ಜಿಲ್ಲೆಯ ಜನರ ಆಶೋತ್ತರ, ಬೇಡಿಕೆ ಆಲಿಸಿ ಪ್ರಣಾಳಿಕೆ ತಯಾರು: ಬೊಮ್ಮಾಯಿ
ತುಮಕೂರು, ಜನವರಿ 21: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿಯು ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗುವುದು. ಅದೇ ರೀತಿ ತುಮಕೂರಿನ ಜನರ ಆಶೋತ್ತರ, ಬೇಡಿಕೆಗಳನ್ನು ಆಲಿಸಿ ಪ್ರಣಾಳಿಕೆ ಸಿದ್ಧಪಡಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ತುಮಕೂರಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ದಿಂದ ಶನಿವಾರ ಆಯೋಜಿಸಿದ್ದ 'ವಿಜಯ ಸಂಕಲ್ಪ ಅಭಿಯಾನ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಲ್ಲಿ ಪಕ್ಷದ ಸದಸ್ಯತ್ವ ಪಡೆಯುವ ಅಭಿಯಾನ ಹೆಚ್ಚಿಸುವ ಜೊತೆಗೆ ಮಿಸ್ ಕಾಲ್ ಮೂಲಕ ಸದಸ್ಯತ್ವವನ್ನೂ ಪಡೆಯವ ಅವಕಾಶವನ್ನು ಸಾರ್ವಜನಿಕಗೊಳಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಿಳಿಸುವ ಕೆಲಸವನ್ನು ಬೂತ್ ಮಟ್ಟದ ಪದಾಧಿಕಾರಿಗಳು ಮಾಡಬೇಕಿದೆ ಎಂದು ಹುರಿದುಂಬಿಸಿದರು.
ಒಂಬತ್ತು ದಿನ ವಿಜಯ ಸಂಕಲ್ಪ ಅಭಿಯಾನ' ಇದಾಗಿದ್ದು, ಈ ವೇಳೆ ಕ್ಷೇತ್ರದಲ್ಲಿ ಸುಮಾರು 1ಲಕ್ಷ ಕಾರ್ಯಕರ್ತರ ನೋಂದಣಿ ಮಾಡುವ ಗುರಿ ಇದೆ. ಪ್ರತಿ ವಾರ್ಡ್ನಲ್ಲೂ ಅಭಿಯಾನ ನಡೆಯಬೇಕು. ಈ ಅಭಿಯಾನದ ಮೂಲಕ ಸಂಘಟನೆಗೆ ಬಲ ಬರುತ್ತದೆ. ಪಕ್ಷದ ಸದಸ್ಯತ್ವ ವಿಸ್ತಾರವಾಗುತ್ತದೆ.
ಪ್ರತಿಯೊಂದು ವಾರ್ಡ್ ನಲ್ಲಿ ವಿಜಯ ಸಂಕಲ್ಪ ಅಭಿಯಾನ ಪ್ರಾರಂಭಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ವಿಜಯ ಸಂಕಲ್ಪ ಅಭಿಯಾನವನ್ನು ವಿಜಯಪುರನಲ್ಲಿ ಉದ್ಘಾಟಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ವರಿಷ್ಠ ಅರುಣ್ ಸಿಂಗ್,ಸಚಿವರು ನಾನೂ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೈಗಾರೀಕರಣ, ಉದ್ಯೋಗ ಸೃಷ್ಟಿಗೆ ಆದ್ಯತೆ
ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರನ್ನು ಅಭಿವೃದ್ಧಿಪಡಿಸಲಾಗುವುದು. ಬಡವರಿಗಾಗಿ ಮನೆ ನಿರ್ಮಾಣ, ಧಾರವಾಡ ಮತ್ತು ತುಮಕೂರು ಜಿಲ್ಲೆಯ ವಿಶೇಷ ಅಧಿಕಾರದಡಿ ಉದ್ಯೋಗ ನೀಡುವ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ತುಮಕೂರಿನಲ್ಲಿ ಯುವಕರಿಗೆ ಉದ್ಯೋಗ ನೀಡುವಂತಹ ಕೈಗಾರಿಕೆಗಳಿಗೆ ಎಲ್ಲ ಕ್ಲಿಯರೆನ್ಸ್ ಗಳನ್ನು ನೀಡುವ ಅಧಿಕಾರವನ್ನು ಎಸ್ಐಆರ್ ಹೊಂದಿರುತ್ತದೆ. ತುಮಕೂರಿನಲ್ಲಿ ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.
ಸರ್ಕಾರದಿಂದ ಸಾಕಷ್ಟು ಅಭಿವೃದ್ದಿ ಕೆಲಸ
ಸರ್ಕಾರ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಮುಂದಿನ ಆಗಸ್ಟ್ ಒಳಗೆ ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂ. ನೀಡಲಾಗಿದೆ. ರೈತರ , ಮೀನುಗಾರರು ,ರೈತ ಕಾರ್ಮಿಕರು. ನೇಕಾರರು, ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾ ನಿಧಿ, ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 5 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ, ಭೂ ರಹಿತ ರೈತ ಕೂಲಿಕಾರರಿಗೆ ಮಕ್ಕಳ ಆರೈಕೆಗಾಗಿ 4,000 ಅಂಗನವಾಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳ 8,000 ಶಾಲಾ ಕೊಠಡಿಗಳ ನಿರ್ಮಾಣದ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ ಎಂದರು.
ಸರ್ವ ಸಮಾಜಗಳಿಗೆ ನ್ಯಾಯ: ಸಿಎಂ
ರಾಜ್ಯದಲ್ಲಿ ಮೀಸಲಾತಿ ಹೆಚ್ಚಳದ ಜೊತೆಗೆ 100 ಅಂಬೇಡ್ಕರ್ ಹಾಸ್ಟೆಲ್ ಹಾಗೂ 50 ಕನಕದಾಸ ಹಾಸ್ಟೆಲ್ ಗಳ ನಿರ್ಮಾಣ, 5 ಮೆಗಾ ಹಾಸ್ಟೆಲ್ ಗಳು, 29 ಸಾವಿರ ಕೋಟಿ ರೂ.ಗಳನ್ನು ಎಸ್ಸಿಎಸ್ಪಿಟಿಎಸ್ಪಿ ಯೋಜನೆಗಳಿಗೆ ನೀಡಲಾಗಿದೆ. ಎಸ್ಸಿ ಎಸ್ ಟಿ ಸಮುದಾಯಗಳಿಗೆ 75 ಯೂನಿಟ್ ಉಚಿತ ವಿದ್ಯುತ್, ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ತಲಾ 5 ಲಕ್ಷ ಮಹಿಳೆಯರು ಹಾಗೂ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆಯನ್ನು ಫೆಬ್ರವರಿ ತಿಂಗಳಿನಿಂದ ಪ್ರಾರಂಭಿಸಲಾಗುವುದು. ಪ್ರತಿ ಗ್ರಾಮ ಹಾಗೂ ವಾರ್ಡ್ ನಲ್ಲಿ ಸ್ತ್ರೀ ಶಕ್ತಿ ಸಂಘಕ್ಕೆ ಉತ್ಪನ್ನಗಳ ತಯಾರಿಗೆ ಆರ್ಥಿಕ ಸಹಾಯ ಹಾಗೂ ಮಾರುಕಟ್ಟೆ ಜೋಡಣೆ ಮಾಡಲಾಗುವುದು ಎಂದು ಹೇಳಿದರು.
ಬೂತ್ ಮಟ್ಟದಲ್ಲಿ ಸಶಕ್ತಿಕರಣ
ಜನಸಂಕಲ್ಪ ಯಾತ್ರೆಯನ್ನು ವಿಜಯ ಸಂಕಲ್ಪ ಯಾತ್ರೆಯನ್ನಾಗಿಸಲು ಬೂತ್ ಮಟ್ಟದಲ್ಲಿ ಸಶಕ್ತೀಕರಣ ಮಾಡಲಾಗಿದೆ. ಬೂತ್ ಮಟ್ಟದಲ್ಲಿ ಸಮಿತಿಗಳ ರಚಿಸಿದ್ದು, ಅಭಿಯಾನದಡಿ ಮುಖಂಡರು ಮಿಸ್ ಕಾಲ್ ಮಾಡುವವರಿಗೆ ಪಕ್ಷದ ಸದಸ್ಯತ್ವ ನೀಡುತ್ತಿದ್ದಾರೆ. ಸದಸ್ಯತ್ವ ನವೀಕರಣವು ನಡೆಯುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ವರಿಷ್ಠರು ನೀಡಲಿದ್ದಾರೆ. ನಾಲ್ಕು ದಿಕ್ಕಿನಿಂದಲೂ ರಥಯಾತ್ರೆಯನ್ನು ಆರಂಭಿಸಲಾಗುವುದು ತಿಳಿಸಿದರು.