾಧ್ಯಮಗಳ ವರದಿಯನ್ನು ನೋಡಿದಾಗ ನಮಗೆಲ್ಲ ಆತಂಕ ಮೂಡುತ್ತಿದೆ. ನಾಡಿನ ಕೆಲ ಭಾಗಗಳಲ್ಲಿ ನಮ್ಮವರು ಕ್ರಿಶ್ಚಿಯನ್ ಮತ್ತಿತರ ಧರ್ಮಗಳಿಗೆ ಹಲವೆಡೆ ಪ್ರಲೋಭನೆಗಳಿಗೆ ಒಳಗಾಗಿ ಮತಾಂತರವಾಗುತ್ತಿರುವ ವಿಷಯ ನಮ್ಮನ್ನೆಲ್ಲ ಚಿಂತೆಗೀಡು ಮಾಡಿದೆ. ದೂರದೃಷ್ಟಿಯಿಲ್ಲದ, ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ವೈಯಕ್ತಿಕ ವಿಷಯಗಳಿಗಾಗಿ ತೊಂದರೆಯಲ್ಲಿರುವ ಅಮಾಯಕ ಮುಗ್ಧರು ಸಾಂದರ್ಭಿಕ ಒತ್ತಡಗಳಿಗೆ ಬಲಿಯಾಗಿ ನಮ್ಮ ಶ್ರೇಷ್ಠ ಪರಂಪರೆಯನ್ನು ಬಿಟ್ಟು ಅನ್ಯ ಧರ್ವವನ್ನು ಸ್ವೀಕರಿಸುತ್ತಿದ್ದಾರೆ ಎಂಬ ಸುದ್ದಿ ಆಘಾತಕಾರಿಯಾಗಿದೆ.
ಮಠ ಮಾನ್ಯಗಳೊಂದಿಗೆ ನಿರಂತರ ಸಂಪರ್ಕ:
"ತಮ್ಮ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮತಾಂತರ ಪ್ರಕರಣಗಳು ನಡೆಯದಂತೆ ತಾವೆಲ್ಲ ಸ್ಥಳೀಯ ಮಠ-ಮಾನ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಮತಾಂತರಗಳು ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಅಲ್ಲದೇ ಒತ್ತಡಗಳಿಗೆ ಬಲಿಯಾದ ನಮ್ಮ ಜನರನ್ನು ಮರಳಿ ನಮ್ಮ ಧರ್ಮದ ವ್ಯಾಪ್ತಿಗೆ ತರುವ ಕುರಿತು ಕಾರ್ಯಕ್ರಮಗಳನ್ನು ರೂಪಿಸಬೇಕು. ಸಂಗಡವೇ ಮಹಾಸಭೆಯ ಕೇಂದ್ರ ಕಚೇರಿಗೆ ಈ ಕುರಿತು ಮಾಹಿತಿ ಮತ್ತು ವರದಿ ನೀಡುವುದು. ಇದು ಜರೂರು(ತುರ್ತು) ಕ್ರಮವೆಂದು ಪರಿಗಣಿಸಬೇಕೆಂದು ತಮಗೆಲ್ಲ ತಿಳಿಸುತ್ತೇವೆ," ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications