ಪಂಚಮಸಾಲಿ ಮೀಸಲಾತಿ ಹೋರಾಟ 'ಮಠ' ಸೇರಿದ್ದು 10 ಕೋಟಿ ಡೀಲ್ ನಿಂದ?
2A ಮೀಸಲಾತಿಗೆ ಒತ್ತಾಯಿಸಿ ಕಳೆದ ವರ್ಷದ ಜನವರಿ 14ರ ಮಕರ ಸಂಕ್ರಮಣದಂದು ಕೂಡಲಸಂಗಮದಿಂದ ಆರಂಭವಾಗಿದ್ದ ಪಾದಯಾತ್ರೆ 708 ಕಿ. ಮೀ. ಕ್ರಮಿಸಿ ಬೆಂಗಳೂರಿನಲ್ಲಿ ಸಂಪನ್ನಗೊಂಡಿತ್ತು. ಅರಮನೆ ಮೈದಾನದಲ್ಲಿ ಹತ್ತು ಲಕ್ಷ ಜನರು ಸೇರಿ ಸಮುದಾಯದ ಶಕ್ತಿ ಪ್ರದರ್ಶನ ಮಾಡಲಾಗಿತ್ತು. ಬಿಜೆಪಿ ಹೈಕಮಾಂಡ್ ಹಣೆಯಲು ಆರಂಭದಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರೇ ಪಂಚಮಸಾಲಿ ಹೋರಾಟಕ್ಕೆ ಪರೋಕ್ಷ ಬೆಂಬಲ ಕೊಟ್ಟಿದ್ದರು. ಆ ಹೋರಾಟ ಅವರಿಗೇ ಸಂಕಷ್ಟ ತಂದೊಡ್ಡಿತ್ತು.
ಸಚಿವರಾಗಿದ್ದ ಮುರುಗೇಶ್ ನಿರಾಣಿ ಮತ್ತು ಸಿ. ಸಿ. ಪಾಟೀಲ್ ಸಮಾವೇಶದ ಸ್ಥಳಕ್ಕೆ ಬಂದು ಸರಕಾರದ ಭರವಸೆ ನೀಡುವ ಮೂಲಕ ಸಾಗಹಾಕಲು ಪ್ರಯತ್ನಿಸಿದ್ದರು. ಆದರೆ, ಮೀಸಲಾತಿ ಘೋಷಣೆಯ ಹೊರತಾಗಿ ಮಠಕ್ಕೆ ವಾಪಸ್ ತೆರಳುವುದಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ಸಂಬಂಧದ ಹೋರಾಟವನ್ನು ಫ್ರೀಡಂ ಪಾರ್ಕಿಗೆ ಶಿಫ್ಟ್ ಮಾಡಿದ್ದರು. ಅಷ್ಟರೊಳಗೆ ಪಾದಯಾತ್ರೆಯಲ್ಲಿ ಮಂಚೂಣಿಯಲ್ಲಿದ್ದ ಸ್ವಾಮೀಜಿಗಳ ನಡುವೆ ಬಿರುಕು ಉಂಟಾಗಿತ್ತು.
ಮೀಸಲಾತಿಗೆ ಆರಂಭದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮುರುಗೇಶ್ ನಿರಾಣಿ, ಸಿ. ಸಿ. ಪಾಟೀಲ್ ಮುಂತಾದವರು ಈ ಹೋರಾಟದಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದರು. ಮಂಚೂಣಿಯಲ್ಲಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ಸ್ವಲ್ಪದಿನ ದೂರ ಉಳಿದರು. ಅಲ್ಲಿಗೆ, ಒಗ್ಗಟ್ಟು ಒಡೆಯುವ ಕೆಲಸ ಒಂದು ಹಂತಕ್ಕೆ ಯಶಸ್ವಿಯಾಯಿತು.
ಇದಾದ ನಂತರ ಹಲವು ಗಡುವನ್ನು ನೀಡಿದರೂ, ಸರಕಾರದಿಂದ ಸರಿಯಾಗಿ ಸ್ಪಂದನೇ ಸಿಗಲೇ ಇಲ್ಲ. ಇನ್ನೊಂದು ಕಡೆ, ಮೀಸಲಾತಿ ಸಂಬಂಧ ಹಲವು ಸಭೆ/ ಎಚ್ಚರಿಕೆ ನೀಡಿದರೂ, ಹೋರಾಟದ ತೀವ್ರತೆ ಹಿಂದಿನಂತಿರಲಿಲ್ಲ. ಇವೆಲ್ಲದರ ನಡುವೆ, ಹತ್ತು ಕೋಟಿ ಡೀಲ್ ನಡೆದಿದೆ ಎನ್ನುವ ಸಮುದಾಯದ ನಾಯಕರೊಬ್ಬರ ಹೇಳಿಕೆ, ಹೋರಾಟದ ಕಾವು ಕಮ್ಮಿಯಾಗಲು ಕಾರಣವಾಯಿಯೇ ಎನ್ನುವ ಪ್ರಶ್ನೆ ಎದ್ದೇಳುವಂತೆ ಮಾಡಿದೆ.
ಚಿತ್ರದುರ್ಗ; ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ
ನಮ್ಮ ಸಮುದಾಯದವರನ್ನು ನಿರ್ಲ್ಯಕ್ಷಿಸಿದರೆ ವಿಧಾನಸೌಧ ಮುತ್ತಿಗೆ
ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ಸಂಬಂಧ ಆಡಳಿತಾತ್ಮಕ ಸಭೆ ನಡೆಸಲು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಜೂನ್ 27ರ ಗಡುವನ್ನು ನೀಡಿದ್ದಾರೆ. "ಹಿಂದೆ ಮುಖ್ಯಮಂತ್ರಿಗಳು ಕೊಟ್ಟಿದ್ದ ಭರವಸೆಯನ್ನು ಈಡೇರಿಸಿಲ್ಲ. ನಾವು ಅವರನ್ನು ಬಿಟ್ಟರೆ ಮತ್ತೆ ಇನ್ಯಾರನ್ನು ಕೇಳಲು ಸಾಧ್ಯ? ಹಾಗಾಗಿ, ಅವರ ಮನೆಯ ಮುಂದೆ ಧರಣಿ ನಡೆಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಮುದಾಯದವರನ್ನು ನಿರ್ಲಕ್ಷಿಸಿದರೆ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ"ಎನ್ನುವ ಎಚ್ಚರಿಕೆಯನ್ನು ಸ್ವಾಮೀಜಿಗಳು ನೀಡಿದ್ದಾರೆ.
ಪಂಚಮಸಾಲಿ ಜಗದ್ಗುರು ಪೀಠದ ಜೊತೆಗೆ ಮೂರನೇ ಪೀಠ ಆರಂಭ
ಲಿಂಗಾಯತ ಸಮುದಾಯಕ್ಕೆ ಇದ್ದ ಕೂಡಲಸಂಗಮ ಲಿಂಗಾಯತ ಪೀಠ ಮತ್ತು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜೊತೆಗೆ ಮೂರನೇ ಪೀಠ ಆರಂಭವಾಗುವ ಮೂಲಕ ಮೀಸಲಾತಿ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿದುಕೊಂಡಿತು. ಸಚಿವ ನಿರಾಣಿಗೆ ಇಲ್ಲಿ ಪ್ರಥಮ ಗೌರವ ಲಭಿಸಿತು. ಇದರ ಜೊತೆಗೆ, "ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ನಮ್ಮ ಸಮುದಾಯಕ್ಕೆ ಮೀಸಲಾತಿ ನ್ಯಾಯಯುತವಾಗಿ ಸಿಗಬೇಕು. ಆದರೆ, ಅದಕ್ಕಾಗಿ ಅವಸರ ಪಟ್ಟರೆ ಸಂಕಷ್ಟ ಎದುರಿಸಬೇಕಾಗಿ ಬರಬಹುದು"ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ನೀಡಿದ ಹೇಳಿಕೆ ಸಮುದಾಯದ ಹೋರಾಟದ ಕಿಚ್ಚು ಕಮ್ಮಿಯಾಗುತ್ತಿದೆ ಎನ್ನುವುದನ್ನು ಸಾರುವಂತಿದೆ.
ಹರಿಹರ ಸ್ವಾಮೀಜಿಯ ಬಗ್ಗೆ ಎಚ್ಚರ ಎನ್ನುವ ಹೇಳಿಕೆ ಯತ್ನಾಳ್ ಕಡೆಯಿಂದ
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯ ಹಿರಿಯ ನಾಯಕ ಮತ್ತು ಮೀಸಲಾತಿ ಹೋರಾಟದಲ್ಲಿ ಮಂಚೂಣಿಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಎಷ್ಟು ಮಹತ್ವವಿದೆಯೋ ಗೊತ್ತಿಲ್ಲ. ಆದರೆ, ಅವರು ನೀಡಿದ ಹತ್ತು ಕೋಟಿ ಡೀಲ್ ಹೇಳಿಕೆ ಹೊಸ ತಿರುವನ್ನು ಪಡೆದು ಕೊಳ್ಳುವ ಸಾಧ್ಯತೆಯಿಲ್ಲದಿಲ್ಲ. "ಸಿಎಂ ಬೊಮ್ಮಾಯಿ ಹುಚ್ಚು ಸ್ವಾಮಿಯ ಬೆನ್ನು ಹತ್ತಿದರೆ, ಶಿಗ್ಗಾಂವ್ ನಲ್ಲಿ ನಮ್ಮ ಸಮುದಾಯ ಉಲ್ಟಾ ಹೊಡೆಯುತ್ತದೆ, ಐವತ್ತು ಸಾವಿರ ವೋಟ್ ಐತೆ, ಹುಷಾರ್" ಎಂದು ಪರೋಕ್ಷವಾಗಿ ಹರಿಹರ ಪೀಠದ ಸ್ವಾಮೀಜಿಯ ಬಗ್ಗೆ ಎಚ್ಚರ ಎನ್ನುವ ಹೇಳಿಕೆಯನ್ನು ಯತ್ನಾಳ್ ಸಿಎಂಗೆ ನೀಡಿದ್ದರು.
ಹತ್ತು ಕೋಟಿ ರೊಕ್ಕ ಇಸ್ಕೊಂಡು ನಮ್ಮ ಸ್ವಾಮೀಜಿಯೊಬ್ಬರು ಸುಮ್ಮನಾಗಿದ್ದಾರೆ
"ನಮ್ಮ ಸಮುದಾಯವನ್ನು ಒಡೆಯಲು ಹಲವರು ಪ್ರಯತ್ನಿಸುತ್ತಿದ್ದಾರೆ, ಹತ್ತು ಕೋಟಿ ರೊಕ್ಕ ಇಸ್ಕೊಂಡು ನಮ್ಮ ಸ್ವಾಮೀಜಿಯೊಬ್ಬರು ಸುಮ್ಮನಾಗಿದ್ದಾರೆ. ನಮ್ಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒಪ್ಪಿಕೊಂಡರೆ ಅವರಿಗೂ ಅಷ್ಟೇ ರೊಕ್ಕ ಬರುತ್ತೆ. ಪಾದಯಾತ್ರೆಯಲ್ಲಿ ಕೆಲವು ಸ್ವಾಮೀಜಿಗಳು ಭಾಗವಹಿಸಿ, ಯಾರನ್ನೋ ಮಂತ್ರಿ ಮಾಡಲು ನಾಟಕ ಮಾಡಿದರು. ಪಾದಯಾತ್ರೆಯ ವೇಳೆ ಕತ್ತಲಾಗುತ್ತಿದ್ದಂತೆಯೇ ಕಾರಿನಲ್ಲಿ ಕೂಡಿಕೊಳ್ಳುತ್ತಿದ್ದರು"ಎಂದು ಹರಿಹರ ಪೀಠದ ಸ್ವಾಮೀಜಿಯವರ ಹೆಸರನ್ನು ಉಲ್ಲೇಖಿಸದೇ ಯತ್ನಾಳ್ ಹೇಳಿದ್ದರು. ಯತ್ನಾಳ್ ಹೇಳಿಕೆಗೂ ಮೀಸಲಾತಿ ಹೋರಾಟ ತೀವ್ರತೆ ಕಳೆದುಕೊಂಡಿರುವುದಕ್ಕೂ ಒಂದಕ್ಕೊಂದು ಸಿಂಕ್ ಆಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.